ಬೆಂಗಳೂರು: ‘ಐ.ಟಿ ದಾಳಿ ದೊಡ್ಡ ಕಲ್ಲುಬಂಡೆ ಇದ್ದಂಗೆ. ಅದರಲ್ಲಿ ನಾನು ಚಿಕ್ಕದಾದ ಬೆಣಚುಕಲ್ಲು ಅಷ್ಟೇ. ನನ್ನಿಂದ ಸಣ್ಣ ಅಳಿಲಿನಷ್ಟು ತಪ್ಪಾಗಿದೆ. ಭವಿಷ್ಯದಲ್ಲಿ ಈ ತಪ್ಪು ಮರುಕಳಿಸದಂತೆ ಮುಂಜಾಗ್ರತೆವಹಿಸುತ್ತೇನೆ’ ಎಂದು ನಟ ಸುದೀಪ್ ಪ್ರತಿಕ್ರಿಯಿಸಿದರು.
ಐ.ಟಿ ದಾಳಿ ಹಿನ್ನೆಲೆಯಲ್ಲಿ ತೆಲುಗಿನ ‘ಸೈರಾ ನರಸಿಂಹರೆಡ್ಡಿ’ ಚಿತ್ರದ ಶೂಟಿಂಗ್ ಅನ್ನು ಮೊಟಕುಗೊಳಿಸಿ ಇಲ್ಲಿನ ಕ್ವೀನ್ಸ್ ರಸ್ತೆಯ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಸೋಮವಾರ ವಿಚಾರಣೆಗೆ ಹಾಜರಾಗಿದ್ದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ನನ್ನ ಮನೆ ಮೇಲೆ ಐ.ಟಿ ದಾಳಿ ನಡೆದ ವೇಳೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿ ಸಹಿ ಮಾಡಿದ್ದೆ. ಈ ಹೇಳಿಕೆಯನ್ನು ದೃಢೀಕರಿಸಲು ಅಧಿಕಾರಿಗಳು ಕರೆದಿದ್ದರು. ಹಾಗಾಗಿ, ಬಂದಿದ್ದೇನೆ. ವಿಚಾರಣೆ ಇನ್ನು ಮುಂದೆ ಆರಂಭವಾಗಲಿದೆ. ನಮ್ಮ ಆಡಿಟರ್ಗೆ ಪವರ್ ಆಫ್ ಅಟಾರ್ನಿ ನೀಡಿರುವೆ. ಮುಂದಿನ ದಿನಗಳಲ್ಲಿ ನಡೆಯುವ ವಿಚಾರಣೆಗೆ ಅವರೇ ಹಾಜರಾಗುತ್ತಾರೆ’ ಎಂದು ತಿಳಿಸಿದರು.
‘ಇದು ಆದಾಯ ತೆರಿಗೆ ರೇಡ್ ಅಲ್ಲ. ಇದಕ್ಕೆ ಆದಾಯ ತೆರಿಗೆ ಸರ್ಚ್ ಎಂದು ಕರೆಯುತ್ತಾರೆ. ನಮ್ಮಿಂದ ಎಲ್ಲೋ ಸಣ್ಣದೊಂದು ತಪ್ಪಾಗಿರಬಹುದು. ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ. ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸುದೀಪ್ ನಟನೆಯ ಬಹುನಿರೀಕ್ಷಿತ ‘ಪೈಲ್ವಾನ್’ ಸಿನಿಮಾದ ಕನ್ನಡ ಟೀಸರ್ ಸಂಕ್ರಾಂತಿ ಹಬ್ಬ(ಇದೇ 15)ದಂದು ಬಿಡುಗಡೆಯಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.