ಬೆಂಗಳೂರು: ಜೂ.ಚಿರುವಿಗೆ ಇದೀಗ ಐದು ತಿಂಗಳು ತುಂಬಿದೆ. ಅವನು ಈ ಚಿತ್ರರಂಗಕ್ಕೆ ಬಂದೇ ಬರುತ್ತಾನೆ. ಅವನ ಅಪ್ಪನ ಆಸೆಯನ್ನು ತೀರಿಸುತ್ತಾನೆ ಎಂದು ನಟ ಸುಂದರ್ ರಾಜ್ ಹೇಳಿದರು.
ದಿವಂಗತ ನಟ ಚಿರಂಜೀವಿ ಸರ್ಜಾ ಅವರು ಅಭಿನಯಿಸಿದ್ದ ‘ರಣಂ’ ಚಿತ್ರವು ಮಾರ್ಚ್ 26ರಂದು ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸುಂದರ್ ರಾಜ್, ‘ಇದು ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರವಲ್ಲ. ಇಲ್ಲಿಂದ ಚಿರಂಜೀವಿ ಆಟ ಪ್ರಾರಂಭ. ಚಿರಂಜೀವಿ ಒಮ್ಮೆ ‘ನಾನು ಫಿನಿಕ್ಸ್ ಹಕ್ಕಿಯಂತೆ. ನಾನು ಯಾವತ್ತೂ ಸಾಯುವುದಿಲ್ಲ. ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ’ ಎಂದಿದ್ದ. ಯಾಕೆ ಬದುಕಿದ್ದಾಗಲೇ ಆ ಮಾತನ್ನು ಆತ ಹೇಳಿದ ಎಂದು ನನಗೆ ಇನ್ನೂ ತಿಳಿದಿಲ್ಲ. ಆದರೆ, ಆತ ಬದುಕಿದ್ದ ಅಷ್ಟೂ ದಿನವೂ, ನಗುತ್ತಾ, ಸಂತೋಷವಾಗಿ, ಸತ್ಯವನ್ನೇ ಮಾತನಾಡುತ್ತಾ ಕೊನೆಯುಸಿರುಬಿಟ್ಟ. ಅಂತಹ ಸಾವು ಯಾರಿಗೂ ಬರುವುದಿಲ್ಲ. ಒಂದು ಸೆಕೆಂಡ್ ಕೂಡಾ ಇರಲಿಲ್ಲ. ಮನೆಯಿಂದ ಆಸ್ಪತ್ರೆಗೆ ಕೇವಲ ಮೂರು ನಿಮಿಷದಲ್ಲಿ ಹೋಗಿದ್ದೆವು. ಆಸ್ಪತ್ರೆಯ ಬಾಗಿಲಲ್ಲಿ ಆತ ಕೊನೆಯುಸಿರೆಳೆದ. 55 ನಿಮಿಷ ಪ್ರಯತ್ನಪಟ್ಟೆವು. ಉಳಿಸಿಕೊಳ್ಳಲು ಆಗಿಲ್ಲ’ ಎಂದು ಭಾವುಕರಾದರು.
‘ರಣಂ ಚಿತ್ರವು ಚೆನ್ನಾಗಿ ಬರಬೇಕು. ಚಿತ್ರದ ವಿಷಯ ಚೆನ್ನಾಗಿದೆ. ಎಲ್ಲ ಕಲಾವಿದರಿಗೆ ಸಾಮಾಜಿಕ ಕಳಕಳಿ ಇರಬೇಕು. ಆ ವಿಚಾರದಲ್ಲಿ ಡಾ.ರಾಜ್ಕುಮಾರ್ ನಮಗೆ ಮಾದರಿ. ಅವರ ಜೊತೆ ಇಡೀ ಕರ್ನಾಟಕವೇ ಜೊತೆಯಾಗಿ ನಿಂತಿತು. ನಟ ಚೇತನ್ ಅವರೂ ರೈತರ ಪರವಾಗಿ ನಿಂತಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.