ಒಂದು ಬೊಂಬೆಯ ಹಿಂದೆ ಸಾಗುವ ಕಥೆ ‘ಸುವರ್ಣ ಸುಂದರಿ’. ಬೊಂಬೆಯನ್ನು ಕೇಂದ್ರವಾಗಿ ಇರಿಸಿಕೊಂಡು ಕನ್ನಡದಲ್ಲಿ ಹಲವು ಕಥೆಗಳು ಬಂದಿವೆ. ಹಾಗೆಯೇ ಜನ್ಮಾಂತರಕ್ಕೆ ಸಂಬಂಧಿಸಿದ ಕಥೆಗಳೂ ಕನ್ನಡ ಸಿನಿಮಾ ಲೋಕದಲ್ಲಿ ಹಲವಿವೆ. ಆದರೂ ‘ಸುವರ್ಣ ಸುಂದರಿ ಅವೆಲ್ಲಕ್ಕಿಂತ ಭಿನ್ನವಾದ ಕಥೆ ಹೊಂದಿದೆ’ ಎಂದು ಚಿತ್ರತಂಡ ಹೇಳಿದೆ.
ಈ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ಸಾಕ್ಷಿ ಚೌಧರಿ ಈ ಸಿನಿಮಾ ಮೂಲಕ ಕನ್ನಡ ಸಿನಿಲೋಕ ಪ್ರವೇಶಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ ಎಂ.ಎಸ್.ಎನ್. ಸೂರ್ಯ ಸುದ್ದಿಗೋಷ್ಠಿ ಕರೆದಿದ್ದರು.
‘ಇದು ಸೂಪರ್ನ್ಯಾಚುರಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಸಿನಿಮಾ. ನಾಲ್ಕು ತಲೆಮಾರುಗಳ, ನಾಲ್ಕು ಕಾಲಘಟ್ಟಗಳ ಕಥೆ ಇದರಲ್ಲಿ ಇದೆ. ಇಂಥದ್ದೊಂದು ಸಿನಿಮಾ ದಕ್ಷಿಣ ಭಾರತದಲ್ಲಿ ಬರುತ್ತಿರುವುದು ಇದೇ ಮೊದಲಿರಬಹುದು’ ಎಂದರು ಸೂರ್ಯ. ಸಿನಿಮಾ ನೋಡಲು ಬಂದ ಪ್ರತಿ ವೀಕ್ಷಕನೂ ಥ್ರಿಲ್ ಆಗುತ್ತಾನೆ ಎಂಬ ಭರವಸೆ ಸಹ ನೀಡಿದರು.
ಈ ಚಿತ್ರದಲ್ಲಿ ಹಿರಿಯ ನಟಿ ಜಯಪ್ರದಾ ಅವರೂ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಅಂದಹಾಗೆ, ‘ಸುವರ್ಣ ಸುಂದರಿ’ ಎನ್ನುವುದು ಮೂರು ಕಣ್ಣುಗಳಿರುವ ಒಂದು ಗೊಂಬೆ. ಚಿತ್ರದ ಕಥೆ ಸಂಪೂರ್ಣ ಕಾಲ್ಪನಿಕ. ಕಾಲಖಲ್ ಎನ್ನುವ ಸಾಮ್ರಾಜ್ಯದಲ್ಲಿ ಕಥೆ ಆರಂಭ ಪಡೆಯುತ್ತದೆ. ನಟ ಸಾಯಿಕುಮಾರ್ ಅವರು ಪೊಲೀಸ್ ಅಧಿಕಾರಿಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಚಿತ್ರ ತಂಡದ ಶೇಕಡ 80ರಷ್ಟು ಜನ ಕನ್ನಡಿಗರು’ ಎನ್ನುವುದು ಸಿನಿತಂಡದ ಹೇಳಿಕೆ. ಮೊದಲು ಕನ್ನಡದಲ್ಲಿ ಚಿತ್ರ ಬಿಡುಗಡೆ ಆಗುತ್ತದೆ. ನಂತರ ತೆಲುಗಿನಲ್ಲಿ ಕೂಡ ಬಿಡುಗಡೆ ಆಗಲಿದೆ.
‘ಚಿತ್ರದ ಬಿಡುಗಡೆಗೆ ನಾವು ಕಾಯುತ್ತಿದ್ದೆವು. ಒಂದು ಪ್ರತಿಭಾವಂತ ತಂಡ ಈ ಚಿತ್ರವನ್ನು ರೂಪಿಸಿದೆ. ವೀಕ್ಷಕರು ಚಿತ್ರವನ್ನು ಪ್ರೀತಿಸುವುದು ಖಚಿತ. ನಾನು ಈ ಚಿತ್ರದಲ್ಲಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತೇನೆ’ ಎಂದರು ಸಾಕ್ಷಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.