ವೈಷ್ಣವ್ ತೇಜ್ ಹಾಗೂ ಕೃತಿ ಶೆಟ್ಟಿ ಅಭಿನಯದ ತೆಲುಗಿನ ‘ಉಪ್ಪೆನಾ’ ಚಿತ್ರ ಈ ವರ್ಷದ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಒಂದು. ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರ ಅನ್ಯ ಭಾಷೆಯ ಸಿನಿ ಪ್ರೇಕ್ಷಕರನ್ನೂ ಸೆಳೆದಿದೆ. ಅದ್ಭುತ ಪ್ರೇಮಕಥಾ ಹಿನ್ನೆಲೆಯಳ್ಳ ಈ ಸಿನಿಮಾ ಹಲವರ ಹೃದಯ ಗೆದ್ದಿದೆ. ಅಲ್ಲದೇ ಇತರ ಭಾಷೆಯ ಸಿನಿ ನಿರ್ಮಾಪಕರು ಇದನ್ನು ರಿಮೇಕ್ ಮಾಡುವ ಕುರಿತು ಯೋಚಿಸುತ್ತಿದ್ದಾರೆ.
ಮೂಲಗಳ ಪ್ರಕಾರ ಕಾಲಿವುಡ್ನ ಟಾಪ್ ನಟರೊಬ್ಬರ ಮಗ ಈ ಸಿನಿಮಾದ ರಿಮೇಕ್ ಮೂಲಕ ನಾಯಕನಾಗಿ ಸಿನಿರಂಗಕ್ಕೆ ಕಾಲಿರಿಸುತ್ತಿದ್ದಾರೆ. ಅದು ಬೇರ್ಯಾರು ಅಲ್ಲದೇ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಪುತ್ರ ಜಾನ್ಸನ್ ಸಂಜಯ್.
ಸಮುದ್ರ ತೀರದ ಕಥಾಹಿನ್ನೆಲೆಯುಳ್ಳ ಉಪ್ಪೆನಾ ಸಿನಿಮಾದಲ್ಲಿ ಸಮುದ್ರವೂ ಪ್ರಮುಖ ಪಾತ್ರ ವಹಿಸಿದೆ. ಈ ಚಿತ್ರದಲ್ಲಿ ನಾಯಕ ಮೀನುಗಾರನಾಗಿರುತ್ತಾನೆ. ತಮಿಳುನಾಡಿನಲ್ಲಿ ಮೀನುಗಾರರ ಜೀವನಶೈಲಿಯು ಭಿನ್ನವಾಗಿರುತ್ತದೆ. ಆ ಕಾರಣಕ್ಕೆ ತಮಿಳುನಾಡಿನ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಕೊಂಚ ಬದಲಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ.
ವಿಜಯ್ ಸೇತುಪತಿ ಈ ಸಿನಿಮಾ ರಿಮೇಕ್ ಹಕ್ಕು ಪಡೆಯುವ ಸಾಧ್ಯತೆ ಇದ್ದು ದಳಪತಿ ವಿಜಯ್ ಪುತ್ರ ಸಂಜಯ್ರನ್ನು ಹೀರೊ ಮಾಡುವ ಯೋಜನೆಯಲ್ಲಿದ್ದಾರಂತೆ. 20 ವರ್ಷದ ಸಂಜಯ್ ಅವರು ಸಿನಿರಂಗಕ್ಕೆ ಪ್ರವೇಶಿಸುವುದನ್ನೇ ದಳಪತಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರೊಂದಿಗೆ ದಳಪತಿ ವಿಜಯ್ ಕೂಡ ಸಿನಿಮಾ ಕಥೆಯನ್ನು ಮೆಚ್ಚಿಕೊಂಡಿದ್ದು ಅವರ ಕಡೆಯಿಂದ ಅಂತಿಮ ನಿರ್ಧಾರ ಹೊರ ಬೀಳಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.