ತಮಿಳುನಾಡಿನ ಚಿತ್ರ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿ ಮಾಡಲು ಅಲ್ಲಿನ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ತಮಿಳುನಾಡು ಚಿತ್ರ ಪ್ರದರ್ಶಕರ ಸಂಘದವರು ಇತ್ತೀಚೆಗೆ ಈ ಸಂಬಂಧಿಸಿ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು. ನಟ ವಿಜಯ್ ಅವರೂ ಕೂಡ ಮುಖ್ಯಮಂತ್ರಿಯನ್ನು ಭೇಟಿಯಾಗಿ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ಕೊಡಬೇಕು ಎಂದು ಕೋರಿದ್ದರು. ಈಗ ಸರ್ಕಾರ ಈ ಮನವಿಗೆ ಸ್ಪಂದಿಸಿದೆ. ಕಾಲಿವುಡ್ನಲ್ಲಿ ಹೊಸ ಚೈತನ್ಯ ಬಂದಂತಾಗಿದೆ.
ನ. 10ರಿಂದ ಇಲ್ಲಿನ ಚಿತ್ರ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಶೇ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಶೇ 100ರಷ್ಟು ಆಸನ ಭರ್ತಿಗೆ ಅನುಮತಿ ನೀಡಿರುವ ಸರ್ಕಾರವು ಚಿತ್ರ ಪ್ರದರ್ಶನದ ವೇಳೆ ಕೋವಿಡ್ ಸಂಬಂಧಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು ತೆರೆಯ ಮೇಲೆ ಪ್ರದರ್ಶಿಸಬೇಕು, ಮಾತ್ರವಲ್ಲ ಸ್ಯಾನಿಟೈಸೇಷನ್, ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಲೇಬೇಕು ಎಂದು ಸೂಚಿಸಿದೆ.
ವಿಜಯ್ ಅವರ ‘ಮಾಸ್ಟರ್’ ಸಿಲಂಬರಸನ್ (ಸಿಲಂಬರಸನ್ ತೆಸಿಂಗು ರಾಜೇಂದರ್) ಅವರ ‘ಈಶ್ವರನ್’ ಚಿತ್ರಗಳು ಮಕರ ಸಂಕ್ರಾಂತಿ ವೇಳೆಗೆ ಬಿಡುಗಡೆಗೆ ಸಿದ್ಧತೆ ನಡೆಸಿವೆ. ಈಗ ಸರ್ಕಾರದ ನಿರ್ಧಾರ ಅವರಿಗೂ ಖುಷಿ ತಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.