ADVERTISEMENT

ಮಕ್ಕಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ– ಪ್ರಶಸ್ತಿ ಬಾಚಿದ ‘ದಿ ಗಾರ್ಡ್‌’

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2023, 14:34 IST
Last Updated 26 ಫೆಬ್ರುವರಿ 2023, 14:34 IST
ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ವಿಜೇತರೊಂದಿಗೆ ನಿರ್ದೇಶಕ ಹರಿ ಸಂತೋಷ್‌, ನಟ ಸುಂದರರಾಜ್‌, ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ, ಎಸ್‌. ನಾರಾಯಣ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ. ಹರೀಶ್‌, ಚಿತ್ರಸಾಹಿತಿ ವಿ. ನಾಗೇಂದ್ರಪ್ರಸಾದ್‌ ಇದ್ದಾರೆ
ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ವಿಜೇತರೊಂದಿಗೆ ನಿರ್ದೇಶಕ ಹರಿ ಸಂತೋಷ್‌, ನಟ ಸುಂದರರಾಜ್‌, ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ, ಎಸ್‌. ನಾರಾಯಣ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ. ಹರೀಶ್‌, ಚಿತ್ರಸಾಹಿತಿ ವಿ. ನಾಗೇಂದ್ರಪ್ರಸಾದ್‌ ಇದ್ದಾರೆ   

ಬೆಂಗಳೂರು: ‘ದಿ ಗಾರ್ಡ್‌’ ಚಿತ್ರ ನಗರದಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ (‘ಅಪ್ಪು’ ಮಕ್ಕಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ)ದಲ್ಲಿ ಮೊದಲ ಬಹುಮಾನ ಬಾಚಿಕೊಂಡಿತು.

ಉಲ್ಲಾಸ್‌ ಸ್ಕೂಲ್‌ ಆಫ್‌ ಸಿನಿಮಾಸ್‌ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಚಿತ್ರೋತ್ಸವದ ಸಮಾರೋಪ ಭಾನುವಾರ ಜಿ.ಟಿ. ವರ್ಲ್ಡ್‌ ಮಾಲ್‌ನಲ್ಲಿ ನಡೆಯಿತು.

‘ದಿ ಗಾರ್ಡ್‌’ ಚಿತ್ರವನ್ನು ಉಮೇಶ್‌ ಗೌಡ ನಿರ್ದೇಶಿಸಿದ್ದಾರೆ. ಇದು ಸಂಭಾಷಣೆಗಳಿಲ್ಲದ ಚಿತ್ರ. ವಿಟಿ ಸಿನೆಮಾಸ್‌ ಲಾಂಛನದ ಅಡಿಯಲ್ಲಿ ಶಿಲ್ಪಾ ಡಿ., ಆನಂದ ಕೊಳಕಿ, ಉಜ್ವಲಾ ಶೇಠ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪರಿಣಿತಾ ಮತ್ತು ಸಿಂಚನಾ ಅಭಿನಯಿಸಿದ್ದಾರೆ. ಈ ಚಿತ್ರದ ಚಿತ್ರಕತೆಗೂ ಉಮೇಶ್‌ ಬಡಿಗೇರ್‌ ಅವರಿಗೆ ಪ್ರಶಸ್ತಿ ಲಭಿಸಿದೆ.

ADVERTISEMENT

ಬಹುಮಾನಗಳ ವಿವರ: ಗಾಂಧಿ ಮತ್ತು ನೋಟು (2ನೇ ಬಹುಮಾನ. ನಿರ್ಮಾಪಕರು: ಸುಧಾರಾಣಿ, ಎಚ್‌.ಕೆ. ವೀಣಾ ಪದ್ಮನಾಭ, ಮಂಜುನಾಥ, ನಿರ್ದೇಶನ: ವಿ.ಎಲ್‌. ಆಶ್ರಿತ್‌ ಮತ್ತು ತಂಡ), ದಿ ಕೇಕ್‌ (3ನೇ ಬಹುಮಾನ. ನಿರ್ದೇಶನ: ಕಿಶೋರ್‌ ಮೂಡಬಿದ್ರೆ)

ಉತ್ತಮ ಬಾಲನಟ: ಮಾ. ತರುಣ್‌ (ಚಿತ್ರ: ಮಸಣದ ಹೂವು), ಉತ್ತಮ ಬಾಲನಟಿ: ದಿವಿಜಾ ನಾಗೇಂದ್ರಪ್ರಸಾದ್‌ (ಚಿತ್ರ: ಗಾಂಧಿ ಮತ್ತು ನೋಟು), ಉತ್ತಮ ಬಾಲನಟ ವಿಮರ್ಶಕರ ಪ್ರಶಸ್ತಿ: ಮಹೇಂದ್ರ (ಚಿತ್ರ: ನನ್ನ ಹೆಸರು ಕಿಶೋರ) ಉತ್ತಮ ಬಾಲನಟಿ ವಿಮರ್ಶಕರ ಪ್ರಶಸ್ತಿ: ದೀಕ್ಷಾ ಡಿ. ರೈ (ಚಿತ್ರ: ಪೆನ್ಸಿಲ್‌ ಬಾಕ್ಸ್‌), ಉತ್ತಮ ಪೋಷಕ ನಟಿ: ಅರುಣಾ ಬಾಲರಾಜ್‌ (ಚಿತ್ರ: ನಹಿ ಜ್ಞಾನೇನ ಸದೃಶಂ), ಉತ್ತಮ ಪೋಷಕ ನಟ: ಕಾರ್ತಿಕ್‌ (ಚಿತ್ರ: ಮೂಕ ಜೀವ), ಉತ್ತಮ ನಿರ್ಮಾಣ ಸಂಸ್ಥೆ: ಡ್ರೀಂ ಸ್ಕೋಪ್ ಥಿಯೇಟರ್‌ ಸ್ಟುಡಿಯೋ (ಪೂಜಾ ಗೋಯೆಲ್‌, ಚಿತ್ರ: ನಮ್ಮ ಅರಣ್ಯ ಪ್ರದೇಶ), ಅತ್ಯುತ್ತಮ ನಿರ್ದೇಶಕಿ: ಆಶಾ ದೇವಿ ಡಿ. (ಚಿತ್ರ: ಓ ನನ್ನ ಚೇತನ), ಅತ್ಯುತ್ತಮ ಸಂಕಲನಕಾರ: ವಸಂತ್ ಕುಮಾರ್ (ಚಿತ್ರ: ಗಾಂಧಿ ಮತ್ತು ನೋಟು), ಅತ್ಯುತ್ತಮ ಛಾಯಾಗ್ರಾಹಕ: ರಾಜು ಎನ್.ಎಂ. ( ಚಿತ್ರ: ಮನ್ 3) ಅತ್ಯುತ್ತಮ ಸಂಗೀತ ನಿರ್ದೇಶಕಿ: ವಾಣಿ ಹರಿಕೃಷ್ಣ (ಗಾಂಧಿ ಮತ್ತು ನೋಟು)

ಚಿತ್ರೋತ್ಸವಕ್ಕೆ ಒಟ್ಟು 60 ಪ್ರವೇಶಗಳು ಬಂದಿದ್ದವು. ಅವುಗಳಲ್ಲಿ 12 ಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾದವು. ಎಲ್ಲವೂ ಉತ್ತಮ ಚಿತ್ರಗಳೇ ಆಗಿದ್ದವು. ಎಲ್ಲ ಚಿತ್ರಗಳಿಗೂ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಬಂದಿದ್ದರು ಎಂದು ಚಿತ್ರೋತ್ಸವದ ಸಂಯೋಜಕ, ನಿರ್ದೇಶಕ ನಂದಳಿಕೆ ನಿತ್ಯಾನಂದ ಪ್ರಭು ಮಾಹಿತಿ ನೀಡಿದರು.

‘ಇಂಥ ಚಿತ್ರೋತ್ಸವಕ್ಕೂ ಮುನ್ನ ಮಕ್ಕಳ ಚಿತ್ರ ನಿರ್ಮಾಪಕರಿಗೆ ಈ ಮಾದರಿಯ ವಿಶ್ವದ ಶ್ರೇಷ್ಠ ಚಿತ್ರಗಳನ್ನು ತೋರಿಸಬೇಕು. ಅವರು ಅಂಥದ್ದೇ ಮಾದರಿಗಳಲ್ಲಿ ಉತ್ತಮ ಚಿತ್ರಗಳನ್ನು ಮಾಡಲು ಸಹಕಾರಿ’ ಎಂದು ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಸಲಹೆ ನೀಡಿದರು.

ನಿರ್ದೇಶಕರಾದ ಎಸ್‌. ನಾರಾಯಣ್‌, ಗಿರೀಶ್‌ ಕಾಸರವಳ್ಳಿ, ನಟ ಸುಂದರರಾಜ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್‌, ಸಂಘಟಕ ಉಲ್ಲಾಸ್‌, ಚಿತ್ರಸಾಹಿತಿ ವಿ. ನಾಗೇಂದ್ರ ಪ್ರಸಾದ್‌, ನಿರ್ದೇಶಕ ಹರೀಶ್‌ ಸಂತೋಷ್‌ ಸಮಾರೋಪದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.