ಬೆಂಗಳೂರು: ನಾನು ಯಾವ ‘ಪುಡುಂಗು‘ ಅಲ್ಲ, ನನಗೆ ಕೊಂಬೂ ಇಲ್ಲ ಎಂದಿರುವ ನಿರ್ದೇಶಕ ಪ್ರೇಮ್, ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಿ ಎಂದು ನಟ ದರ್ಶನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಹಲ್ಲೆ ಪ್ರಕರಣ ಮತ್ತು ₹25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರು ಶನಿವಾರ ಸಂಜೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಪ್ರೇಮ್ ಅವರನ್ನು ಉಲ್ಲೇಖಿಸಿದ್ದರು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಪ್ರೇಮ್ ಅವರು ಬಹಿರಂಗ ಪತ್ರ ಬರೆದಿದ್ದಾರೆ. ಅದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಏನಿದೆ ಪ್ರೇಮ್ ಪತ್ರದಲ್ಲಿ
ದರ್ಶನ್ ಅವರಿಗೆ
ದರ್ಶನ್ ಅವರೇ ನಾನು ‘ಕರಿಯಾ‘ ಸಿನಿಮಾ ಮಾಡಬೇಕಾದರೆ ಯಾವ ‘ಪುಡುಂಗುನೂ‘ ಅಲ್ಲ ನನ್ ಕುಂಬೂ ಇರಲಿಲ್ಲ. ಒಬ್ಬ ಸಾಮಾನ್ಯ ನಿರ್ದೇಶಕ. ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಹಾಗೂ ರಜನಿಕಾಂತ್ರವರು ಒಳ್ಳೆ ನಿರ್ದೇಶಕ ಎಂದು ಬೆನ್ನುತಟ್ಟಿದ್ದರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟರು. ಆದರೂ ನನಗೆ ಕೊಂಬು ಬರ್ಲಿಲ್ಲ. ನಾನು ನನ್ನದೇ ಆದ ಸ್ಟೈಲ್ನಲ್ಲಿ ಸಿನಿಮಾ ಮಾಡಿಕೊಂಡು ಬಂದವನು. ಸುಮಾರು ನಿರ್ಮಾಪಕರು, ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ನಿಮ್ಮ ಕಾಂಬಿನೇಶನ್ನಲ್ಲಿ ಯಾವಾಗ ಚಿತ್ರ ಮಾಡ್ತೀರ ಎಂದು ಕೇಳ್ತಾನೆ ಇದ್ದರು. ಇದರ ಬಗ್ಗೆ ನಿಮಗೂ ಗೊತ್ತು, ನನಗೂ ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡುವುದರ ಬಗ್ಗೆ ಚರ್ಚೆ ಮಾಡಿದ್ದೆವು. ನಾನು ನಮ್ ಬ್ಯಾನರ್ನಲ್ಲಿ ಸಿನಿಮಾ ಮಾಡಿ, ಇಲ್ಲ ನಿಮ್ ಬ್ಯಾನರ್ನಲ್ಲಿ ಸಿನಿಮಾ ಮಾಡಿ ಎಂದು ಚರ್ಚೆ ಮಾಡಿದ್ದೆವು. ನನಗೆ ಉಮಾಪತಿಯವರು ನೀವು ಹಾಗೂ ದರ್ಶನ್ ಸೇರಿ ನನಗೆ ಸಿನಿಮಾ ಮಾಡಿಕೊಡಿ ಎಂದು ಕೇಳಿದ್ದರು. ಅದಕ್ಕೆ ನಾನು ಉಮಾಪತಿ ಅವರನ್ನು ನಿಮಗೆ ಪರಿಚಯ ಮಾಡಿದ್ದೆ. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ತೀರ್ಮಾನ ಮಾಡಿದ್ದೆವು. ಆದ್ರೆ ನನ್ನ ‘ದಿ ವಿಲನ್’ ಸಿನಿಮಾದ ಕಾರಣಕ್ಕೆ ನಾನೇ ಉಮಾಪತಿ ಅವರಿಗೆ ಹೇಳಿ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ. ನನ್ನ ಸಂಭಾವನೆಯನ್ನು ಉಮಾಪತಿ ಅವರಿಗೆ ವಾಪಸ್ ನೀಡಿ, ‘ರಾಬರ್ಟ್‘ ಸಿನಿಮಾವನ್ನು ಹಾರೈಸಿದವನು ನಾನು. ಅದೇ ರೀತಿ ‘ರಾಬರ್ಟ್’ ಹಿಟ್ ಆಯಿತು. ಇದರ ಮಧ್ಯೆ ನನ್ನ ಹೆಸರು ಯಾಕೆ ದರ್ಶನ್ ಅವರೇ? ನಿರ್ದೇಶಕರು ಯಾವ ಪುಡಿಂಗುಗಳು ಅಲ್ಲ. ಅವರಿಗೆ ಕುಂಬು ಇರುವುದಿಲ್ಲ. ತೆರೆಮೇಲೆ ಒಬ್ಬ ನಟನನ್ನು ಹುಟ್ಟುಹಾಕಿ, ಅವನಿಗೆ ಕೊಂಬು ಬರಬೇಕಾದರೆ ನಿರ್ದೇಶಕರ ಶ್ರಮ ಎಷ್ಟಿರುತ್ತದೆ ಎಂದು ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು. ಅದು ನಿಮಗೂ ಗೊತ್ತು. ಇನ್ನೊಬ್ಬರ ಬಗ್ಗೆ ಮಾತಾಡಬೇಕಾದ್ರೆ ಯೋಚಿಸಿ ಮಾತನಾಡಿ Thank you for your kind words. ದೇವರು ನಿಮಗೆ ಒಳ್ಳೆಯದು ಮಾಡಲಿ
2003ರಲ್ಲಿ ಬಿಡುಗಡೆಯಾಗಿದ್ದ ದರ್ಶನ್ ನಟನೆಯಸೂಪರ್ ಡೂಪರ್ ಹಿಟ್ ಚಿತ್ರ‘ಕರಿಯಾ’ವನ್ನು ಪ್ರೇಮ್ ನಿರ್ದೇಶಿಸಿದ್ದರು. ‘ಕರಿಯಾ’ ಸಿನಿಮಾ ಪ್ರೇಮ್ ಮತ್ತು ದರ್ಶನ್ ಇಬ್ಬರಿಗೂ ಬಹುದೊಡ್ಡ ಹೆಸರು ತಂದುಕೊಟ್ಟಿತ್ತು.
ಇವುಗಳನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.