ಸಿನಿ ಬದುಕಿನಲ್ಲಿ ನೈಜ ಅಭಿನಯದ ಮೂಲಕ ‘ನ್ಯಾಚುಲರ್ ಸ್ಟಾರ್’ ಎನ್ನಿಸಿಕೊಂಡವರು ಟಾಲಿವುಡ್ನ ನಾನಿ (ನವೀನ್ ಬಾಬು ಘಂಟ). ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ ಈ ನಟ. ಪಾತ್ರಗಳ ಮೂಲಕವೇ ತಮ್ಮ ನಟನೆಯ ಸಾಮರ್ಥ್ಯವನ್ನು ತೋರಿದ್ದಾರೆ.
35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಅನೇಕ ಯಶಸ್ಸಿ ಚಿತ್ರಗಳನ್ನು ನೀಡಿದ್ದಾರೆ. ಸದ್ಯಕ್ಕೆ 2 ಚಿತ್ರಗಳು ಇವರ ಬತ್ತಳಿಕೆಯಲ್ಲಿವೆ.
ಆದರೆ ನಾನಿ ಸಂಪೂರ್ಣವಾಗಿ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡ ಒಂದು ಸಿನಿಮಾವೂ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದಿಲ್ಲ. ಮೊದಲ ಬಾರಿ ‘ಜಂಡಾ ಪೈ ಕಾಪಿರಾಜು’ ಸಿನಿಮಾದಲ್ಲಿ ಹಳ್ಳಿಯ ರಗಡ್ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಹೇಳ ಹೆಸರಿಲ್ಲದಂತೆ ಥಿಯೇಟರ್ನಿಂದ ಹೊರ ನಡೆದಿತ್ತು. ನಂತರ ‘ಕೃಷ್ಣ ಅರ್ಜುನ ಯುದ್ಧಂ’ನಲ್ಲೂ ಸಂಪೂರ್ಣ ಹಳ್ಳಿ ಯುವಕನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಈ ಎರಡೂ ಸಿನಿಮಾದಲ್ಲಿ ನಾನಿ ಅದ್ಭುತವಾಗಿ ನಟಿಸಿದ್ದರು. ಆದರೂ ಈ ಸಿನಿಮಾಗಳು ಸೋಲಿನ ಹಾದಿ ಹಿಡಿದವು.
ಈಗ ನಾನಿ ಮತ್ತೆ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಶ್ರೀಕಾಂತ್ ಒಡೆಲಾ ನಿರ್ದೇಶನದ ಸಿನಿಮಾಕ್ಕೆ ನಾನಿ ಒಪ್ಪಿಗೆಯ ರುಜು ಹಾಕಿದ್ದಾರೆ. ಶ್ರೀಕಾಂತ್ ಈ ಮೊದಲು ಸ್ಟಾರ್ ನಿರ್ದೇಶಕ ಸುಕುಮಾರ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ತಮ್ಮ ಮುಂದಿನ ಸಿನಿಮಾದಲ್ಲಿ ‘ರಂಗಸ್ಥಳಂ’ ಚಿತ್ರದಲ್ಲಿ ರಾಮ್ ಚರಣ್ ಕಾಣಿಸಿದಂತೆ ರೆಬೆಲ್ ಹಳ್ಳಿ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ನಾನಿ. ಚಿತ್ರದ ಸ್ಕ್ರಿಪ್ಟ್ ಓದಿದ ನಾನಿ ಸಿನಿಮಾದ ಬಗ್ಗೆ ತುಂಬಾನೇ ಉತ್ಸುಕರಾಗಿದ್ದಾರಂತೆ. ಈ ಬಾರಿಯಾದರೂ ಹಳ್ಳಿ ಹುಡುಗನ ಪಾತ್ರ ನಾನಿಗೆ ಯಶಸ್ಸು ತಂದು ಕೊಡಬಹುದಾ? ಕಾದು ನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.