ನಟ ಶ್ರೀಮುರಳಿ ನಾಯಕರಾಗಿ ನಟಿಸುತ್ತಿರುವ ‘ಉಗ್ರಾಯುಧಮ್’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಪುನೀತ್ ರುದ್ರನಾಗ್ ಚೊಚ್ಚಲ ನಿರ್ದೇಶನದ ಚಿತ್ರವಿದು.
‘ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಪ್ರೋತ್ಸಾಹ ನೀಡುತ್ತಾ ಬಂದವರು ಶ್ರೀಮುರಳಿ ಹಾಗೂ ಕುಟುಂಬದವರು. ನನ್ನ ಮೊದಲ ನಿರ್ದೇಶನದ ‘ಉಗ್ರಾಯುಧಮ್’ ಚಿತ್ರಕ್ಕೆ ಶ್ರೀಮುರಳಿ ಅವರೆ ನಾಯಕನಾಗಿರುವುದು ಸಂತಸ ತಂದಿದೆ. ಏಳುನೂರು ವರ್ಷಗಳ ಹಿಂದಿನ ಪಿರಿಯಾಡಿಕ್ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರ. ನವೆಂಬರ್ನಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಸಕಲೇಶಪುರದ ಬಳಿ 135 ಎಕರೆಯಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದ್ದು, ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ನಾನು ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅವರ ಅಭಿನಯದ ಸಾಕಷ್ಟು ಐತಿಹಾಸಿಕ ಚಿತ್ರಗಳನ್ನು ನೋಡಿದ್ದೇನೆ. ಅದೇ ನನಗೆ ಈ ಚಿತ್ರ ನಿರ್ದೇಶನ ಮಾಡಲು ಸ್ಫೂರ್ತಿ. ನಮ್ಮ ಚಿತ್ರದಲ್ಲಿ ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ದೊಡ್ಡ ತಂಡ ಇದೆ. ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುತ್ತೇವೆ’ ಎಂದು ನಿರ್ದೇಶಕ ಪುನೀತ್ ರುದ್ರನಾಗ್ ತಿಳಿಸಿದರು.
ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ಬಂಡವಾಳ ಹೂಡುತ್ತಿದ್ದಾರೆ. ‘ನಾನು ‘ಬಘೀರ’ ಚಿತ್ರದ ನಂತರ ಸುಮಾರು 200 ಕಥೆಗಳನ್ನು ಕೇಳಿದ್ದೇನೆ. ಅದರಲ್ಲಿ ನನಗೆ ಇಷ್ಟ ಆಗಿದ್ದು ಮೂರು ಕಥೆಗಳು ಮಾತ್ರ. ಆ ಪೈಕಿ ಎರಡು ಚಿತ್ರಗಳ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿದೆ. ನಿರ್ದೇಶಕ ಪುನೀತ್ ರುದ್ರನಾಗ್ 700 ವರ್ಷಗಳ ಹಿಂದಿನ ಕಥೆಯನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ನಿಜಕ್ಕೂ ಅವರು ಮಾಡಿಕೊಂಡಿರುವ ಕಥೆ ಬಹಳ ಚೆನ್ನಾಗಿದೆ. ಒಟ್ಟಿನಲ್ಲಿ ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ಬರುವುದಂತು ಖಂಡಿತ’ ಎಂದರು ನಾಯಕ ಶ್ರೀಮುರಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.