ADVERTISEMENT

ಕೇಸ್‌ ವಿಚಾರದಲ್ಲಿ ರಾಜಿ ಇಲ್ಲ: ನಿರ್ಮಾಪಕ ಉಮಾಪತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 7:11 IST
Last Updated 14 ಜುಲೈ 2021, 7:11 IST
ದರ್ಶನ್‌ ಹಾಗೂ ಉಮಾಪತಿ
ದರ್ಶನ್‌ ಹಾಗೂ ಉಮಾಪತಿ   

ಬೆಂಗಳೂರು: ನಟ ದರ್ಶನ್‌ ಅವರ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಕೇಸ್‌ ವಿಚಾರದಲ್ಲಿ ನಾನಾಗಲಿ ಅಥವಾ ದರ್ಶನ್‌ ಅವರೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಉಮಾಪತಿ, ‘ದರ್ಶನ್‌ ಅವರಿಗಾಗಲಿ, ನನಗಾಗಲಿ, ಒಬ್ಬರ ಮೇಲೆ ಒಬ್ಬರಿಗೆ ವೈಷಮ್ಯವಿಲ್ಲ. ಈ ಪ್ರಕರಣದಲ್ಲಿ ಸಾಬೀತು ಮಾಡುವ ಅವಶ್ಯಕತೆ ನನಗೇನೂ ಇಲ್ಲ. ನ್ಯಾಯಾಂಗ ವ್ಯವಸ್ಥೆಯೇ ಸಾಬೀತು ಮಾಡುತ್ತದೆ. ‘ನಮ್ಮನ್ನು ದೂರ ಮಾಡಲು ಯಾರಿಗೂ ಸಾಧ್ಯವಿಲ್ಲ’ ಎಂದು ದರ್ಶನ್‌ ಅವರೇ ಹೇಳಿಕೆ ನೀಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ತನಿಖೆ ನಡೆಯುತ್ತಿದ್ದು, ಅದು ತನಿಖೆಯಾಗಲಿ. ಕೇಸ್‌ ವಿಚಾರದಲ್ಲಿ ನಾನಾಗಲಿ ಅಥವಾ ದರ್ಶನ್‌ ಅವರೂ ರಾಜಿ ಮಾಡಿಕೊಳ್ಳುವುದಿಲ್ಲ. ಅದು ಕಾನೂನು ಚೌಕಟ್ಟಿನಲ್ಲಿ ನಡೆಯುತ್ತದೆ. ಸ್ನೇಹಿತರ ನಡುವೆ ಸಂಧಾನವಾಗಿದೆ ಅಷ್ಟೇ. ದರ್ಶನ್‌ ಅವರಿಗೆ ನಿಜಾಂಶ ಗೊತ್ತಾಗಿರುವುದಕ್ಕೆ ನಿನ್ನೆಯೇ ಹೇಳಿಕೆ ಕೊಟ್ಟಿದ್ದಾರೆ. ದರ್ಶನ್‌ ಅವರೇ ಇದಕ್ಕೆ ತೆರೆ ಎಳೆದಿದ್ದಾರೆ. ನನ್ನ ಹಾಗೂ ದರ್ಶನ್‌ ಅವರ ಸಂಬಂಧ ಸದಾಕಾಲ ಹಾಗೆಯೇ ಇರುತ್ತದೆ.ನಮ್ಮಿಬ್ಬರ ನಡುವೆ ವೈಷಮ್ಯ ತಂದಿಡಲು ಪ್ರಯತ್ನಿಸಿದ್ದರು’ ಎಂದಿದ್ದಾರೆ.

‘ನಾನು ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಅದರ ತನಿಖೆ ನಡೆಯುತ್ತಿದೆ. ಉತ್ತರ ಅಲ್ಲಿಂದಲೇ ಸಿಗುತ್ತದೆ. ನಾನು ಜಯನಗರ ಪೊಲೀಸ್‌ ಠಾಣೆಗೆ ಹೋಗಿ ಇನ್‌ಸ್ಪೆಕ್ಟರ್‌ ಅವರನ್ನು ಭೇಟಿಯಾಗಲಿದ್ದೇನೆ. ನಾನು ಎಲ್ಲವನ್ನೂ ಎದುರಿಸುತ್ತೇನೆ. ನಾನು ಕಳ್ಳ ಅಲ್ಲ. ನಾನು ತಪ್ಪು ಮಾಡಿದ್ದರೆ ಮೈಸೂರಿಗೆ ಹೋಗಿ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ನಾನು ಮೊದಲು ದೂರು ನೀಡುತ್ತಿರಲಿಲ್ಲ. ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ಊಹಾಪೋಹಗಳಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ನಾನು ಅದಕ್ಕೆ ಜವಾಬ್ದಾರನೂ ಅಲ್ಲ’ ಎಂದು ಉಮಾಪತಿ ಹೇಳಿದ್ದಾರೆ.

ADVERTISEMENT

‘ದರ್ಶನ್‌ ಅವರ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದೇನೆ. ಇದನ್ನು ದರ್ಶನ್‌ ಅವರೇ ಪ್ರಕಟಿಸಲಿದ್ದಾರೆ. ಇಲ್ಲಿ ನಾವು ಕೇವಲ ಬೋಗಿಗಳು ದರ್ಶನ್‌ ಅವರೇ ಎಂಜಿನ್‌. ನಾನು ಉದ್ಯಮಿ. ದುಡ್ಡು ಸಿಗುತ್ತದೆ, ಲಾಭ ಆಗುತ್ತದೆ ಎಂದರೆ ಅದನ್ನು ಬಿಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.