ಗುರುಮೂರ್ತಿ ನಿರ್ದೇಶನದ ಪ್ರಿಯಾಂಕ ಉಪೇಂದ್ರ ನಟಿಸುತ್ತಿರುವ ‘ಉಗ್ರಾವತಾರ’ ಚಿತ್ರ ಸಂಕ್ರಾಂತಿಗೆ ತೆರೆಯ ಮೇಲೆ ಬರುವ ಸಾಧ್ಯತೆ ಇದೆ. ಚಿತ್ರದ ಟೀಸರ್ ಅನ್ನು ನಟ ಉಪೇಂದ್ರ ಅವರು ಪ್ರಿಯಾಂಕ ಅವರ ಜನ್ಮದಿನದಂದು ಬಿಡುಗಡೆಗೊಳಿಸಿದ್ದಾರೆ.
ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಸಾಹಸ ಪ್ರಧಾನ ಕತೆಯಲ್ಲಿ ನಟಿಸಿದ್ದಾರೆ. ಉಗ್ರಾವತಾರವನ್ನೇ ತಾಳಿ ರೌಡಿಗಳನ್ನು ಮಟ್ಟ ಹಾಕಿದ್ದಾರೆ. ಟೀಸರ್ ನೋಡಿ ಪ್ರತಿಕ್ರಿಯೆ ನೀಡಿದ ಉಪೇಂದ್ರ, ‘ಮನೆಯಲ್ಲೇ ಪ್ರಿಯಾಂಕ ಉಗ್ರಾವತಾರವನ್ನು ನಾನು ನೋಡಿದ್ದೇನೆ. ನಿಮಗೆ ಇದು ಹೊಸದು ಅನಿಸಬಹುದು’ ಎಂದು ಮುಗುಳ್ನಕ್ಕರು.
ಚಿತ್ರೀಕರಣದ ಅನುಭವ ಹಂಚಿಕೊಂಡ ಪ್ರಿಯಾಂಕ, ‘ಆರಂಭದಲ್ಲಿ ಸಾಹಸ ದೃಶ್ಯಗಳಲ್ಲಿ ನಟಿಸಲು ಭಯವಿತ್ತು. ಇವೆಲ್ಲಾ ನಿನ್ನಿಂದ ಆಗದು ಎಂದು ಹಲವರು ಹೇಳಿದರು. ನನ್ನ ಪ್ರಯತ್ನ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಫೈಟ್ಗಳು ಸ್ವಾಭಾವಿಕವಾಗಿ ಬರಬೇಕೆಂದು ಕೆಲವು ಕಡೆ ಡ್ಯೂಪ್ ಬಳಸಿಲ್ಲ. ಪ್ರೇಕ್ಷಕರು ಇಷ್ಟಪಟ್ಟರೆ ಇನ್ನು ಮುಂದೆ ಇಂತಹ ಪಾತ್ರಗಳಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಚಿತ್ರದಲ್ಲಿ ಸಾಮಾಜಿಕ ಸಂದೇಶವನ್ನು ಹೇಳಲಾಗಿದೆ. ಮಹಿಳೆಯರ ವಿರುದ್ಧದ ಶೋಷಣೆ, ಪೊಲೀಸರಿಂದ ಆಗುವ ತೊಂದರೆ ಮುಂತಾದ ವಿಷಯಗಳು ಇದರಲ್ಲಿವೆ’ ಎಂದು ಹೇಳಿದರು.
ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಐದು ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ. ಗುರುಮೂರ್ತಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಎಸ್.ಜಿ.ಸತೀಶ ನಿರ್ಮಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.