ದಕ್ಷಿಣ ಭಾರತದ ಪ್ರತಿಭಾವಂತ ನಟ ವಿಜಯ್ ಸೇತುಪತಿ ಮುಂಬರುವ ಚಿತ್ರ ‘ಕಡೈಸಿ ವಿವಸಾಯಿ’ ಟ್ರೇಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಕಾಕ ಮುತ್ತೈ’ ಖ್ಯಾತಿಯ ಎಂ. ಮಣಿಕಂಠನ್ ಕತೆ ಬರೆದು ನಿರ್ದೇಶಿಸಿರುವ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ.
ವಿಜಯ್ ಸೇತುಪತಿ ಚಿತ್ರದ ಟ್ರೇಲರ್ ಲಿಂಕ್ ಹಂಚಿಕೊಂಡಿದ್ದಾರೆ. ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಕತೆ. ಹಳ್ಳಿ ಜೀವನ, ಕೃಷಿಯನ್ನು ನಂಬಿದ ರೈತನ ಬದುಕು, ಹಬ್ಬ, ಸಂಪ್ರದಾಯಗಳ ಸುತ್ತ ಚಿತ್ರವನ್ನು ಹೆಣೆಯಲಾಗಿದೆ.
ಕೊರಳಲ್ಲಿ ಹತ್ತಾರು ಚೈನ್, ಬಣ್ಣ, ಬಣ್ಣದ ಹರಳಿನ ಸರಗಳು, ಕೈಯಲ್ಲಿ ಮೂರ್ನಾಲ್ಕು ವಾಚ್, ಬೆರಳಲ್ಲಿ ಚಿನ್ನದ ಉಂಗುರು ಧರಿಸಿದ ವಿಚಿತ್ರ ಪೋಷಾಕಿನಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಬಾಳೆಗೊನೆ ಮತ್ತು ಹೆಗಲ ಮೇಲೆ ಮಂಗನ ಜತೆಗಿರುವ ಹಳ್ಳಿ ಯುವಕನ ಪಾತ್ರದಲ್ಲಿರುವ ವಿಜಯ್ ಟ್ರೇಲರ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಈ ನಡುವೆ ವಿಜಯ್ ಸೇತುಪತಿ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಸುದ್ದಿಗಳು ದಟ್ಟವಾಗಿವೆ. ಆಮೀರ್ ಖಾನ್ ಚಿತ್ರದಲ್ಲಿ ಅವರು ನಟಿಸಲಿದ್ದಾರೆ ಎಂದು ಹೇಳಲಾಗಿದೆ.ವಿಜಯ್ ನಟಿಸುತ್ತಿರುವ ‘ಸಂಘ ತಮಿಳನ್’ ಸಿನಿಮಾ ಸೆಟ್ಗೂ ಆಮೀರ್ ಖಾನ್ ಭೇಟಿ ನೀಡಿದ್ದು ಈ ಸುದ್ದಿಗಳಿಗೆ ಪುಷ್ಟಿ ನೀಡಿದೆ. ಈ ವಿಷಯವನ್ನು ವಿಜಯ್ ಕೂಡ ದೃಢಪಡಿಸಿದ್ದಾರೆ. ಮಾಮನಿಥನ್ ಮತ್ತು ಲಾಭಂ ಚಿತ್ರಗಳು ಈ ಪ್ರತಿಭಾವಂತ ನಟನ ಕೈಯಲ್ಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.