ನಟ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಬಿಗ್ಬಜೆಟ್ ಚಿತ್ರ ‘ವಿಕ್ರಾಂತ್ ರೋಣ’ ಆಗಸ್ಟ್ 19ರಂದು ತೆರೆಯ ಮೇಲೆ ಬರಲು ಸಜ್ಜಾಗಿದೆ. ಲಾಕ್ಡೌನ್ ಕಾರಣದಿಂದ ಸ್ತಬ್ಧವಾಗಿದ್ದ ಚಿತ್ರರಂಗದ ಚಟುವಟಿಕೆ ಕ್ರಮೇಣವಾಗಿ ಗರಿಗೆದರುತ್ತಿದ್ದು, ಇದೇ ಸಂದರ್ಭದಲ್ಲಿ ‘ವಿಕ್ರಾಂತ್ ರೋಣ’ಗೆ ಅಂತಿಮ ಸ್ಪರ್ಶ ನೀಡುವಲ್ಲಿ ಸುದೀಪ್ ಮಗ್ನರಾಗಿದ್ದಾರೆ.
ಕೋವಿಡ್ ಎರಡನೇ ಅಲೆಯ ಕಾರಣದಿಂದ ಅರ್ಧಕ್ಕೇ ಸ್ಥಗಿತಗೊಂಡಿದ್ದ ‘ಬಿಗ್ಬಾಸ್’ ರಿಯಾಲಿಟಿ ಶೋನ 8ನೇ ಆವೃತ್ತಿಯೂ ಕಳೆದ ವಾರ ಪುನರಾರಂಭಗೊಂಡಿದೆ. ಇದರ ವಾರಾಂತ್ಯದ ಸಂಚಿಕೆಗಳ ಚಿತ್ರೀಕರಣದಲ್ಲಿ ಭಾಗವಹಿಸಿದ ಬಳಿಕ ಇದೀಗ ಸುದೀಪ್ ತಮ್ಮ ಚಿತ್ರದತ್ತ ಗಮನಹರಿಸಿದ್ದಾರೆ.
‘ಸಿನಿಮಾಗಾಗಿ ಧ್ವನಿ ನೀಡಿ ಹಲವು ವರ್ಷಗಳೇ ಕಳೆದಂತಿವೆ. ‘ವಿಕ್ರಾಂತ್ ರೋಣ’ಗೆ ನನ್ನ ಧ್ವನಿ ನೀಡುವ ಕಾರ್ಯ ಆರಂಭಿಸಿದ್ದೇನೆ. ನಾವು ಅಂದುಕೊಂಡಂತೆಯೇ ಚಿತ್ರ ಮೂಡಿಬರುತ್ತಿದೆ ಎನ್ನುವ ಸಂತೋಷವಿದೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲೂ ಈ ಚಿತ್ರ ತೆರೆ ಕಾಣಲಿದೆ.
ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಈ ಚಿತ್ರದ ಟೀಸರ್ ಹಾಗೂ ಕಟೌಟ್ ರಾರಾಜಿಸಿ ವಿಶ್ವದ ಗಮನಸೆಳೆದಿತ್ತು. ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಜ್ಯಾಕ್ ಮಂಜು ಈ ಚಿತ್ರದ ನಿರ್ಮಾಪಕರು. ಚಿತ್ರವು 3ಡಿ ರೂಪದಲ್ಲಿ ತೆರೆಯ ಮೇಲೆ ಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.