‘ಜಗತ್ತಿನ ಯಾವುದೇ ಮೂಲೆಲಿದ್ರೂ ಆ ಬೇಟೆ ನಂದು...’ ಎಂದು ಅಬ್ಬರಿಸುತ್ತಾರೆ ‘ಹ್ಯಾಟ್ರಿಕ್ ಹೀರೊ’ ಶಿವರಾಜ್ಕುಮಾರ್. ಇದಕ್ಕೆ ಪ್ರತಿಯಾಗಿ ‘ಹೋ... ಭ್ರಮೆ’ ಎಂದು ಕೂಲಾಗಿ ಪ್ರತಿಕ್ರಿಯೆ ನೀಡುತ್ತಾರೆ ನಟ ಕಿಚ್ಚ ಸುದೀಪ್.
–‘ದಿ ವಿಲನ್’ ಚಿತ್ರದ ಹತ್ತು ಸೆಕೆಂಡ್ಗಳ ನಾಲ್ಕು ಟೀಸರ್ಗಳನ್ನು ನಿರ್ದೇಶಕ ಪ್ರೇಮ್ ಬಿಡುಗಡೆಗೊಳಿಸಿ ಎಲ್ಲರನ್ನೂ ಕುತೂಹಲದ ಕಡಲಿಯೊಳಗೆ ಮೀಯುವಂತೆ ಮಾಡಿದರು. ಮತ್ತೊಮ್ಮೆ ಆ ಟೀಸರ್ಗಳ ಪ್ರದರ್ಶನಕ್ಕೂ ಕೋರಿಕೆ ಬಂತು. ‘ಅಷ್ಟು ಸಾಕು. ಉಳಿದದ್ದನ್ನು ಥಿಯೇಟರ್ನಲ್ಲಿ ನೋಡಿ’ ಎಂದು ನಕ್ಕರು ಪ್ರೇಮ್.
ಶಿವರಾಜ್ಕುಮಾರ್ ಮತ್ತು ಸುದೀಪ್ ನಟಿಸಿರುವ ಈ ಚಿತ್ರ ಅಕ್ಟೋಬರ್ 18ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ವ್ಯವಸ್ಥಿತವಾಗಿ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.
‘ಶಿವಣ್ಣ ಮತ್ತು ಸುದೀಪ್ ಜೊತೆಗೆ ಕೆಲಸ ಮಾಡುವುದು ಖುಷಿಯ ವಿಚಾರ. ನಿರ್ಮಾಪಕರೇ ಈ ಚಿತ್ರದ ನಿಜವಾದ ಹೀರೊ. ಕೇಳಿದಷ್ಟು ಹಣ ವ್ಯಯಿಸಿದ್ದಾರೆ. ಅವರು ನನ್ನ ಕಾಟ ಸಹಿಸಿಕೊಂಡಿರುವುದೇ ಹೆಚ್ಚು’ ಎಂದ ಪ್ರೇಮ್ ಅವರ ನೋಟ ಪಕ್ಕದಲ್ಲಿ ನಿಂತಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರತ್ತ ಹೊರಳಿತು.
‘ಅರ್ಜುನ್ಗೆ ಸಾಕಷ್ಟು ತೊಂದರೆ ಕೊಟ್ಟಿದ್ದೇನೆ. ಅದೆಲ್ಲವನ್ನೂ ಸಹಿಸಿಕೊಂಡು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.
‘ಪ್ರೇಮ್ ಸರ್ ಜೊತೆಗೆ ಕೆಲಸ ಮಾಡುವುದು ಕಷ್ಟವೆಂದು ಎಲ್ಲರೂ ಹೇಳುತ್ತಾರೆ. ಆದರೆ, ನನಗೆ ಯಾವುದೇ ಕಷ್ಟವಾಗಲಿಲ್ಲ. ನಾವು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆವು. ಸಂಜೆ ನಗುತ್ತಲೇ ಸ್ಟುಡಿಯೊಕ್ಕೆ ಬರುತ್ತಿದ್ದ ಅವರು ಮಗ ಅದನ್ನು ಡಿಲಿಟ್ ಮಾಡು ಎನ್ನುತ್ತಿದ್ದರು. ಯಾವುದೇ ಬೇಸರವಿಲ್ಲದೆ ಆ ಕೆಲಸ ಮಾಡುತ್ತಿದ್ದೆ. ಮತ್ತೆ ಹೊಸದಾಗಿ ಕೆಲಸ ಆರಂಭಿಸುತ್ತಿದ್ದೆ. ಹಾಗಾಗಿಯೇ, ಒಳ್ಳೆಯ ಹಾಡುಗಳು ಮೂಡಿಬಂದಿವೆ’ ಎಂದು ವಿವರಿಸಿದರು.
ನಟ ಶಿವರಾಜ್ಕುಮಾರ್, ‘ನಾನು ಪ್ರೇಮ್ಗೆ ಫ್ರೀಯಾಗಿ ಸಿಗುತ್ತೇನೆ. ಹಾಗಾಗಿ, ನನಗೆ ವಿಚಿತ್ರ ವೇಷ ಹಾಕಿಸುತ್ತಾನೆ. ನನ್ನ ಮೂರನೇ ಕಣ್ಣನ್ನು ಅವನಿನ್ನೂ ನೋಡಿಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದರು.
‘ಬ್ಯಾಂಕಾಕ್, ಲಂಡನ್, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಭಿಮಾನಿಗಳು ಶಿವಣ್ಣ ಮತ್ತು ಸುದೀಪ್ ಎಂಬ ಭೇದಭಾವ ಮಾಡದೆ ಒಟ್ಟಾಗಿ ಸಿನಿಮಾ ನೋಡಬೇಕು. ಇದು ಚಿತ್ರರಂಗದ ಅಭ್ಯುದಯಕ್ಕೂ ಸಹಕಾರಿಯಾಗಲಿದೆ’ ಎಂದರು.
ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ಸಿ.ಆರ್. ಮನೋಹರ್, ‘ಕನ್ನಡದಲ್ಲಿಯೂ ದೊಡ್ಡ ಬಜೆಟ್ಗಳ ಸಿನಿಮಾ ಮಾಡಬೇಕೆಂಬ ಆಸೆ ಈಡೇರಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.