ADVERTISEMENT

‘ಗರಡಿ’ ಹೊಕ್ಕ ಭಟ್ಟರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 14:41 IST
Last Updated 20 ನವೆಂಬರ್ 2021, 14:41 IST
ಗರಡಿ ಚಿತ್ರದ ಮುಹೂರ್ತದಲ್ಲಿ ಯೋಗರಾಜ್‌ ಭಟ್‌, ಬಿ.ಸಿ.ಪಾಟೀಲ್‌, ವನಜಾ ಬಿ ಪಾಟೀಲ್, ಯಶಸ್‌ ಸೂರ್ಯ
ಗರಡಿ ಚಿತ್ರದ ಮುಹೂರ್ತದಲ್ಲಿ ಯೋಗರಾಜ್‌ ಭಟ್‌, ಬಿ.ಸಿ.ಪಾಟೀಲ್‌, ವನಜಾ ಬಿ ಪಾಟೀಲ್, ಯಶಸ್‌ ಸೂರ್ಯ   

‘ಗಾಳಿಪಟ–2’ ಸಿನಿಮಾ ಬಳಿಕ ಯೋಗರಾಜ್‌ ಭಟ್‌ ಅವರ ಹೊಸ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಅದಕ್ಕೀಗ ಉತ್ತರ ದೊರಕಿದೆ. ಯೋಗರಾಜ್‌ ಭಟ್‌ ನಿರ್ದೇಶನದ ಹೊಸ ಸಿನಿಮಾಗೆ ‘ಗರಡಿ’ ಎಂಬ ಶೀರ್ಷಿಕೆ ಇಡಲಾಗಿದೆ.

ಚಿತ್ರದ ‘ಮುಹೂರ್ತ’ ಹಾಗು ‘ಟೈಟಲ್ ಲಾಂಚ್’ ಕಾರ್ಯಕ್ರಮ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಇತ್ತೀಚೆಗಷ್ಟೇ ನಡೆಯಿತು. ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಪತ್ನಿ ವನಜಾ ಬಿ. ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ಬಂಡವಾಳ ಹೂಡಲಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಯುವ ನಟ ಯಶಸ್ ಸೂರ್ಯ ನಟಿಸುತ್ತಿದ್ಡು, ಬಿ.ಸಿ ಪಾಟೀಲ್ ಬಹಳ ದಿನಗಳ ನಂತರ ಒಂದು ಪ್ರಮುಖ ಪಾತ್ರಕ್ಕಾಗಿ ಈ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ನಟ ದರ್ಶನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಚಿತ್ರದ ಕುರಿತು ಇನ್‌ಸ್ಟಾಗ್ರಾಂ ಮುಖಾಂತರ ಪ್ರತಿಕ್ರಿಯೆ ನೀಡಿರುವ ಯೋಗರಾಜ್‌ ಭಟ್‌, ‘ಇದು ಆ್ಯಕ್ಷನ್ ಡ್ರಾಮಾ ಸಿನಿಮಾ. ಶೀರ್ಷಿಕೆ ಅನಾವರಣಗೊಳಿಸಿದ ಚಾಲೆಂಜಿಗ್ ಸ್ಟಾರ್ ದರ್ಶನ್, ಬಿ.ಸಿ ಪಾಟೀಲ್ ಹಾಗೂ ಕುಟುಂಬ, ನಾಯಕ ಯಶಸ್ ಸೂರ್ಯ, ಹರಿಕೃಷ್ಣ, ನಿರಂಜನ್ ಬಾಬು, ವಿಕಾಸ್ ಹಾಗೂ ನನ್ನ ಇಡೀ ತಂಡಕ್ಕೆ ನನ್ನ ಅನ್‌ಲಿಮಿಟೆಡ್ ಅಕ್ಕರೆಗಳು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ. ಛಾಯಾಗ್ರಾಹಕ ನಿರಂಜನ್ ಬಾಬು ಇದೇ ಮೊದಲ ಬಾರಿಗೆ ಯೋಗರಾಜ್‌ ಭಟ್‌ ಅವರ ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದು, ಭಟ್ರ ಜೊತೆಗೂಡಿ ‘ಡ್ರಾಮಾ’ ಚಿತ್ರದ ಚಿತ್ರಕಥೆ ರಚಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ಮತ್ತೊಮ್ಮೆ ಭಟ್ರ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.