ADVERTISEMENT

‘ಬನಾರಸ್‌’ಸಿನಿಮಾ ಬಹಿಷ್ಕಾರ ಕರೆಗೆ ಝೈದ್‌ ಖಾನ್‌ ಬೇಸರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2022, 11:00 IST
Last Updated 1 ಅಕ್ಟೋಬರ್ 2022, 11:00 IST
ಸೋನಲ್‌ ಮೋಂತೆರೋ, ಝೈದ್‌ ಖಾನ್‌
ಸೋನಲ್‌ ಮೋಂತೆರೋ, ಝೈದ್‌ ಖಾನ್‌   

ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ಅವರ ‘ಬನಾರಸ್‌’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಚಿತ್ರವನ್ನು ಬಹಿಷ್ಕರಿಸಿ ಎಂಬ ಪೋಸ್ಟ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದಕ್ಕಾಗಿ ನಟ ಝೈದ್‌ ಖಾನ್‌ ಬೇಸರ ವ್ಯಕ್ತಪಡಿಸಿದ್ದಾರೆ. ತಂದೆಯ ರಾಜಕೀಯದೊಂದಿಗೆ ತಮ್ಮ ಸಿನಿಮಾವನ್ನು ಬೆಸೆಯಬೇಡಿ. ಈ ವಿಷಯದಲ್ಲಿ ತನಗೂ, ತಮ್ಮ ತಂದೆಗೂ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದ ಚಿತ್ರಮಂದಿರಗಳಲ್ಲಿ ಇನ್ನುಮುಂದೆ ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯನ್ನೂ ಹಾಕುವಂತೆ ಝೈದ್ ಖಾನ್ ಅವರು ಶನಿವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ‘ನಾನು ಒಬ್ಬ ಕಲಾವಿದ. ಪ್ರಾಮಾಣಿಕವಾಗಿ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಇದರಲ್ಲಿ ನನ್ನದೇನು ತಪ್ಪಿದೆ? ಸೋಲು ಮತ್ತು ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಳ್ಳುವ ಸ್ವಭಾವ ನನ್ನದು. ನಾನೂ ಈ ನೆಲದ ಕಲಾವಿದ. ಜನ ಚಿತ್ರ ನೋಡಿ ಆಶೀರ್ವದಿಸುತ್ತಾರೆ ಎಂದು ನಂಬಿದ್ದೇನೆ’ ಎಂದರು.

'ಬ್ಯೂಟಿಫುಲ್‌ ಮನಸುಗಳು', 'ಬೆಲ್‌ ಬಾಟಂ' ಖ್ಯಾತಿಯ ಜಯತೀರ್ಥ ನಿರ್ದೇಶನದ 'ಬನಾರಸ್' ಸಿನಿಮಾದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಯಕಿಯಾಗಿ ಸೋನಲ್‌ ಮೋಂತೆರೋ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ದೇವರಾಜ್, ಸುಜಯ್ ಶಾಸ್ತ್ರಿ, ಬರ್ಕತ್ ಆಲಿ, ಸ್ವಪ್ನ ರಾಜ್, ಚಿರಂತ್ ಮುಂತಾದವರು 'ಬನಾರಸ್'ನ‌ಲ್ಲಿ ನಟಿಸಿದ್ದಾರೆ. ನವೆಂಬರ್ 4ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಜಮೀರ್‌ ಖಾನ್‌ ಅವರನ್ನು ವಿರೊಧಿಸುವ ಕೆಲ ಸಂಘಟನೆಗಳು ಈ ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.