ಅಮ್ಮನ ದಿನಕ್ಕೆ ‘ಅಮ್ಮನ ಪ್ರೀತಿಯು ಎಂದಿಗೂ ಶಾಶ್ವತ’ ಎಂದು ಚಂದದ ರ್ಯಾಪ್ ಹಾಡು ಹಾಡಿದ್ದ ಕನ್ನಡ ರ್ಯಾಪರ್ ಕಾರ್ತಿಕ್ ಗುಬ್ಬಿ ಅವರ ರ್ಯಾಪ್ ಸಂಗೀತ ಕಾರ್ಯಕ್ರಮವು ನಗರದ ಗೋಪಾಲನ್ ಸಿನಿಮಾಸ್ನಲ್ಲಿ ನ.1ರಂದು ನಡೆಯಲಿದೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುಬ್ಬಿ ಸಂಗೀತ ಸಂಜೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತಾವು ಹಾಡಿರುವ ಎಲ್ಲಾ ರ್ಯಾಪ್ ಹಾಡುಗಳನ್ನು ಹಾಡಲಿರುವುದು ವಿಶೇಷ. ಗುಬ್ಬಿ ಅವರು ‘ಜೀವನಚೈತ್ರ’ ಸಿನಿಮಾದ ರಾಜ್ಕುಮಾರ್ ಹಾಡಿರುವ ‘ನಾದಮಯ ಈ ಲೋಕವೆಲ್ಲಾ...’ ಹಾಡನ್ನು ರ್ಯಾಪ್ ಶೈಲಿಗೆ ಒಗ್ಗಿಸಿದ್ದು, ಈ ಹಾಡು ಈಗಾಗಲೇ ಯೂಟ್ಯೂಬ್ನಲ್ಲಿ ಹೆಚ್ಚು ವೈರಲ್ ಆಗಿದೆ. ಈ ಹಾಡನ್ನೂ ಸಹ ಇಲ್ಲಿ ಹಾಡಲಿದ್ದಾರೆ. ಇವರಿಗೆ ಗಾಯಕಿ ಮಧುರಾ ಭಟ್ ಜೊತೆಗೂಡಲಿದ್ದಾರೆ.
ಗುಬ್ಬಿ ಅವರು ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ಜರ್ಮನ್ ಭಾಷೆಗಳಲ್ಲಿ ರ್ಯಾಪ್ ಹಾಡುಗಳನ್ನು ಹಾಡುತ್ತಾರೆ. ಸಾಹಿತ್ಯವನ್ನು ತಾವೇ ಬರೆದು, ಸಂಗೀತ ಸಂಯೋಜನೆ ಮಾಡುತ್ತಾರೆ. ‘ಕನ್ನಡದಲ್ಲಿ ಪಾಪ್ ಸಾಂಗ್ಗಳನ್ನೇ ರ್ಯಾಪ್ ಹಾಡುಗಳೆಂದು ಬಿಂಬಿಸಲಾಗುತ್ತದೆ. ಕನ್ನಡದಲ್ಲಿ ಹೆಚ್ಚು ರ್ಯಾಪ್ ಹಾಡುಗಳು ಬರಬೇಕು’ ಎಂದು ಹೇಳುವ ಅವರು, ಕನ್ನಡದಲ್ಲೇ ಹೆಚ್ಚು ಹೆಚ್ಚು ಸಾಹಿತ್ಯದ ರ್ಯಾಪ್ ಹಾಡುಗಳನ್ನು ಕಟ್ಟುತ್ತಿದ್ದಾರೆ. ಎಂಜಿನಿಯರ್ ಉದ್ಯೋಗದಲ್ಲಿದ್ದ ಅವರು ವೃತ್ತಿಗೆ ರಾಜೀನಾಮೆ ನೀಡಿ, ರ್ಯಾಪ್ ಸಂಗೀತದಲ್ಲೇ ಮುಂದುವರಿಯುವ ಅಭಿಲಾಷೆ ಹೊಂದಿದ್ದಾರೆ. ಸಿನಿಮಾದಲ್ಲೂ ಕನ್ನಡ ರ್ಯಾಪ್ ಹಾಡುಗಳು ಹೆಚ್ಚಾಗಬೇಕು ಎಂದು ಹೇಳುವ ಅವರು, ವಿಜಯ್ ರಾಘವೇಂದ್ರ ಅಭಿನಯದ ‘ಪುನರಾಗಮನ’ ಚಿತ್ರಕ್ಕೆ ರ್ಯಾಪ್ ಹಾಡೊಂದನ್ನು ಹಾಡಿದ್ದಾರೆ.
ಸ್ಥಳ– ಗೋಪಾಲನ್ ಮಾಲ್, ಶಿರಸಿ ಸರ್ಕಲ್. ಶುಕ್ರವಾರ ನವೆಂಬರ್ 1. ಸಂಜೆ 6.30. ಪ್ರವೇಶ ಉಚಿತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.