ಬೆಂಗಳೂರು: ಪೃಥ್ವಿ ಅಂಬಾರ್, ಕಾವ್ಯ ಶೈವ ನಟಿಸಿರುವ ‘ಕೊತ್ತಲವಾಡಿ’ ಸಿನಿಮಾ ಒಟಿಟಿಯಲ್ಲಿ ತೆರೆಕಾಣಲು ಸಜ್ಜಾಗಿದೆ.
ಸೆ.5ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸಿನಿಮಾ ತೆರೆಕಾಣುತ್ತಿದೆ.
ನಟ ಯಶ್ ತಾಯಿ ಪುಷ್ಪಾ ಅರುಣ್ಕುಮಾರ್ ಅವರ ಮೊದಲ ನಿರ್ಮಾಣದಲ್ಲಿ, ಶ್ರೀರಾಜ್ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ.
ಚಿತ್ರಮಂದಿರಗಳಲ್ಲಿ ಸಾಧಾರಣ ಯಶಸ್ಸು ಕಂಡಿರುವ ಚಿತ್ರ, ಒಟಿಟಿಯಲ್ಲಿ ಜನರ ಮನಗೆಲ್ಲುವ ವಿಶ್ವಾಸದಲ್ಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ‘ಕೊತ್ತಲವಾಡಿ’ ಸಿನಿಮಾ ತೆರೆಕಾಣುತ್ತಿದೆ.
ಕಾವೇರಿ ನದಿ ಹರಿಯುವ ಗ್ರಾಮ ‘ಕೊತ್ತಲವಾಡಿ’. ಅಲ್ಲಿ ಅನಾಥವಾಗಿ ಬೆಳೆದ ಹುಡುಗ ಮೋಹನ (ಪೃಥ್ವಿ ಅಂಬಾರ್). ಕೆಲಸಕ್ಕೆ ಜನರನ್ನು ಒಟ್ಟುಗೂಡಿಸಿ ಕಳುಹಿಸುವ ಕೆಲಸ ಆತನದ್ದು. ಹೀಗಾಗಿ ಊರಿನ ಜನರಿಗೆ ಆತ ಅಚ್ಚುಮೆಚ್ಚು. ಅದೇ ಊರಿನಲ್ಲಿ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿರುವ ಮಂಜಿ (ಕಾವ್ಯಾ ಶೈವ) ಈತನ ಪ್ರೇಯಸಿ. ಊರಿನಲ್ಲಿ ಗುಜುರಿ ಅಂಗಡಿ ಇಟ್ಟುಕೊಂಡ ರಮೇಶ್ ಬಾಬು ಅಲಿಯಾಸ್ ಬಾಬಣ್ಣ (ಗೋಪಾಲಕೃಷ್ಣ ದೇಶಪಾಂಡೆ) ಕಸದಿಂದ ರಾಮರಸ ತೆಗೆಯುವಷ್ಟು ಚಾಲಾಕಿ. ಇಂತಹ ಊರಿನ ಜನ ಅಡವಿಟ್ಟಿದ್ದ ತಮ್ಮ ಜಮೀನು ವಾಪಸ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಬಾಬಣ್ಣನ ಮಾತಿನ ಮೋಡಿಗೆ ಒಳಗಾಗುತ್ತಾರೆ. ಇಲ್ಲಿಂದ ಕಥೆ ತೆರೆದುಕೊಳ್ಳಲಾರಂಭಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.