ADVERTISEMENT

ಬ್ರ್ಯಾಟ್‌ ಸಿನಿಮಾ ವಿಮರ್ಶೆ: ಬೆಟ್ಟಿಂಗ್‌ ಲೋಕದ ಕಥೆ, ವ್ಯಥೆ

ಅಭಿಲಾಷ್ ಪಿ.ಎಸ್‌.
Published 31 ಅಕ್ಟೋಬರ್ 2025, 9:07 IST
Last Updated 31 ಅಕ್ಟೋಬರ್ 2025, 9:07 IST
ಬ್ರ್ಯಾಟ್‌ 
ಬ್ರ್ಯಾಟ್‌    

‘ಕೌಸಲ್ಯಾ ಸುಪ್ರಜಾ ರಾಮ’ದಲ್ಲಿ ಅಪ್ಪ–ಮಗನ ಒಂದು ಬಗೆಯ ಸೈದ್ಧಾಂತಿಕ ಸಂಘರ್ಷವನ್ನು ತೆರೆಗೆ ತಂದಿದ್ದ ನಿರ್ದೇಶಕ ಶಶಾಂಕ್‌, ‘ಬ್ರ್ಯಾಟ್‌’ನಲ್ಲಿ ಪ್ರಾಮಾಣಿಕ ಅಪ್ಪ–ಅಪ್ರಾಮಾಣಿಕ ಮಗನ ನಡುವೆ ನಡೆಯುವ ಸೈದ್ಧಾಂತಿಕ ಸಂಘರ್ಷವನ್ನು ಹೇಳಿದ್ದಾರೆ. ಬೆಟ್ಟಿಂಗ್‌ ಲೋಕ ಪ್ರವೇಶಿಸುವ ನಿರ್ದೇಶಕರು ಚಿತ್ರಕಥೆಯಲ್ಲಿ ತಿರುವುಗಳಿಗೆ ಪ್ರಾಧಾನ್ಯತೆ ನೀಡಿದ್ದಾರೆ. ಆದರೆ ಸಿನಿಮಾ ಮೂಲಕ ಯುವ ಸಮಾಜಕ್ಕೆ ಹೋಗುವ ಸಂದೇಶದ ಬಗ್ಗೆ ಹೆಚ್ಚು ಚಿಂತಿಸಿದಂತಿಲ್ಲ. ಹೀಗಾಗಿ ಕ್ರಿಕೆಟ್‌ ಬೆಟ್ಟಿಂಗ್‌ ಎನ್ನುವುದೇ ಚಿತ್ರದುದ್ದಕ್ಕೂ ತುಂಬಿಕೊಂಡಿದೆ. 

ಪ್ರಾಮಾಣಿಕವಾಗಿ ದುಡಿಯುವ ಹೆಡ್‌ಕಾನ್‌ಸ್ಟೆಬಲ್‌ ‘ಮಹಾದೇವಯ್ಯ’(ಅಚ್ಯುತ್‌ ಕುಮಾರ್‌) ಹಾಗೂ ರೇಣುಕಾ (ಮಾನಸಿ ಸುಧೀರ್‌) ಪುತ್ರ ಕೃಷ್ಣ ಅಲಿಯಾಸ್‌ ಕ್ರಿಸ್ಟಿ (ಡಾರ್ಲಿಂಗ್‌ ಕೃಷ್ಣ). ಬಾಲ್ಯದಲ್ಲೇ ಇಸ್ಪಿಟ್‌ ಆಡಿ ಹಣ ಮಾಡಿದ ಚಾಲಾಕಿ. ಅಜ್ಜಿಯ ಮಾತಿಗೆ ಕಟ್ಟುಬಿದ್ದು ಬೆಟ್ಟಿಂಗ್‌ ಸಹವಾಸ ಬಿಡುವ ಕ್ರಿಸ್ಟಿ ಡೆಲಿವರಿ ಬಾಯ್‌ ಆಗಿ ಕಾರ್ಯನಿರ್ವಹಿಸುತ್ತಿರುತ್ತಾನೆ. ಈ ವೇಳೆ ನಡೆದ ಘಟನೆಯೊಂದು ಆತನನ್ನು ಹಣವಿದ್ದರೇ ಎಲ್ಲ ಎನ್ನುವ ಮನಃಸ್ಥಿತಿಗೆ ದೂಡಿ, ಮತ್ತೆ ಬೆಟ್ಟಿಂಗ್‌ ಲೋಕಕ್ಕೆ ಕಾಲಿಡುವಂತೆ ಮಾಡುತ್ತದೆ. ಇಲ್ಲಿಂದ ಕಥೆ ತೆರೆದುಕೊಳ್ಳುತ್ತದೆ. 

ಬೆಟ್ಟಿಂಗ್‌ನಿಂದ ಲಕ್ಷಾಂತರ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಪದೇ ಪದೇ ಕೇಳಿಬರುತ್ತಿರುವ ಸಂದರ್ಭದಲ್ಲೇ ಯುವಜನತೆಯನ್ನು ಆಫ್‌ಲೈನ್‌ ಬೆಟ್ಟಿಂಗ್‌ಗೆ ಪ್ರಚೋದಿಸುವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡರೆ ಕ್ಷಣಮಾತ್ರದಲ್ಲೇ ಲಕ್ಷಾಂತರ ರೂಪಾಯಿ ಮಾಡಬಹುದು, ಬೆಟ್ಟಿಂಗ್‌ ಮಾಡುತ್ತಾ ತನ್ನೊಳಗಿನ ಕೌಶಲ ಉಪಯೋಗಿಸಿದರೆ ಪ್ರಾಮಾಣಿಕವಾಗಿರುವ ಅಪ್ಪನನ್ನೂ ಒಳಗೊಂಡಂತೆ ಯಾರನ್ನಾದರೂ ಯಾಮಾರಿಸಬಹುದು ಎನ್ನುವ ಅಂಶವೇ ಸಿನಿಮಾದಲ್ಲಿ ಪ್ರಧಾನವಾಗಿದೆ. ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿ ಯುವಜನತೆಗೆ ಮಾದರಿಯಾಗುವಂಥ ‘ರಾಮ’ನ ಕಥೆಯನ್ನು ಹೇಳಿದ್ದ ಶಶಾಂಕ್‌ ಇಲ್ಲಿ ಆದರ್ಶವಾಗಲೇಬಾರದಾದ ‘ಕೃಷ್ಣ’ನನ್ನು ಕೆತ್ತಿದ್ದಾರೆ!

ADVERTISEMENT

ಕಥೆ ರಚನೆಯಲ್ಲಿ ಶಶಾಂಕ್‌ ಅವರ ಯೋಚನೆ, ಪ್ರಯೋಗ ಭಿನ್ನವಾಗಿದೆ. ‘ಲಕ್ಕಿ ಭಾಸ್ಕರ್‌’, ‘ಸ್ಪೆಷಲ್‌ 26’ ಮುಂತಾದ ಸಿನಿಮಾಗಳಲ್ಲಿ ಹಣ ಮಾಡುವ ತಂತ್ರಗಾರಿಕೆ, ಮೋಸಗಾರಿಕೆಯ ಪ್ಲಾಟ್‌ ಬಳಸಲಾಗಿತ್ತು. ಈ ಸಿನಿಮಾದಲ್ಲೂ ಇಂಥ ಅಂಶಗಳಿವೆ. ಹೆಡ್‌ಕಾನ್‌ಸ್ಟೆಬಲ್‌ ಹುದ್ದೆಗೇರಿದ ‘ಮಹಾದೇವಯ್ಯ’ನಿಗೆ ಒಂದು ಗನ್‌ ಹೇಗೆ ಕೆಲಸ ಮಾಡುತ್ತದೆ ಎನ್ನುವುದೇ ತಿಳಿದಿಲ್ಲ ಎನ್ನುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಅನಗತ್ಯವಾದ ಫೈಟ್‌ ಸೀಕ್ವೆನ್ಸ್‌ಗಳು ತಾಳ್ಮೆ ಪರೀಕ್ಷಿಸುತ್ತವೆ. ಕಥೆಗೆ ಅಗತ್ಯವೇ ಇಲ್ಲದಿರುವಾಗ ಖಳನಾಯಕನ ಬಾಯಿಗೆ ಇಂಗ್ಲಿಷ್‌ ತುರುಕಿದ್ಯಾಕೆ ಎನ್ನುವುದೇ ತಿಳಿಯುವುದಿಲ್ಲ. ನಟನೆಯಲ್ಲಿ ಡಾರ್ಲಿಂಗ್‌ ಕೃಷ್ಣ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ರಮೇಶ್‌ ಇಂದಿರಾ ಎಂದಿನಂತೆ ತಮ್ಮ ಹಾವಭಾವ, ಸಂಭಾಷಣೆ ಹೇಳುವ ಶೈಲಿಯಿಂದ ಗಮನಸೆಳೆಯುತ್ತಾರೆ. ‘ನಾನೇ ನೀನಂತೆ’ ಹಾಡು ಇಂಪಾಗಿದೆ. ‘ಬ್ರ್ಯಾಟ್‌’–2 ಬರುವ ಮುನ್ಸೂಚನೆಯೂ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.