ADVERTISEMENT

'ನೀತಿ‌' ಸಿನಿಮಾ ವಿಮರ್ಶೆ: ಸರಳ ಕಥೆಯಲ್ಲಿ ಹಲವು ತಿರುವುಗಳು

ವಿನಾಯಕ ಕೆ.ಎಸ್.
Published 6 ಜೂನ್ 2025, 11:32 IST
Last Updated 6 ಜೂನ್ 2025, 11:32 IST
ಖುಷಿ ರವಿ, ಸಂಪತ್‌ ಮೈತ್ರೇಯ
ಖುಷಿ ರವಿ, ಸಂಪತ್‌ ಮೈತ್ರೇಯ   

ಒಂದೇ ಮನೆಯಲ್ಲಿ ಒಂದು ರಾತ್ರಿ ನಡೆಯುವ ಕಥೆ ‘ನೀತಿ’. ಚಿತ್ರದಲ್ಲಿ ನಾಯಕಿಯೇ ಕುತೂಹಲಭರಿತವಾದ ಒಂದು ಆಟ ಆಡಿರುವುದರಿಂದ, ಆಕೆಯ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ. ಮನರಂಜನೆಗಿಂತ ಹೆಚ್ಚಾಗಿ ಕಂಟೆಂಟ್‌, ಕುತೂಹಲದೊಂದಿಗೆ ಸಾಗುವ ಕಥೆಯಿದು. ಕನ್ನಡದಲ್ಲಿ ಈ ರೀತಿಯ ಕಥೆಗಳು ಬಂದಿರುವುದು ವಿರಳ.

ಈ ಚಿತ್ರದಲ್ಲಿ ನಾಯಕ ಅಥವಾ ನಾಯಕಿ ಎಂಬ ಪ‍ರಿಕಲ್ಪನೆ ಇಲ್ಲ. ನೀತಿ ಮತ್ತು ಪ್ರತಾಪ್‌ ಎಂಬ ಎರಡು ಪಾತ್ರಗಳ ನಡುವೆ ಕಥೆ ನಡೆಯುತ್ತದೆ. ಉಳಿದ ನಾಲ್ಕಾರು ಪಾತ್ರಗಳು ಆಗಾಗ ಬಂದು ಹೋಗುತ್ತವೆ. ನೀತಿಯಾಗಿ ಖುಷಿ ರವಿ, ಪ್ರತಾಪ್‌ ಆಗಿ ಸಂಪತ್‌ ಮೈತ್ರೇಯ ಅಭಿನಯವೂ ಚಿತ್ರದ ಜೀವಾಳ. ಪ್ರತಾಪ್‌ ಕಳ್ಳ. ದುಡ್ಡಿನ ಅವಶ್ಯಕತೆಯಿಂದ ನೀತಿ ಮನೆಗೆ ಕದಿಯಲು ಬರುತ್ತಾನೆ. ಬದುಕಿನಲ್ಲಿ ಕಂಗೆಟ್ಟ ನೀತಿ ಆತ್ಮಹತ್ಯೆಗೆ ಸಿದ್ಧತೆ ನಡೆಸಿರುತ್ತಾಳೆ. ಮನೆಯ ಭದ್ರತಾ ಸಿಬ್ಬಂದಿ ಕಣ್ಣು ತ‌‍ಪ್ಪಿಸಿ ಮನೆಯೊಳಗೆ ಬರುವ ಪ್ರತಾಪ್‌ ನೀತಿಯ ಕಣ್ಣಿಗೆ ಬೀಳುತ್ತಾನೆ. ಅಲ್ಲಿಂದ ಚಿತ್ರದ ಕಥೆ ಪ್ರಾರಂಭವಾಗುತ್ತದೆ.

ಕಥೆಯ ಎಳೆ ಬಹಳ ಸರಳ ಎನ್ನಿಸುತ್ತದೆ. ಆದರೆ ಈ ಕಥೆಗೆ ನಿರ್ದೇಶಕರು ಅಲ್ಲಲ್ಲಿ ನೀಡಿರುವ ತಿರುವುಗಳು ಸೊಗಸಾಗಿವೆ. ಪ್ರತಾಪ್‌, ನೀತಿ ನಡುವಿನ ಹೋರಾಟದ ಬಳಿಕ ಆಕೆಯ ಬದುಕಿನ ಕಥೆ ಪ್ರಾರಂಭವಾಗುತ್ತದೆ. ಆಕೆ ಏಕೆ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದಾಳೆ ಎಂಬುದನ್ನು ನಿರ್ದೇಶಕರು ತೆರೆದಿಡುತ್ತಾರೆ. ಪರ್ಯಾಯವಾಗಿ ಪ್ರತಾಪ್‌ ಕಥೆಯೂ ಬಿಚ್ಚಿಕೊಳ್ಳುತ್ತದೆ. ನನ್ನನ್ನು ಕೊಲೆ ಮಾಡಿ ನಿನಗೆ ಬೇಕಾದ ಹಣ ತೆಗೆದುಕೊಂಡು ಹೋಗು ಎಂದು ಆಕೆ ಕಳ್ಳನಿಗೆ ಆಹ್ವಾನ ನೀಡುತ್ತಾಳೆ. ಆಕೆಯ ಕೊಲೆಯಾಗುವ ಹೊತ್ತಿಗೆ ಸಿನಿಮಾದ ಮೊದಲಾರ್ಧ ಮುಗಿದಿರುತ್ತದೆ.

ADVERTISEMENT

ಆಕೆ ಕೊಲೆಯಾಗಿರುವುದಿಲ್ಲ ಎಂಬುದು ನಿರೀಕ್ಷಿತ. ಅದೇ ದೃಶ್ಯದೊಂದಿಗೆ ದ್ವಿತೀಯಾರ್ಧ ಪ್ರಾರಂಭವಾಗುತ್ತದೆ. ಕೊಲೆಯಾಗಿದ್ದು ಮನೆಯ ಭದ್ರತಾ ಸಿಬ್ಬಂದಿ. ಆತ ಏಕೆ ಕೊಲೆಯಾದ, ಹೇಗೆ ಕೊಲೆಯಾದ ಎಂಬ ಎಳೆಯನ್ನು ಇಟ್ಟುಕೊಂಡು ಚಿತ್ರದ ಕಥೆ ಸಾಗುತ್ತದೆ. ಇದು ಮಾಮೂಲು ಎಲ್ಲೆಲ್ಲೋ ಸುತ್ತಾಡುವ ಕಥೆ ಎಂದುಕೊಳ್ಳುವ ಹೊತ್ತಿಗೆ ಮತ್ತೊಂದು ಟ್ವಿಸ್ಟ್‌. ಒಂದು ಮನೆ, ಎರಡು ಪಾತ್ರಗಳನ್ನು ಇಟ್ಟುಕೊಂಡು ನಿರ್ದೇಶಕರು ಚಿತ್ರಕಥೆಯಲ್ಲಿ ಚೆನ್ನಾಗಿ ಆಟ ಆಡಿದ್ದಾರೆ. ನೀತಿಯ ಪತಿ ಸಾಗರ್‌ ಪಾತ್ರ ಪ್ರವೇಶವಾಗುತ್ತದೆ. ನೀವು ಈತನಕ ನೋಡಿದ್ದೆಲ್ಲವೂ ಸುಳ್ಳು ಎನ್ನಿಸುವಂತೆ ಮಾಡಿಬಿಡುತ್ತದೆ ಕ್ಲೈಮ್ಯಾಕ್ಸ್‌.

ಚಿತ್ರ ಒಂದೇ ಮನೆಯಲ್ಲಿ ನಡೆಯುತ್ತದೆಯಾದರೂ ಕಥೆ ಅಲ್ಲಲ್ಲೇ ನಡೆಯುತ್ತದೆ ಅನ್ನಿಸುವುದಿಲ್ಲ. ಅಷ್ಟರಮಟ್ಟಿಗೆ ಛಾಯಾಚಿತ್ರಗ್ರಹಣ ಸೊಗಸಾಗಿದೆ. ಸಂಗೀತಕ್ಕೆ ಹೆಚ್ಚೇನೂ ಪ್ರಾಶಸ್ತ್ಯ ಸಿಕಿಲ್ಲ. ಕಥೆಯನ್ನು ಇನ್ನಷ್ಟು ನೈಜವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಕೊಲೆಯಂಥ ಕೆಲವಷ್ಟು ಸನ್ನಿವೇಶಗಳು ನಾಟಕೀಯ ಅನ್ನಿಸಿಬಿಡುತ್ತದೆ. ಇಡೀ ಚಿತ್ರವನ್ನು ಎಲ್ಲಿಯೂ ಹಾಸ್ಯವಿಲ್ಲದೆ, ಮನರಂಜನೆಯಿಲ್ಲದೆ, ಬಹಳ ವಿರಳ ಮಾತುಗಳೊಂದಿಗೆ ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾ ಎಂದು ನಿರ್ದೇಶಕರು ಟ್ರೀಟ್‌ ಮಾಡಿದ್ದಾರೆ. ಹೀಗಾಗಿ ಭಯ ಹುಟ್ಟಿಸುವ, ಕುರ್ಚಿ ತುದಿಯಲ್ಲಿ ಕೂರಿಸಿ ಕುತೂಹಲ ಮೂಡಿಸುವ ಸನ್ನಿವೇಶಗಳು ಬೇಕಿತ್ತು. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಆದ್ಯತೆ ನೀಡಬೇಕಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.