ಈ ಹಿಂದೆ ‘ಮಮ್ಮಿ’, ‘ದೇವಕಿ’ಯಂತಹ ಹಾರರ್ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್ ಎಚ್, ಪೊಲೀಸ್ ಠಾಣೆಯೊಳಗೆ ಅದೇ ಅಂಶಗಳನ್ನು ಸುತ್ತಿ ಬಳಸಿ ಹೆಣೆದಿರುವ ಕಥೆಯೇ ‘ರಾಕ್ಷಸ’ ಚಿತ್ರ. ಈ ಕಡೆ ಮಾಸ್ ಎನ್ನಲಾಗದ, ಅತ್ತ ಪೂರ್ತಿಯಾಗಿ ಹಾರರ್ ಕೂಡ ಅಲ್ಲದ ಚಿತ್ರವಿದು. ನಾಯಕ ಪ್ರಜ್ವಲ್ ದೇವರಾಜ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಸತ್ಯನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಎರಡು ಭಾಗಗಳಲ್ಲಿ ಸಿದ್ಧಗೊಂಡಿದ್ದು, ಇದು ಎರಡನೇ ಭಾಗದ ಕಥೆ. ಹೀಗಾಗಿ ಆತನ ಹಿಂದಿನ ಕಥೆ ಇಲ್ಲಿ ಪೂರ್ತಿಯಾಗಿ ಸ್ಪಷ್ಟವಾಗುವುದಿಲ್ಲ.
ಆಂಧ್ರ ಪ್ರದೇಶದ ಲಂಬಾಣಿ ತಾಂಡಾದಲ್ಲಿ ಓರ್ವ ಆರೋಪಿಯನ್ನು ಹಿಡಿಯುವುದರೊಂದಿಗೆ ಚಿತ್ರದ ಕಥೆ ಪ್ರಾರಂಭವಾಗುತ್ತದೆ. ಸಿಎಸ್ಆರ್ ಠಾಣೆಯ ಪ್ರಕರಣವೊಂದರಲ್ಲಿ ಬೇಕಾಗಿದ್ದ ಆ ಆರೋಪಿಯನ್ನು ಹಿಡಿಯಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿರುತ್ತದೆ. ಕ್ರಿಮಿನಲ್ಗಳಿಂದ ಕೂಡಿದ ಊರಿಗೆ ಕಾಲಿಡಲು ಎಲ್ಲರಿಗೂ ಭಯ. ಅಂಥ ಊರಿಗೆ ಹೋಗಬಲ್ಲ ಏಕೈಕ ಅಧಿಕಾರಿ ಇನ್ಸ್ಪೆಕ್ಟರ್ ಸತ್ಯ. ಆದರೆ ಆತ ಕೆಲಸ ಬಿಟ್ಟು ಎರಡು ವರ್ಷಗಳಾಗಿವೆ. ಹಿರಿಯ ಅಧಿಕಾರಿ ಮಾತಿಗೆ ಬೆಲೆಕೊಟ್ಟು ಸತ್ಯ ಆರೋಪಿಯನ್ನು ಹಿಡಿದು ತರುತ್ತಾನೆ. ಕೆಲಸದಲ್ಲಿ ಇಲ್ಲದ ಸತ್ಯ ಅನಿವಾರ್ಯವಾಗಿ ಆ ದಿನ ಠಾಣೆಯಲ್ಲಿ ಉಳಿದುಕೊಳ್ಳುವಂತೆ ಆಗುತ್ತದೆ. ಇಲ್ಲಿಯೇ ಕಥೆ ಹಳಿ ತಪ್ಪುತ್ತದೆ.
ಫೈಟ್, ಹೀರೊಯಿಸಂನಿಂದ ಕೂಡಿರುವ ಮಾಸ್ ಚಿತ್ರ ಸತ್ಯ ಠಾಣೆಗೆ ಕಾಲಿಡುತ್ತಿದ್ದಂತೆ, ಹಾರರ್ ಚಿತ್ರವಾಗಿ ಬದಲಾಗುತ್ತದೆ. ಆ ಠಾಣೆಯಲ್ಲೊಂದು ಬ್ರಹ್ಮರಾಕ್ಷಸ ಪೆಟ್ಟಿಗೆಯೊಳಗೆ ಕುಳಿತಿರುತ್ತದೆ. ಅದು ನಿಧಾನವಾಗಿ ಸತ್ಯನ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಅದಕ್ಕೆ ಕಾರಣವೇನು, ಹಿನ್ನೆಲೆ ಏನು ಎಂಬಿತ್ಯಾದಿ ಅಂಶಗಳೇ ಚಿತ್ರದ ಕಥೆ. ಬಹುತೇಕ ಒಂದೇ ಠಾಣೆಯಲ್ಲಿ ನಡೆಯುವ ಕಥೆ. ಜೊತೆಗೆ ಕಥೆ ಹೆಚ್ಚು ನಾಯಕ ಕೇಂದ್ರೀಕೃತವಾಗಿ ಅಲ್ಲಲ್ಲಿ ತಾಳ್ಮೆ ಪರೀಕ್ಷಿಸುತ್ತದೆ. ಕೆಲ ಹಾಸ್ಯ ಸನ್ನಿವೇಶಗಳೊಂದಿಗೆ ಮನರಂಜನೆ ನೀಡುವ ನಿರ್ದೇಶಕರ ಯತ್ನ ಫಲಿಸಿಲ್ಲ.
ಪೊಲೀಸ್ ಅಧಿಕಾರಿಯಾಗಿ ಪ್ರಜ್ವಲ್ ದೇವರಾಜ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ನಾಯಕಿಗೆ ಹೆಚ್ಚು ಕೆಲಸವಿಲ್ಲ. ಜೊತೆಗೆ ಉಳಿದ ಪಾತ್ರಗಳಿಗೂ ಹೆಚ್ಚು ಆದ್ಯತೆ ಇಲ್ಲ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಸಿನಿಮಾಕ್ಕೆ ಬಲ ನೀಡಿದೆ. ಕಥೆ ಮತ್ತು ಚಿತ್ರಕಥೆಯನ್ನು ಇನ್ನಷ್ಟು ಉತ್ತಮವಾಗಿಸುವ ಅವಕಾಶ ನಿರ್ದೇಶಕರಿಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.