ADVERTISEMENT

ರಂಗರೂಪದಲ್ಲಿ ‘ದಹನ’ ಪ್ರಯೋಗ

Dahana

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 19:45 IST
Last Updated 27 ಡಿಸೆಂಬರ್ 2018, 19:45 IST
‘ದಹನ’ನಾಟಕದ ರಿಹರ್ಸಲ್ ದೃಶ್ಯ
‘ದಹನ’ನಾಟಕದ ರಿಹರ್ಸಲ್ ದೃಶ್ಯ   

ರಂಗಭೂಮಿ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿರುವ ಎಸ್‌.ಎನ್‌.ಸೇತುರಾಮ್‌ ಅವರ ‘ದಹನ’ ಕತೆ ರಂಗರೂಪಕ್ಕೆ ಬರುತ್ತಿದೆ.

ನಟನೆ, ನಿರ್ದೇಶನ, ಸಾಹಿತ್ಯ ಹೀಗೆ ಬಹುಮುಖ ಪ್ರತಿಭೆ ಇರುವ ಸ್ವಘೋಷಿತ ಬುದ್ಧಿಜೀವಿಗಳಲ್ಲಿ ಒಬ್ಬನಾದ ಎಚ್.ಬಿ.ಆರ್ ಎನ್ನುವ ಸಾಹಿತಿಯ ಕತೆ ‘ದಹನ’. ಹೆಣ್ಣಿನ ಮನಸ್ಸಿನೊಳಗೆ ಇಳಿದು ಆಕೆಯ ಅಂತರಾಳದ ನೋವು, ಕಷ್ಟಗಳ ಬಗ್ಗೆ ಬಲು ಆಪ್ತವಾಗಿ ಬರೆಯುವ ಈತನಿಗೆ, ಅಕ್ಷತಾ ಎನ್ನುವ ಅಭಿಮಾನಿಯೊಬ್ಬಳು, ತನ್ನ ಸಮಸ್ಯೆ ಹೇಳಿಕೊಳ್ಳಬೇಕು, ಮನೆಗೆ ಬರುವಿರಾ? ಎಂದು ಬರುವ ಪೋನ್ ಕರೆಯಿಂದ ಶುರುವಾಗುವ ಕಥಾವಸ್ತು ಮುಂದೆ ಅನೇಕ ತಿರುವುಗಳನ್ನು ಪಡೆಯುತ್ತದೆ.

ಪ್ರಪಂಚದ ಕಣ್ಣಿಗೆ ಬಲು ಸಭ್ಯನಾಗಿರುವ ಎಚ್.ಬಿ.ಆರ್‌ ಬಳಿ ತನ್ನ ಸಾಂಸಾರಿಕ ಜೀವನದ ಸಮಸ್ಯೆಗಳನ್ನು ಅವಲೋಕನ ಮಾಡಿಕೊಳ್ಳುತ್ತಾ, ತನ್ನನ್ನು ತಾನು ಕಂಡು ಕೊಳ್ಳಲು ಪ್ರಯತ್ನಿಸುವ ಅಕ್ಷತಾ ಒಂದು ಕಡೆ, ಹೊರ ಜಗತ್ತಿಗೆ ಸ್ತ್ರೀ ಸಂವೇದನಾ ಬರಹಗಳಿಂದಲೇ ಬಲು ಪ್ರಸಿದ್ಧನಾದರೂ, ಅಂತರಾತ್ಮದಲ್ಲಿ ಗಂಡು ಎಂಬ ಅಹಂಕಾರ, ಅವಕಾಶವಾದರೆ ಹೆಣ್ಣಿನ ಅಸಹಾಯಕತೆ ದುರುಪಯೋಗಪಡಿಸಿಕೊಳ್ಳಲು ಹವಣಿಸುವ ಎಚ್.ಬಿ.ಆರ್ ಇನ್ನೊಂದು ಕಡೆ.

ADVERTISEMENT

ಇವರಿಬ್ಬರ ನಡುವೆ ನಡೆಯುವ ಸಂಭಾಷಣೆಗಳಲ್ಲಿ ಅಕ್ಷತಾ, ಎಚ್.ಬಿ.ಆರ್ ಬರಹಗಳಲ್ಲಿ ಕಂಡಿದ್ದ ದೇವರನ್ನು ಆತನ ನಿಜರೂಪದಲ್ಲೂ ಕಂಡುಕೊಳ್ಳಲು ಪ್ರಯತ್ನಿಸಿದರೆ, ಎಚ್‌.ಬಿ.ಆರ್ ದೇವರ ಪಟ್ಟ ಕಳಚಿಕೊಂಡು, ಸಾಮಾನ್ಯ ಮನುಷ್ಯನಂತೆ ಸುಖ ಪಡೆಯಲು ಪ್ರಯತ್ನಿಸುವನು.

ಬೇರೆಯವರ ಬೆತ್ತಲನ್ನು ನೋಡಿ ಸುಖಿಸಲು ಬಯಸುವ ಮನುಷ್ಯ, ಕೊನೆಗೊಂದು ದಿನ ತನ್ನ ಆತ್ಮಸಾಕ್ಷಿಯ ಮುಂದೆ ಬೆತ್ತಲಾದಾಗ ಅವನ ಅಹಂ, ಕಾಮ ‘ದಹನ’ವಾಗುತ್ತದೆಯೇ? ‘ಪ್ರಸಿದ್ಧ’ ನಾನು ಎಂಬ ಅಹಂನಿಂದ ಮೆರೆಯುತ್ತಿದ್ದ ಎಚ್.ಬಿ.ಆರ್‌ನ ದಾಹಕ್ಕೆ ಅಕ್ಷತಾ ಬಲಿಯಾಗುವಳೋ ಅಥವಾ ಪ್ರಪಂಚಕ್ಕೆ ಪ್ರಸಿದ್ಧರ ಅವಶ್ಯಕತೆ ಇಲ್ಲ! ಎಂಬ ಅರಿವನ್ನು ಮೂಡಿಸುವಲ್ಲಿ ಅಕ್ಷತಾ ಸಫಲಳಾಗುವುಳೋ ಎಂಬುದನ್ನು‘ದಹನ’ ರಂಗದ ಮೇಲೆ ಅನಾವರಣ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.