ADVERTISEMENT

ರಂಗಭೂಮಿ | ಪಂಚಗವ್ಯವೆಂಬ ಏಕವ್ಯಕ್ತಿಯ ಪಂಚಾಮೃತ

ಡಾ.ರುದ್ರೇಶ್ ಅದರಂಗಿ
Published 31 ಮೇ 2025, 22:30 IST
Last Updated 31 ಮೇ 2025, 22:30 IST
<div class="paragraphs"><p>ಚಿತ್ರಗಳು:<br>ತಾಯಿ ಲೋಕೇಶ್</p></div>
   

ಚಿತ್ರಗಳು:
ತಾಯಿ ಲೋಕೇಶ್

ಮಂಜು ಮುಸುಕಿದ ವೇದಿಕೆಯಲ್ಲಿ ಪ್ರಕಾಶಮಾನವಾದ ಬೆಳಕು. ಈ ಹಿನ್ನೆಲೆಯಲ್ಲಿ ಮಧುರ ನಿನಾದ. ‘ಪಂಚ ಪಂಚ ಪ್ರಪಂಚ’ವೆಂದು ಉಲಿಯುತ್ತ ಬಾಲ ಸೂರ್ಯನಂತೆ ಮೂಡುವ ‘ಗೋಕುಲ ಸಹೃದಯ’ ರಂಗದ ಮೇಲೆ ವ್ಯಾಪಿಸುತ್ತಲೇ ಪ್ರೇಕ್ಷಕರ ಮನಸ್ಸಿನಲ್ಲಿಯೂ ಮೂಡಿ ಮೆಚ್ಚುಗೆಯ ಕರತಾಡನಕ್ಕೆ ಭಾಜನನಾಗಿದ್ದು, ಇತ್ತೀಚೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶಿತವಾದ ಕಾಜಾಣ ಪ್ರಸ್ತುತಿಯ ಪಂಚಕಾವ್ಯಗಳ ಅಭಿನಯಗುಚ್ಛ ‘ಪಂಚಗವ್ಯ’ ಏಕವ್ಯಕ್ತಿ ರಂಗ ಪ್ರಯೋಗದಲ್ಲಿ.

ಕಾವ್ಯ-ಪುರಾಣಗಳಲ್ಲಿ ಅಸಾಧಾರಣ ಸಾಧನೆಯಿಂದ ಪ್ರಸಿದ್ಧರಾಗಿರುವ ಪ್ರಹ್ಲಾದ, ನಚಿಕೇತ, ಧ್ರುವ, ಅಷ್ಟಾವಕ್ರ ಹಾಗೂ ಬಾಲಕ ಶಂಕರರ ಅಪ್ರತಿಮ ಪರ್ವ ಪ್ರಸಂಗಗಳ ಪಂಚಮುಖಿ ಅನಾವರಣ ‘ಪಂಚಗವ್ಯ’ ನಾಟಕವಾಗಿದೆ. ಹಿರಣ್ಯಕಶಿಪುವಿನ ಮಗನಾದ ಬಾಲಕ ಪ್ರಹ್ಲಾದ ವಿಷ್ಣುವಿನ ಭಕ್ತ. ಮುಗ್ಧಭಕ್ತಿಯ ದೃಢತೆ ಮತ್ತು ಅನನ್ಯ ಶ್ರದ್ಧಾವಂತನಾದ ಪ್ರಹ್ಲಾದ ತಂದೆಯ ಕೋಪದ ಅಗ್ನಿದಿವ್ಯವನ್ನು ಗೆದ್ದವನು. ಹಿರಣ್ಯಕಶಿಪುವಿಗೆ ಕಂಬದಲ್ಲಿಯೂ ವಿಷ್ಣುವನ್ನು ಕಾಣಿಸಿದವನು. ಭಕ್ತಿ ಮತ್ತು ವ್ಯಗ್ರತೆಗಳ ಬೆಂಕಿಯ ಮಳೆಯಲ್ಲಿ ಅರಳಿದ ಪಾರಿಜಾತವಾಗಿ ಹೊರಹೊಮ್ಮುತ್ತಾನೆ. ಮುಗ್ಧ ಭಕ್ತ ಪ್ರಹ್ಲಾದನಾಗಿ, ಅತ್ತ ಉಗ್ರ ನರಸಿಂಹನಾಗಿ ಎರಡೂ ವಿರುದ್ಧ ಭಾವಗಳ ಅಭಿನಯ ಕಷ್ಟಸಾಧ್ಯವಾದುದನ್ನು ‘ಗೋಕುಲ’ ಲೀಲಾಜಾಲವಾಗಿ ಅಭಿನಯಿಸಿದ್ದಾನೆ.

ADVERTISEMENT

ಅರುಣಿಯೆಂಬ ಉದ್ದಾಲಕ ಮುನಿಯ ಮಗನಾದ ನಚಿಕೇತ, ತಂದೆಯನ್ನು ಪ್ರಶ್ನಿಸಿದ್ದಕ್ಕಾಗಿ ಯಮಪುರಿಗೆ ಬಂದು ಯಮನಿಗೆ ಪ್ರಶ್ನೆಗಳ ಮಳೆಗರೆಯುತ್ತಾ ಕರುಣೆಯುಕ್ಕಿಸುತ್ತಾನೆ. ಯಮನ ಪರೀಕ್ಷೆಯನ್ನು ಗೆದ್ದ ನಚಿಕೇತ ಜ್ಞಾನ ಸಂಪತ್ತನ್ನು ಆಶೀರ್ವಾದವಾಗಿ ಪಡೆದವನು. ಒಮ್ಮೆ ಯಮನಾಗಿ ದರ್ಪ ಮೆರೆದರೆ, ನಚಿಕೇತನಾಗಿ ದೃಢತೆ ಮತ್ತು ಮುಗ್ಧತೆಯನ್ನು ಅಭಿನಯಿಸುವ ‘ಗೋಕುಲ’ನ ಜುಗಲಬಂದಿ ಪ್ರೇಕ್ಷಕರಿಗೆ ರಸದೌತಣವೇ ಸರಿ. ಉತ್ತಾನಪಾದನ ಮಗನಾದ ಬಾಲಕ ಧ್ರುವ ತಂದೆಯ ತೊಡೆಯನ್ನೇರಿದ್ದಕಾಗಿ ಚಿಕ್ಕಮ್ಮನ ಅವಕೃಪೆ ಮತ್ತು ಕೋಪಕ್ಕೆ ತುತ್ತಾಗುತ್ತಾನೆ. ತನಗೆ ದಕ್ಕಬೇಕಾದ ಸ್ಥಾನವನ್ನು ಪಡೆಯಲು ನಾರದರ ಸಲಹೆಯಂತೆ ವಿಷ್ಣುವನ್ನು ಧ್ಯಾನಿಸಿ ರಾಜ ಪದವಿಯನ್ನು ಪಡೆದವನು. ‘ಗೋಕುಲ’ ಬಾಲಕ ಧ್ರುವನಾಗಿ ಪರಕಾಯ ಪ್ರವೇಶ ಮಾಡಿದ್ದಾನೆ. ‘ಓಂ ನಮೋ ಭಗವತೇ ವಾಸುದೇವಾಯ’ ವಯಸ್ಸಿಗೆ ಮೀರಿದ ಮಂತ್ರೋಚ್ಛಾರಣೆ ಅತ್ಯಂತ ಸುಸಂಬದ್ಧವಾಗಿದ್ದವಾಗಿದೆ.

ಕಹೋದನನ ಮಗನಾದ ಅಂಗವಿಕಲ ಬಾಲಕ ಅಷ್ಟಾವಕ್ರ ವಂದಿನನ ಯಜ್ಞ ಪ್ರವೇಶಿಸಲು ತಡೆಯಲ್ಪಡುತ್ತಾನೆ. ಅಸಾಧಾರಣ ಪ್ರತಿಭಾವಂತನಾದ ಅಷ್ಟಾವಕ್ರ ವಾದದಲ್ಲಿ ವಂದಿನ್‌ನನ್ನು ಸೋಲಿಸಿ ಯಜ್ಞಕ್ಕೆ ಪ್ರವೇಶ ಪಡೆದುದಲ್ಲದೆ, ತಂದೆಯನ್ನು ಮರಳಿಪಡೆಯುತ್ತಾನೆ. ಅಂಗವಿಕಲತೆಯ ಅಷ್ಟಾವಕ್ರನಾಗಿ ‘ಗೋಕುಲ’ನದು ಅಸಾಧಾರಣ ಅಭಿನಯ. ಕೈ, ಕಾಲು, ತಲೆ, ಕಣ್ಣು, ಬಾಯಿ, ಹೊಟ್ಟೆ, ತೊದಲುಮಾತು ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದೆ.

ಬಾಲ್ಯದಲ್ಲಿಯೇ ಸನ್ಯಾಸತ್ವವನ್ನು ಸ್ವೀಕರಿಸಿದ ಶಂಕರ ತಾಯಿಯ ಅಂತ್ಯಕ್ರಿಯೆಗೆ ಬ್ರಾಹ್ಮಣರನ್ನು ಅಂಗಲಾಚಿದಾಗ, ನಿರಾಕರಿಸಿ ನಿಂದಿಸುತ್ತಾರೆ. ಕ್ರುದ್ಧನಾದ ಬಾಲಕ ಬ್ರಾಹ್ಮಣತ್ವಕ್ಕೆ ಮಾನವೀಯ ಮೌಲ್ಯಗಳ ಭಾಷ್ಯವನ್ನು ಬರೆಯುತ್ತಾರೆ. ‘ಗೋಕುಲ’ ಬಾಲಕ ಶಂಕರನಾಗಿ ಅಮೋಘ ಅಭಿನಯ. ಮುಗ್ಥತೆ ಮತ್ತು ಕ್ರುದ್ಧತೆಗಳೆರಡೂ ಹದವಾಗಿ ಮೇಳೈಸಿವೆ.

‘ಗೋಕುಲ ಸಹೃದಯ’ ನಾಲ್ಕನೇ ವಯಸ್ಸಿನಲ್ಲಿಯೇ ರಂಗವೇರಿದವನು. ‘ಗೋಕುಲ’ ಅಭಿನಯದ ‘ಚಿಟ್ಟೆ’ ಏಕವ್ಯಕ್ತಿ ಪ್ರಯೋಗ 120 ಪ್ರದರ್ಶನಗಳಿಂದ ದಾಖಲೆಗಳನ್ನು ಮಾಡಿದ್ದು, ‘ಪಂಚಗವ್ಯ’ ಪಂಚಾಮೃತವನ್ನುಣಬಡಿಸುತ್ತದೆ. ಇದುವರೆಗೆ ವಯಸ್ಕರು ಏಕವ್ಯಕ್ತಿ ನಾಟಕ ಅಭಿನಯಿಸಿದ್ದರೂ ಬಾಲಕನಾಗಿ ‘ಗೋಕುಲ ಸಹೃದಯ’ ಮೊದಲಿಗನಾಗಿದ್ದಾನೆ. ಸುಮಾರು ಒಂದು ಗಂಟೆ ನಲ್ವತ್ತೆಂಟು ನಿಮಿಷಗಳ ‘ಪಂಚಗವ್ಯ’ ನಾಟಕದಲ್ಲಿ ಇವನದು ಅಸಾಧಾರಣ ಅಭಿನಯ. ಸಂಭಾಷಣೆಯಲ್ಲಿ ತೊದಲದೆ, ಸುದೀರ್ಘಾವಧಿಯಲ್ಲೂ ಬಳಲದೆ ಸಮರ್ಥವಾಗಿ ಶಾರೀರ ಕಾಪಾಡಿಕೊಂಡಿದ್ದಾನೆ. ಪಾತ್ರದಿಂದ ಮತ್ತೊಂದು ಪಾತ್ರಕ್ಕೆ ಸಾಗುವ ‘ಗೋಕುಲ’ ವಯಸ್ಸಿಗೆ ಮೀರಿದ ವೀರ, ರೌದ್ರ, ಗಂಭೀರ, ಭಯಾನಕ, ಭೀಭತ್ಸ ರಸಗಳನ್ನು ಮನೋಜ್ಞವಾಗಿ ಅಭಿನಯಿಸಿದ್ದಾನೆ. ಪ್ರಹ್ಲಾದನಾಗಿ ಅಂಬೆಗಾಲಿಡುತ್ತಾ ಪ್ರವೇಶಿಸಿ, ಪಾತ್ರದಿಂದ ಪಾತ್ರಕ್ಕೆ ತ್ರಿವಿಕ್ರಮನಾಗಿದ್ದಾನೆ.

ಪೌರಾಣಿಕ ವಸ್ತುವನ್ನು ಹದವಾಗಿ ಸಮಕಾಲೀನ ಸಂದರ್ಭಕ್ಕೆ ಒಗ್ಗಿಸಿರುವ ಎಸ್.ಎಲ್.ಎನ್. ಸ್ವಾಮಿ ಅವರು ‘ಪಂಚಗವ್ಯ’ ನಾಟಕವನ್ನು ರಚಿಸಿ, ವಿನ್ಯಾಸಗೊಳಿಸಿ, ಸಂಗೀತಕ್ಕೆ ಅಳವಡಿಸಿ ನಿರ್ದೇಶನ ಮಾಡಿದ್ದಾರೆ. ರಂಗದಲ್ಲಿ ಎರಡು ಮಟ್ಟಿನ ಪ್ಲಾಟ್‌ಫಾರ್ಮ್, ಮಧ್ಯದಲ್ಲಿ ಆಸೀನ, ಎರಡೂ ಬದಿಗಳಲ್ಲಿ ಶಂಖ ಮತ್ತು ಚಕ್ರ ರಂಗಸಜ್ಜಿಕೆ ನಿರ್ದೇಶಕರ ಕಲಾಪ್ರೌಢಿಮೆಗೆ ಸಾಕ್ಷಿ. ‘ಗೋಕುಲ’ನ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಪುರಾಣವನ್ನು ನೋಡುವ ಅವರ ದೃಷ್ಟಿಕೋನ ಪುರಾಣವನ್ನು ಮಥಿಸಿ ಮಾನವೀಯತೆಯ ಅಮೃತವನ್ನು ಹೊರತೆಗೆಯುತ್ತದೆ. ವಸ್ತುವಿಗೆ ಸೂಕ್ತವಾದ ಕಥನ, ಕಥನವನ್ನು ಲೀಲಾಜಾಲವಾಗಿ ಅಭಿನಯಿಸುವ ‘ಗೋಕುಲ ಸಹೃದಯ’, ರವಿಶಂಕರರ ಬೆಳಕು, ಅಭಿಷೇಕ್ ಮತ್ತು ಗೌತಮ್ ರವರ ಪ್ರಸಾದನ, ಶ್ರೀನಿ ಸಂಪತ್ ಲಕ್ಷ್ಮಿಯವರ ರಂಗಸಜ್ಜಿಕೆ, ಲೋಕೇಶ್ ಕುಮಾರ್ ಅವರ ಸಂಗೀತ ನಿರ್ವಹಣೆ ಎಲ್ಲವೂ ಸೇರಿ ‘ಪಂಚಗವ್ಯ’ ರಸದೌತಣವಾಗಿದೆ.v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.