ADVERTISEMENT

Bigg Boss-8| ಸುದೀಪ್‌ಗೆ ಅನಾರೋಗ್ಯ: ಬೇರೊಬ್ಬ ನಿರೂಪಕರ ಮೂಲಕ ‘ವಾರದ ಕಥೆ'?

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 12:13 IST
Last Updated 15 ಏಪ್ರಿಲ್ 2021, 12:13 IST
ಸುದೀಪ್‌
ಸುದೀಪ್‌   

ಬೆಂಗಳೂರು: ನಟ, ಬಿಗ್‌ಬಾಸ್‌ ನಿರೂಪಕರಾದ ಕಿಚ್ಚ ಸುದೀಪ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಈ ವಾರಾಂತ್ಯದಲ್ಲಿ ಬಿಗ್‌ಬಾಸ್‌ ಕಾರ್ಯಕ್ರಮ ನಡೆಸಿಕೊಡಲು ಮನೆಗೆ ಹೊಸ ನಿರೂಪಕರೊಬ್ಬರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕಲರ್ಸ್‌ ಕನ್ನಡ ಚಾನೆಲ್‌ ಮೂಲಗಳು ತಿಳಿಸಿವೆ.

ಬಿಗ್‌ಬಾಸ್‌ 8ನೇ ಆವೃತ್ತಿ 7ನೇ ವಾರಕ್ಕೆ ಕಾಲಿಟ್ಟಿದ್ದು, ಪ್ರತಿ ವಾರಾಂತ್ಯ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್‌ ಸಂಡೇ ವಿದ್‌ ಸುದೀಪ್‌’ ಕಾರ್ಯಕ್ರಮಗಳನ್ನು ಸುದೀಪ್‌ ನಡೆಸಿಕೊಡುತ್ತಿದ್ದರು. ಇದರಲ್ಲಿ ಭಾನುವಾರ ಎಲಿಮಿನೇಷನ್‌ ಪ್ರಕ್ರಿಯೆಯೂ ಇರುತ್ತಿತ್ತು. ಪ್ರತಿ ಶನಿವಾರ ಇಡೀ ದಿನ ಎರಡೂ ದಿನಗಳ ಶೂಟಿಂಗ್‌ ನಡೆಯುತ್ತಿತ್ತು. ಈ ವಾರ, ಸುದೀಪ್‌ ಅವರ ಬದಲಾಗಿ, ಮತ್ತೊಬ್ಬ ನಿರೂಪಕರನ್ನು ಆಹ್ವಾನಿಸಲು ಕಲರ್ಸ್‌ ಕನ್ನಡ ಚಿಂತನೆ ನಡೆಸಿದೆ. ಈ ಕುರಿತು ಚರ್ಚೆ ನಡೆಯುತ್ತಿದೆ. ಹೀಗಾಗಿ ಎಲಿಮಿನೇಷನ್‌ ಇದ್ದೇ ಇರುತ್ತದೆ ಎಂದು ಚಾನೆಲ್‌ ಮೂಲಗಳು ತಿಳಿಸಿವೆ.

ಹೊಸ ನಿರೂಪಕರೊಬ್ಬರನ್ನು ಆಹ್ವಾನಿಸದೇ ಇದ್ದಲ್ಲಿ ಸ್ಪರ್ಧಿಗಳಿಗೆ ಈ ವಾರ ಹೆಚ್ಚಿನ ಆ್ಯಕ್ಟಿವಿಟೀಸ್‌ ನೀಡುವ ಸಾಧ್ಯತೆ ಇದ್ದು, ಮುಂದಿನ ವಾರ ಇಬ್ಬರನ್ನು ಎಲಿಮಿನೇಟ್‌ ಮಾಡುವ ಸಾಧ್ಯತೆ ಇದೆ.

ADVERTISEMENT

ಕೋವಿಡ್‌–19 ಹಿನ್ನೆಲೆಯಲ್ಲಿ ಈ ಬಾರಿ ಬಿಗ್‌ಬಾಸ್‌ ಮನೆ ಪ್ರವೇಶಿಸುವ ಮೊದಲೇ ಎಲ್ಲ ಸ್ಪರ್ಧಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್‌ನಲ್ಲಿ ಇರಿಸಿ ಮನೆ ಒಳಗೆ ಕಳುಹಿಸಲಾಗಿತ್ತು. ಸುದೀಪ್‌ ಅವರೂ ಸೇರಿದಂತೆ ಪ್ರತಿ ಬಾರಿ ಬಿಗ್‌ಬಾಸ್‌ ಮನೆ ಒಳಗೆ ಪ್ರವೇಶಿಸುವ ಎಲ್ಲರಿಗೂ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.