
ಗಿಲ್ಲಿ ನಟ, ರಘು, ಅಶ್ವಿನಿ ಗೌಡ
ಚಿತ್ರ: ಜಿಯೋ ಹಾಟ್ಸ್ಟಾರ್
ಬಿಗ್ಬಾಸ್ ಮನೆಯಲ್ಲಿ ಕಳಪೆ ಪಟ್ಟ ಕೊಟ್ಟ ಬಳಿಕ, ಅಲ್ಲಿನ ಮೂಲ ನಿಯಮ ಉಲ್ಲಂಘಿಸಿದ್ದ ಅಶ್ವಿನಿ ಗೌಡ ಅವರು ಗಾರ್ಡನ್ ಏರಿಯಾದಲ್ಲಿರುವ ಎಲ್ಲಾ ಕ್ಯಾಮೆರಾಗಳ ಮುಂದೆ ಬಂದು ಕ್ಷಮೆಯಾಚಿಸಿದ್ದಾರೆ. ಬಿಗ್ಬಾಸ್ ಮನೆಯ ನಿಯಮ ಉಲ್ಲಂಘಿಸಿದರೆ ಶಿಕ್ಷಿಸುವುದು ಸಾಮಾನ್ಯ ಸಂಗತಿ. ಅದರಲ್ಲೂ ಗೊತ್ತಿದ್ದೂ ಅಲ್ಲಿಯ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಶಿಕ್ಷೆ ವಿಧಿಸುವುದು ಖಚಿತ.
ಈ ಸೀಸನ್ನಲ್ಲಿಯೂ ಬಿಗ್ಬಾಸ್ ಮನೆಯ ನಿಯಮ ಉಲ್ಲಂಘನೆ ಮಾಡಿದ ಅಶ್ವಿನಿ ಗೌಡಗೆ ಶಿಕ್ಷೆ ನೀಡಲಾಗಿದೆ. ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡಗೆ ಶಿಕ್ಷೆ ಕೊಟ್ಟಿದ್ದಾರೆ. ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಎಂಬಂತೆ ಅಶ್ವಿನಿ ಗೌಡ ಬಿಗ್ಬಾಸ್ ಮನೆಯ ಗಾರ್ಡನ್ ಏರಿಯಾದ ಎಲ್ಲಾ ಕ್ಯಾಮೆರಾಗಳ ಮುಂದೆ ನಿಂತು ಕ್ಷಮೆ ಕೇಳಿದ್ದಾರೆ. ಮಾತ್ರವಲ್ಲ ಬಿಗ್ಬಾಸ್ ತಂಡಕ್ಕೂ ಕ್ಷಮೆಯಾಚಿಸಿದ್ದಾರೆ.
ಅಶ್ವಿನಿ ಗೌಡ ಅವರಿಗೆ ಕ್ಯಾಪ್ಟನ್ ರಘು ಕಳಪೆ ಪಟ್ಟ ಕೊಟ್ಟಿದ್ದರು. ಹೀಗಾಗಿ ಕಳಪೆ ಪಟ್ಟ ಸ್ವೀಕರಿಸಿದ ಅಶ್ವಿನಿ ಗೌಡ ಜೈಲಿನಲ್ಲಿದ್ದುಕೊಂಡು ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿದ್ದರು. ಕಳಪೆ ಪಟ್ಟ ಕೊಟ್ಟಿದ್ದಕ್ಕೆ ಕೋಪಗೊಂಡಿದ್ದ ಅಶ್ವಿನಿ ಗೌಡ ಉದ್ದೇಶಪೂರ್ವಕವಾಗಿ ಸೇಬು ಹಣ್ಣು ತಿಂದಿದ್ದರು. ಜೈಲಿನಿಂದ ಆಚೆ ಬಂದು ಸಾಕಷ್ಟು ಸಮಯ ಮನೆಯಲ್ಲಿ ಕಳೆದಿದ್ದರು. ಮಾತ್ರವಲ್ಲದೇ ಜೈಲಿನ ಕಂಬಿಗಳ ಮೇಲೆ ಹತ್ತಿ ಕುಳಿತುಕೊಂಡಿದ್ದರು. ಹೀಗಾಗಿ ಈ ವಿಚಾರವನ್ನು ಕಿಚ್ಚ ಸುದೀಪ್ ಕಳೆದ ಸಂಚಿಕೆಯಲ್ಲಿ ಪ್ರಸ್ತಾಪ ಮಾಡಿದರು.
‘ಅಶ್ವಿನಿ ಅವರೇ ನೀವು ಕ್ಯಾಪ್ಟನ್ಗೆ ಕೀಟಲೆ ಮಾಡಬೇಕು ಎಂದು ನಿರ್ಧರಿಸಿದ್ದೀರಿ ಸರಿ. ಆದರೆ, ಬಿಗ್ ಬಾಸ್ ನಿಯಮಗಳನ್ನು ಮುರಿದಿದ್ದೀರಿ. ಹೀಗಾಗಿ, ಗಾರ್ಡನ್ ಏರಿಯಾದಲ್ಲಿರುವ ಎಲ್ಲಾ ಕ್ಯಾಮೆರಾಗಳಿಗೆ ನೀವು ಕ್ಷಮೆ ಕೇಳಲೇಬೇಕು’ ಎಂದು ಸುದೀಪ್ ಹೇಳಿದರು. ಅಂತೆಯೇ ಅಶ್ವಿನಿ ಗೌಡ ಹೋಗಿ ಎಲ್ಲಾ ಕ್ಯಾಮೆರಾಗಳ ಎದುರು ಕ್ಷಮೆ ಕೇಳಿದ್ದಾರೆ. ‘ಬಿಗ್ಬಾಸ್ ರಘು ಅವರು ನನಗೆ ಕಳಪೆ ಪಟ್ಟ ಕೊಟ್ಟಿರುತ್ತಾರೆ. ಆಟವಾಡುವ ಭರದಲ್ಲಿ ನಾನು ಕೂಡ ಆಟ ಆಡಿಸಬೇಕು ಅಂತ ಬಿಗ್ಬಾಸ್ ಮನೆಯ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದೀನಿ ಅಂತ ಸುದೀಪ್ ಸರ್ ಹೇಳುತ್ತಾರೆ. ನನ್ನಿಂದ ಮೂಲ ನಿಯಮಗಳು ಉಲ್ಲಂಘನೆ ಆಗಿದ್ದರೇ ಮನಃಪೂರ್ವಕವಾಗಿ ಬಿಗ್ಬಾಸ್ ಇಡೀ ತಂಡಕ್ಕೆ ನಾನು ಕ್ಷಮೆ ಕೇಳುತ್ತೇನೆ. ಹಾಗೇ ನನ್ನಿಂದ ಕರ್ನಾಟಕದ ಜನತೆಗೆ ಬೇಸರವಾಗಿದ್ದರೇ ದಯವಿಟ್ಟು ಕ್ಷಮಿಸಿ’ ಎಂದು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.