
ಸುದೀಪ್
ಚಿತ್ರ: ಇನ್ಸ್ಟಾಗ್ರಾಂ
ಕನ್ನಡದ ಬಿಗ್ಬಾಸ್ ಸೀಸನ್ 12 ಕೊನೆಯ ಘಟ್ಟದಲ್ಲಿದೆ. ಇದೇ ಹೊತ್ತಲ್ಲೇ ಕಿಚ್ಚನ ಚಪ್ಪಾಳೆ ಬಗ್ಗೆ ಮಾತನಾಡಿದವರಿಗೆ ಸುದೀಪ್ ತಿರುಗೇಟು ಕೊಟ್ಟಿದ್ದಾರೆ. ಪ್ರತಿ ಸೀಸನ್ನಲ್ಲೂ ಸುದೀಪ್ ಅವರು ಕಿಚ್ಚನ ಚಪ್ಪಾಳೆ ತಟ್ಟುವುದು ವಾಡಿಕೆ. ಅದು ಆ ವಾರದಲ್ಲಿ ಉತ್ತಮವಾಗಿ ಆಡಿದ ಸ್ಪರ್ಧಿಗೆ ಸುದೀಪ್ ಅವರು ವಾರಾಂತ್ಯದ ಸಂಚಿಕೆ ಕೊನೆಯಲ್ಲಿ ಚಪ್ಪಾಳೆ ತಟ್ಟುವ ಮೂಲಕ ಅವರ ಆಟಕ್ಕೆ ಪ್ರಶಂಸೆ ನೀಡುತ್ತಾರೆ.
ಹೀಗೆ ಕಳೆದ ವಾರ ಕೂಡ ಸುದೀಪ್ ಅವರು ಒಬ್ಬರಿಗಲ್ಲ, ಇಬ್ಬರಿಗೆ ಕಿಚ್ಚನ ಚಪ್ಪಾಳೆ ತಟ್ಟಿದ್ದರು. ಒಂದು ಅಶ್ವಿನಿ ಗೌಡ, ಮತ್ತೊಂದು ಧ್ರುವಂತ್ಗೆ ವ್ಯಯಕ್ತಿಕವಾಗಿ ವಾರದ ಆಟವನ್ನು ಗಮನಿಸಿ ಚಪ್ಪಾಳೆ ನೀಡಿದ್ದರು. ಜೊತೆಗೆ ಉಡುಗೊರೆ ರೂಪದಲ್ಲಿ ಕಿಟ್ ಅನ್ನು ಸಹ ನೀಡಿದ್ದರು.
ಆದರೆ ಈ ಆವೃತ್ತಿಯ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಮೊದಲ ಬಾರಿಗೆ ಕಿಚ್ಚ ಸುದೀಪ್, ಇಡೀ ಸೀಸನ್ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಸೀಸನ್ನ ಕಿಚ್ಚನ ಚಪ್ಪಾಳೆ ನೀಡಿದ್ದರು. ‘ಈ ಸೀಸನ್ನಲ್ಲಿ ಉತ್ತಮವಾಗಿ ಆಡಿದ್ದೀರಿ ಮತ್ತು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದೀರಿ. ಅದಕ್ಕಾಗಿ ನಾನು ಮೊದಲ ಬಾರಿಗೆ ಸೀಸನ್ನ ಚಪ್ಪಾಳೆ ನೀಡುತ್ತಿದ್ದೇನೆ’ ಎಂದು ಸುದೀಪ್ ಹೇಳಿದ್ದರು.
ಗಿಲ್ಲಿ ನಟ, ಸುದೀಪ್
ಆದರೆ, ಸುದೀಪ್ ಅವರ ಈ ನಿರ್ಧಾರಕ್ಕೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಆ ಬೆನ್ನಲ್ಲೇ ಕಲರ್ಸ್ ಕನ್ನಡ ಖಾತೆಯಲ್ಲಿ ಧ್ರುವಂತ್ ಅವರಿಗೆ ಸೀಸನ್ನ ಚಪ್ಪಾಳೆ ಬದಲು ಈ ವಾರದ ಕಿಚ್ಚನ ಚಪ್ಪಾಳೆ ಎಂದು ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚನ ಚಪ್ಪಾಳೆ ಬಗ್ಗೆ ಆಡಿಕೊಂಡವರಿಗೆ, ಟ್ರೋಲ್ ಮಾಡಿದ ಕೆಲವರಿಗೆ ಸುದೀಪ್ ಅವರು ಇಂದು (ಜ.17) ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ಕಿಚ್ಚನ ಚಪ್ಪಾಳೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಎರಡು ತರ ಚಪ್ಪಾಳೆ ತಟ್ಟುತ್ತೇನೆ. ಒಂದು ಪ್ರೋತ್ಸಾಹ ಮಾಡಲು, ಇನ್ನೊಂದು ಅವರನ್ನು ತಿದ್ದಲು. ಆದರೆ ಹೊರಗಡೆ ಕೆಲವರು ಆ ಚಪ್ಪಾಳೆ ತಟ್ಟಿ ತಟ್ಟಿ ಹಾಳು ಮಾಡುತ್ತಿದ್ದಾರೆ. ಕಿಚ್ಚನ ಚಪ್ಪಾಳೆ ನನ್ನ ಅನಿಸಿಕೆ. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದಿದ್ದರೇ ಒಳ್ಳೆಯದು’ ಎಂದು ತಿರುಗೇಟು ಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.