ADVERTISEMENT

BBK9: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸಂಬರಗಿ.. ವೇದಿಕೆ ಮೇಲೆ ಕಣ್ಣೀರು 

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 4:56 IST
Last Updated 12 ಡಿಸೆಂಬರ್ 2022, 4:56 IST
   

ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿಯ 11ನೇ ವಾರ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಮನೆಯಿಂದ ಹೊರಬಿದ್ದಿದ್ದಾರೆ.

ಹೌದು, ಮನೆಯಲ್ಲಿ ಅತ್ಯಂತ ಆಕ್ರಮಣಕಾರಿ ವರ್ತನೆಯಿಂದ ಗಮನ ಸೆಳೆದ ಸಂಬರಗಿ, ಈ ವಾರ ಅತ್ಯಂತ ನೀರಸವಾಗಿ ಕಾಣಿಸಿಕೊಂಡರು. ಹಾಗಾಗಿ, 77ನೇ ದಿನಕ್ಕೆ ಆಟ ಮುಗಿಸಿದ್ದಾರೆ. ಮನೆಯಲ್ಲಿ ಬಹುತೇಕ ಎಲ್ಲರ ವಿರೋಧ ಕಟ್ಟಿಕೊಂಡಿದ್ದ ಸಂಬರಗಿ ಪ್ರತೀ ವಾರ ಒಬ್ಬರ ಜೊತೆ ಜಗಳದ ಮೂಲಕ ಸುದ್ದಿಯಾಗುತ್ತಿದ್ದರು. ಹೀಗಾಗಿ, ಪ್ರತೀ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗುತ್ತಿದ್ದರು. ಆದರೆ, ಪ್ರತೀ ವಾರ ಬಹುತೇಕ ಕೊನೆಯವರಾಗಿ ಸೇಫ್ ಆಗುತ್ತಿದ್ದರು.

ಗಡ್ಡ ಮಿಸೆ ಇದ್ದ ಮಾತ್ರಕ್ಕೆ ಗಂಡಸಲ್ಲ ಎಂದು ರೂಪೇಶ್ ಶೆಟ್ಟಿಗೆ ಬೈದಿದ್ದು, ರೂಪೇಶ್ ರಾಜಣ್ಣ ಅವರ ಜೊತೆಗಿನ ಕಾದಾಟದಲ್ಲಿ ಕನ್ನಡಪರ ಹೋರಾಟಗಾರರ ಜೊತೆಗಿನ ವಿವಾದಿತ ಹೇಳಿಕೆಗಳು ಮನೆಯಲ್ಲಿ ಸದ್ದು ಮಾಡಿದ್ದವು. ಹೊರಗಡೆ ಪ್ರತಿಭಟನೆ ನಡೆದು ಸಂಬರಗಿ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.

ADVERTISEMENT

ವೇದಿಕೆ ಮೇಲೆ ತಮ್ಮ ನಿಯಮವನ್ನು ತಾವೇ ಪಾಲಿಸುವಲ್ಲಿ ವಿಫಲವಾಗಿದ್ದರಿಂದ ಎಲಿಮಿನೇಟ್ ಆಗಿರುವೆ. ಮತ್ತೊಂದು ಅವಕಾಶ ಕೊಡಿ ಎಂದು ಸುದೀಪ್ ಬಳಿ ಕೋರಿಕೆ ಇಟ್ಟರು. ಸದ್ಯ ಮನೆಯಲ್ಲಿ ಈಗ 9 ಮಂದಿ ಇದ್ದಾರೆ. ಅವರಲ್ಲಿ ಯಾರು ಇರಬಾರದು ಎಂಬ ಪ್ರಶ್ನೆಗೆ ಅಮೂಲ್ಯ ಎಂದು ಸಂಬರಗಿ ಹೇಳಿದರು. ಅತ್ಯಂತ ಪ್ರಾಮಾಣಿಕವಾಗಿ ರೂಪೇಶ್ ಶೆಟ್ಟಿ ಆಡುತ್ತಿದ್ದಾರೆ. ಮುಂದಿನವಾರ ದಿವ್ಯಾ ಉರುಡುಗ ಎಲಿಮಿನೇಟ್ ಆಗಬಹುದು ಎಂದು ಹೇಳಿದರು. ಅರುಣ್ ಸಾಗರ್ ಮತ್ತು ರೂಪೇಶ್ ಶೆಟ್ಟಿ ಇಬ್ಬರಲ್ಲಿ ಒಬ್ಬರು ಗೆಲ್ಲಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಆವೃತ್ತಿಯಲ್ಲಿ ನವೀನರು 9 ಮತ್ತು ಪ್ರವೀಣರು 9 ಮಂದಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಅದರಲ್ಲಿ ಪ್ರವೀಣರ ಸಾಲಿನಲ್ಲಿದ್ದ ಸಂಬರಗಿ ಈ ವಾರ ಮನೆಗೆ ಹೋಗಿದ್ದಾರೆ.

ಅರುಣ್ ಸಾಗರ್ ಬೆಂಬಲ ಸಿಗಲಿಲ್ಲ.. ವೇದಿಕೆ ಮೇಲೆ ಕಣ್ಣೀರಿಟ್ಟ ಸಂಬರಗಿ

11ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಪ್ರಶಾಂತ್ ಸಂಬರಗಿ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ. ನನ್ನ ಆತ್ಮೀಯ ಗೆಳೆಯ ಅರುಣ್ ಸಾಗರ್ ನನಗೆ ನೆರವು ನೀಡಲಿಲ್ಲ ಎಂದು ಹೇಳಿದ್ದಾರೆ. ನಾವಿಬ್ಬರೂ 20 ವರ್ಷಗಳ ಸ್ನೇಹಿತರು, ಆದರೆ, ನೀನೊಬ್ಬ ಸ್ಪರ್ಧಿಯಷ್ಟೇ, ಇಲ್ಲಿ ನನ್ನಿಂದ ನಿನಗೆ ಯಾವುದೇ ಸಹಾಯ ಸಿಗುವುದಿಲ್ಲ ಎಂದು ಅರುಣ್ ಹೇಳಿಬಿಟ್ಟರು ಎಂದು ಸಂಬರಗಿ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.