ADVERTISEMENT

₹ 73 ಲಕ್ಷ ವಂಚಿಸಿದ ಆರೋಪ: ‘ಕಮಲಿ’ ಧಾರಾವಾಹಿ ನಿರ್ದೇಶಕ ಬಂಧನ

ನಿರ್ಮಾಪಕರಿಂದ ₹ 73 ಲಕ್ಷ ಪಡೆದು ವಂಚಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 19:31 IST
Last Updated 29 ಏಪ್ರಿಲ್ 2022, 19:31 IST
ಅರವಿಂದ್‌ ಕೌಶಿಕ್‌
ಅರವಿಂದ್‌ ಕೌಶಿಕ್‌   

ಬೆಂಗಳೂರು: ‘ಕಮಲಿ’ ಧಾರಾವಾಹಿ ನಿರ್ಮಾಣಕ್ಕೆ ₹ 73 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

‘ನಿರ್ಮಾಪಕ ರೋಹಿತ್ ಅವರು ಇತ್ತೀಚೆಗೆ ದೂರು ನೀಡಿದ್ದರು. ವಂಚನೆ (ಐಪಿಸಿ 420) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಅರವಿಂದ್ ಕೌಶಿಕ್‌ನನ್ನು ಬಂಧಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಬಂಧಿತ ಅರವಿಂದ್, ಖಾಸಗಿ ವಾಹಿನಿಯೊಂದರಲ್ಲಿ ಮೂಡಿಬರುತ್ತಿರುವ ‘ಕಮಲಿ’ ಧಾರಾವಾಹಿ ನಿರ್ದೇಶಕ. ‘ಹುಲಿರಾಯ’, ‘ನಮ್ಮ‌ ಏರಿಯಾದಲ್ಲಿ ಒಂದು ದಿನ' ಹಾಗೂ 'ಶಾರ್ದುಲಾ' ಸಿನಿಮಾವನ್ನೂ ಅವರು ನಿರ್ದೇಶನ ಮಾಡಿದ್ದರು’ ಎಂದೂ ತಿಳಿಸಿದರು.

ADVERTISEMENT

2018ರಲ್ಲಿ ಹಣ ಪಡೆದಿದ್ದ ನಿರ್ದೇಶಕ: ‘ಕಮಲಿ’ ಧಾರಾವಾಹಿಗಾಗಿ ಅರವಿಂದ್ ಕಥೆ ಸಿದ್ಧಪಡಿಸಿಕೊಂಡಿದ್ದರು. ಧಾರಾವಾಹಿ ನಿರ್ಮಾಣಕ್ಕೆ ಹಣದ ಅವಶ್ಯಕತೆ ಇತ್ತು. ದೂರುದಾರ ರೋಹಿತ್, 2018ರಲ್ಲಿ ಹಂತ ಹಂತವಾಗಿ ₹ 73 ಲಕ್ಷ ಹೂಡಿಕೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕಮಲಿ ಧಾರಾವಾಹಿಯಿಂದ ಇದುವರೆಗೂ ₹7 ಕೋಟಿ ಆದಾರ ಬಂದಿರುವ ಮಾಹಿತಿ ಇದೆ. ಆದರೆ, ಆದಾಯದಲ್ಲಿ ನಿರ್ಮಾಪಕ ರೋಹಿತ್‌ಗೆ ಯಾವುದೇ ಪಾಲು ನೀಡಿರಲಿಲ್ಲ’ ಎಂದೂ ತಿಳಿಸಿದರು.

ಒಪ್ಪಂದದಲ್ಲಿ ನಿರ್ಮಾಪಕರ ಹೆಸರಿಲ್ಲ: ‘ಹಣಕಾಸಿನ ವ್ಯವಹಾರ ಹಾಗೂ ಪ್ರಸಾರದ ಸಂಬಂಧ ಖಾಸಗಿ ವಾಹಿನಿ ಜೊತೆ ಧಾರಾವಾಹಿ ತಂಡ ಒಪ್ಪಂದ ಮಾಡಿಕೊಂಡಿತ್ತು. ಧಾರಾವಾಹಿ ಟೈಟಲ್ ಕಾರ್ಡ್‌ನಲ್ಲಿ ಇರುತ್ತಿದ್ದ ನಿರ್ಮಾಪಕರ ಹೆಸರು, ಒಪ್ಪಂದದಲ್ಲಿ ಇರಲಿಲ್ಲವೆಂದು ದೂರುದಾರರು ಆರೋಪಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಖಾಸಗಿ ವಾಹಿನಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅದೇ ಕಾರಣಕ್ಕೆ ರೋಹಿತ್, ದೂರು ನೀಡಿದ್ದರು’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.