
ರಾಮನಗರ: ಬಿಗ್ಬಾಸ್ ರಿಯಾಲಿಟಿ ಶೋ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದಡಿ ನಿರೂಪಕ, ನಟ ಕಿಚ್ಚ ಸುದೀಪ್ ವಿರುದ್ಧ ಶುಕ್ರವಾರ ದೂರು ನೀಡಲಾಗಿದೆ.
ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ, ರಾಮನಗರ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ. ಸ್ಪರ್ಧಿಗಳಾದ ಅಶ್ವಿನಿ ಗೌಡ ಹಾಗೂ ರಿಷಾ ಗೌಡ ವಿರುದ್ಧವೂ ದೂರು ನೀಡಿದ್ದಾರೆ.
ಶೋ ನಲ್ಲಿ ಇತ್ತೀಚೆಗೆ ಸ್ಪರ್ಧಿಯೊಬ್ಬರು,ಮತ್ತೊಬ್ಬ ಸ್ಪರ್ಧಿ ವಿರುದ್ಧ ಜಾತಿ ಆಧಾರಿತ ಹೇಳಿಕೆ ನೀಡಿದ್ದಾರೆ. ಈಬಗ್ಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚಿನ ಸಂಚಿಕೆಯೊಂದರಲ್ಲಿ ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರೊಂದಿಗೆ ಸುದೀಪ್ ಮಾತನಾಡುತ್ತಾ ‘ಅದೇ ನನ್ನ ಪಿತ್ತ ನೆತ್ತಿಗೆ ಏರುತ್ತಲ್ವಾ ಅದಕ್ಕಿಂತ ಮೊದಲು ರಕ್ಷಿತಾ ಅವರೇ ನಾನು ಎರಡು ರೀತಿಯಲ್ಲಿ ನಗುತ್ತೇನೆ. ಒಂದು ತುಂಬಾ ನಗು ಬಂದಾಗ, ಇನ್ನೊಂದು ಏರಿದಾಗ’ ಎನ್ನುವ ಮಾತನ್ನಾಡಿದ್ದರು. ಇದು ದರ್ಪದ ಮಾತಾಗಿದೆ. ಇಡೀ ಮಹಿಳಾ ಕುಲಕ್ಕೆ ಮಾಡುತ್ತಿರುವ ಅವಮಾನ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸ್ಪರ್ಧಿ ಅಶ್ವಿನಿಗೌಡ ತಮ್ಮ ಸಹಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ‘ಎಸ್ ಕ್ಯಾಟಗರಿ’ ಎಂಬ ಪದ ಬಳಸಿದ್ದಾರೆ. ಇದು ಜಾತಿ ಆಧಾರಿತ ಹೇಳಿಕೆ. ಮತ್ತೊಬ್ಬ ಸ್ಪರ್ಧಿ ಗಿಲ್ಲಿ ನಟ ಮೇಲೆ ರಿಷಾ ಗೌಡ ಹಲ್ಲೆ ನಡೆಸಿದ್ದಾರೆ. ಆದರೂ, ಕಾರ್ಯಕ್ರಮದ ಆಯೋಜಕರು ಯಾವುದೇ ಕ್ರಮ ವಹಿಸಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.