ಕೊರೊನಾ–ಲಾಕ್ಡೌನ್ ಅವಧಿಯಲ್ಲಿ ಧಾರಾವಾಹಿಗಳ ಚಿತ್ರೀಕರಣವೇ ನಿಂತು ಹೋಯಿತು. ಇದೇ ಸಂದರ್ಭದಲ್ಲಿ ದಶಕಗಳ ಹಿಂದೆ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿಗಳಾದ ರಾಮಾಯಣ, ಮಹಾಭಾರತ ಮತ್ತು ಉತ್ತರ ರಾಮಾಯಣ ಧಾರಾವಾಹಿಗಳನ್ನು ದೂರದರ್ಶನ ವಾಹಿನಿ ಮರು ಪ್ರಸಾರ ಮಾಡಿತು. ಇದಕ್ಕೂ ಮುನ್ನ ಕೆಲವು ವಾಹಿನಿಗಳು ಪೌರಾಣಿಕ ಧಾರವಾಹಿಯನ್ನು ಪ್ರಸಾರ ಮಾಡುತ್ತಾ ವೀಕ್ಷಕರನ್ನು ಸೆಳೆದಿದ್ದವು.
ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಝೀ ಕನ್ನಡ ವಾಹಿನಿ, ಈಗ ಅಂಥದ್ದೇ ಪೌರಾಣಿಕ ಧಾರವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಝೀ ವಾಹಿನಿ, ಇದೇ 22ರಿಂದ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ‘ಪರಮಾವತಾರಿ ಶ್ರೀಕೃಷ್ಣ‘ ಎಂಬ ಪೌರಾಣಿಕ ಧಾರವಾಹಿಯ ಪ್ರಸಾರ ಆರಂಭಿಸುತ್ತಿದೆ.
ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗುವ ಈ ಧಾರಾವಾಹಿ, ಕಿರುತೆರೆ ವೀಕ್ಷಕರಿಗೆ ಶ್ರೀಕೃಷ್ಣನ ಲೀಲೆಗಳನ್ನು ತೋರಿಸಲಿದೆ. ಬೆಣ್ಣೆ ಕದಿಯುವ ಮುದ್ದು ಕೃಷ್ಣ, ಗೋಪಿಕೆಯರೊಂದಿಗೆ ಆಡುವ ತುಂಟ ಕೃಷ್ಣ, ಕಂಸನನ್ನು ಕೊಲ್ಲುವ ಧೀರ ಕೃಷ್ಣ, ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರ ನಿಂತು, ಅರ್ಜುನನಿಗೆ ಭಗವದ್ಗೀತೆ ಬೋಧಿಸುವ ಕೃಷ್ಣ.. ಹೀಗೆ ಹಲವು ಕೃಷ್ಣಾವತಾರಗಳನ್ನು ಈ ಧಾರವಾಹಿಯಲ್ಲಿ ತೋರಿಸಲಿದೆ.
ಕೃಷ್ಣಾವತಾದ ಬಗೆಗಿರುವ ಹಲವು ಅನುಮಾನಗಳಿಗೂ ಈ ಧಾರವಾಹಿ ಉತ್ತರ ನೀಡಲಿದೆ. ಕೃಷ್ಣ ಯಾಕೆ ಬೆಣ್ಣೆ ಕದಿಯುತ್ತಿದ್ದ ? ರಾಧೆ–ಕೃಷ್ಣಯರ ಪ್ರೇಮದ ನಡುವೆ, ರಾಧೆಯನ್ನು ಏಕೆ ಮದುವೆಯಾಗಲಿಲ್ಲ..? ಇಂದ ಹಲವು ಕುತೂಹಲದ ಪ್ರಶ್ನೆಗಳಿಗೆ ಧಾರಾವಾಹಿ ಉತ್ತರ ನೀಡಿದೆ.
‘ಕನ್ನಡ ಕಿರುತೆರೆಯ ವೀಕ್ಷಕರು ಸದಾ ಪೌರಾಣಿಕ ಧಾರವಾಹಿಗಳನ್ನು ಇಷ್ಟಪಡುತ್ತಾರೆ. ವೀಕ್ಷಕರ ಅಭಿರುಚಿ ಅರಿತು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ನಮ್ಮ ವಾಹಿನಿ. ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಸಾಲಿಗೆ ಈ ಧಾರಾವಾಹಿಯೂ ಸೇರಲಿದೆ‘ ಎಂದು ಝೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.