ಬೆಂಗಳೂರು: ನಟ ದಿವಂಗತ ಪುನೀತ್ ರಾಜ್ಕುಮಾರ್ ಬೆಳ್ಳಿತೆರೆಯಲ್ಲಷ್ಟೇ ಅಲ್ಲದೇ ಕಿರುತೆರೆಯಲ್ಲೂ ಮಿಂಚಿದ್ದವರು. ‘ಕನ್ನಡದ ಕೋಟ್ಯಾಧಿಪತಿ’ ‘ಫ್ಯಾಮಿಲಿ ಪವರ್’ ಕಾರ್ಯಕ್ರಮಗಳ ಮುಖಾಂತರ ತಮ್ಮ ಛಾಪು ಮೂಡಿಸಿದ್ದರು. ‘ಪುನೀತ ನಮನ’ ಕಾರ್ಯಕ್ರಮದ ಬಳಿಕ ಇದೀಗ ಪುನೀತ್ ಅವರ ನೆನಪಿನಲ್ಲಿ ಮತ್ತೊಂದು ಕಾರ್ಯಕ್ರಮವನ್ನು ಕಿರುತೆರೆ ಕಲಾವಿದರು ಆಯೋಜಿಸುತ್ತಿದ್ದಾರೆ.
ಪುನೀತ ನಮನ ಕಾರ್ಯಕ್ರಮದಲ್ಲಿ ಚಂದನವನದ ಖ್ಯಾತ ಕಲಾವಿದರು ಸೇರಿದಂತೆ ತೆಲುಗು, ತಮಿಳು ಚಿತ್ರರಂಗದ ಕಲಾವಿದರೂ ಅಪ್ಪು ಅವರನ್ನು ನೆನೆದು ಶ್ರದ್ಧಾಂಜಲಿ ಸಲ್ಲಿಸಿದ್ದರು. ನ.28ರಂದು ಸಂಜೆ 4 ಗಂಟೆಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ‘ಅಪ್ಪು ಅಮರ’ ಕಾರ್ಯಕ್ರಮ ಆಯೋಜಿಸಲಿದ್ದು, ಜಯನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ಇದು ನಡೆಯಲಿದೆ.
ಕಾರ್ಯಕ್ರಮಕ್ಕೆ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಕುಟುಂಬದ ಸದಸ್ಯರನ್ನು ಸಂಘದ ಅಧ್ಯಕ್ಷರಾದ ಎಸ್.ವಿ. ಶಿವಕುಮಾರ್ ಅವರ ನೇತೃತ್ವದ ನಿಯೋಗ ಇತ್ತೀಚೆಗೆ ಆಹ್ವಾನಿಸಿತು. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಸಂಘವು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.