ಇತ್ತೀಚೆಗಷ್ಟೆ ಹೊಸ ಧಾರಾವಾಹಿ ‘ಕಾವ್ಯಾಂಜಲಿ’ ಆರಂಭಿಸಿರುವ ಉದಯ ಟಿ.ವಿ ಈಗ ಮತ್ತೊಂದು ಹೊಸ ಧಾರಾವಾಹಿ ಪ್ರಸಾರಕ್ಕೆ ಅಣಿಯಾಗುತ್ತಿದೆ.
ಕೌಟುಂಬಿಕ ಕಥೆಯ ಜತೆಗೆಹಾರಾರ್ ಅಂಶಗಳಿಂದ ಕೂಡಿರುವ ‘ಆಕೃತಿ’ ಧಾರಾವಾಹಿ ಆಗಸ್ಟ್ 24ರಿಂದ ಶುರುವಾಗಲಿದೆ.ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9:30ಕ್ಕೆ ಇದು ಪ್ರಸಾರವಾಗಲಿದೆ.
ಈ ಧಾರಾವಾಹಿಯನ್ನು ಖ್ಯಾತ ಸಿನಿಮಾ ನಿರ್ದೇಶಕ ಕೆ.ಎಂ. ಚೈತನ್ಯ ನಿರ್ಮಾಣ ಮಾಡುತ್ತಿದ್ದಾರೆ. ಹರಿದಾಸ್.ಪಿ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತಿದ್ದಾರೆ. ಎಂ. ಕುಮಾರ್ ನಿರ್ದೇಶನ ಮತ್ತುಛಾಯಾಗ್ರಹಣದ ಕುಮಾರ್ ಹೊಣೆ ಹೊತ್ತಿದ್ದಾರೆ.
‘ಇದೊಂದು ವಿಭಿನ್ನ ಕಥೆಯಾಗಿದ್ದು, ಇದುವರೆಗೂ ಕಿರುತೆರೆಯಲ್ಲಿ ನೋಡಿರದಂತಹ ಚಿತ್ರಕಥೆಯ ಶೈಲಿಯನ್ನು ಕಿರುತೆರೆ ಲೋಕಕ್ಕೆ ಹೊಸದಾಗಿ ಪರಿಚಯಿಸಲಾಗುತ್ತಿದೆ. ವೀಕ್ಷಕರಿಗೆ ವಿನೂತನ ರಂಜನೆ ಸಿಗಬೇಕೆಂದು ವಿಭಿನ್ನ ಪಾತ್ರಗಳನ್ನು ಪರಿಚಯಿಸಲಾಗುತ್ತಿದೆ.ಸಕಲೇಶಪುರ ಸುತ್ತ ಮುತ್ತಲ ಪ್ರದೇಶಗಳಲ್ಲಿ ಚಿತ್ರಕರಿಸಲಾಗಿದೆ’ ಎನ್ನುವುದು ಧಾರಾವಾಹಿ ತಂಡದ ಮಾಹಿತಿ.
‘ಕಾಲೇಜಿಗೆ ಹೋಗುವ ದಿವ್ಯಾ ನೃತ್ಯಗಾರ್ತಿಯೂ ಹೌದು. ಇವಳಿಗೆ ತಂದೆ ಪ್ರಜ್ವಲ್, ತಾಯಿ ಚೈತ್ರ ಮತ್ತು ತಮ್ಮ ಸುಜಯ್ ಇದ್ದಾರೆ. ಇವರದು ಚಿಕ್ಕ ಕುಟುಂಬ, ಸಂತೋಷ ಮನೆ ಮಾಡಿದೆ. ದಿವ್ಯಾಳ ಕುಟುಂಬ ಸಕಲೇಶಪುರದಲ್ಲಿ ಒಂದು ಹಳೆಯ ಫಾರ್ಮ್ ಹೌಸ್ ಖರೀದಿಸುತ್ತದೆ. ಆ ಮನೆಯ ಅಂಗಳದಲ್ಲಿ ಒಂದು ಮರ, ಆ ಮರದಲ್ಲಿ ಒಂದು ಆಕೃತಿ, ಅದಕ್ಕೆ ಒಂದು ಹಿನ್ನೆಲೆಯೂ ಇದೆ. ಆ ಆಕೃತಿಯಿಂದ ಸಂತೋಷ ತುಂಬಿದ್ದ ಕುಟುಂಬ ನಾನಾ ವಿಚಿತ್ರ ಘಟನೆಗಳನ್ನು ಎದುರಿಸುತ್ತಾ ಹಲವಾರು ಅನಿರೀಕ್ಷಿತ ತಿರುವುಗಳಿಗೆ ಗುರಿಯಾಗುತ್ತದೆ. ಇದು ಕಾಕತಾಳಿಯ ಅಲ್ಲ. ಇದಕ್ಕೆ ಕಾರಣವೂ ಇದೆ. ಆ ಕಾರಣ ಏನು? ಆ ಆಕೃತಿಯ ಹಿನ್ನೆಲೆ ಏನು? ಇವರ ಕುಟುಂಬಕ್ಕೂ ಆ ಮನೆಗೂ ಏನೂ ಸಂಬಂಧ? ದಿವ್ಯಾ ಅಪಾಯಗಳಿಂದ ತನ್ನ ಕುಟುಂಬವನ್ನು ಹೇಗೆ ಕಾಪಾಡುತ್ತಾಳೆ ಎಂಬುದೇ ಈ ಧಾರಾವಾಹಿಯಕಥೆ.
ಹೊಸ ಪರಿಚಯವಾಗಿ ತನ್ವಿ ರಾವ್ ಕಿರುತೆರೆಯನ್ನು ಪ್ರವೇಶಿಸುತ್ತಿದ್ದಾರೆ.ಕಿರುತೆರೆ ನಟ ಪವನ್, ನೇತ್ರಾವತಿ ಜಾದವ್, ಬಾಬಿ, ತನುಜ, ಈಟಿವಿ ಶ್ರೀಧರ್, ಉಷಾ ಭಂಡಾರಿ ಹೀಗೆ ಹಲವು ಜನಪ್ರಿಯ ಕಲಾವಿದರ ತಾರಾಬಳಗವೇ ಈ ಧಾರಾವಾಹಿಯಲ್ಲಿದೆ.
ಸಂಭಾಷಣೆ ಮೃಗಶಿರ ಶ್ರೀಕಾಂತ್, ಶೀರ್ಷಿಕೆ ಗೀತೆ ಗುರು ಕಿರಣ್, ಸಾಹಿತ್ಯ ಕವಿರಾಜ್, ಗಾಯನ ಅನುರಾಧಾ ಭಟ್, ಸಂಕಲನ ಗುರುರಾಜ್ ಬಿ.ಕೆ. ಅವರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.