ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಗಾಥೆ ಸಾರುವ 'ಮಹಾನಾಯಕ' ಧಾರಾವಾಹಿಯು ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗದಿರುವುದಕ್ಕೆ ಹಲವು ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30ಗಂಟೆಗೆ ಈ ಸೀರಿಯಲ್ ಪ್ರಸಾರವಾಗುತ್ತಿತ್ತು. ಶನಿವಾರ ಸೀರಿಯಲ್ ಪ್ರಸಾರವಾಗಿತ್ತು. ಆದರೆ, ಇಂದು ಧಾರಾವಾಹಿ ಪ್ರಸಾರವಾಗಿಲ್ಲ. ಹಾಗಾಗಿ, ಇದರ ಪ್ರಸಾರ ಸ್ಥಗಿತಗೊಂಡಿದೆಯೇ ಎಂಬ ಅನುಮಾನ ವೀಕ್ಷಕರಿಗೆ ಕಾಡುತ್ತಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
'ಭಾನುವಾರದಂದು 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾಕ್ಕೆ ಈ ಸೀರಿಯಲ್ ಅವಧಿಯನ್ನು ಮೀಸಲಿಡಲಾಗಿತ್ತು. ಹಾಗಾಗಿ, 'ಮಹಾನಾಯಕ' ಧಾರಾವಾಹಿ ಪ್ರಸಾರವಾಗಿಲ್ಲ. ಎಂದಿನಂತೆ ಮುಂದಿನ ವಾರ ನಿಗದಿತ ಸಮಯಕ್ಕೆ ಪ್ರಸಾರವಾಗಲಿದೆ' ಎಂದು ಜೀ ಕನ್ನಡ ವಾಹಿನಿ ತಿಳಿಸಿದೆ.
ಈ ಧಾರಾವಾಹಿಯ ಸ್ಥಗಿತಕ್ಕೆ ಆಗ್ರಹಿಸಿ ಕೆಲವು ವಾರಗಳ ಹಿಂದೆ ಬೆದರಿಕೆ ಕರೆಗಳು ಕೂಡ ಬಂದಿದ್ದ ಹಿನ್ನೆಲೆಯಲ್ಲಿ ಅಶೋಕನ ನಗರ ಪೊಲೀಸ್ ಠಾಣೆಗೆ ವಾಹಿನಿಯು ಮಾಹಿತಿ ನೀಡಿತ್ತು. ಆದರೆ, ಯಾವುದೇ ದೂರು ದಾಖಲಿಸಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.