ADVERTISEMENT

ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಪಿಟಿಐ
Published 27 ಮೇ 2025, 13:32 IST
Last Updated 27 ಮೇ 2025, 13:32 IST
<div class="paragraphs"><p>ಮಳೆ</p></div>

ಮಳೆ

   

(ಪ್ರಾತಿನಿಧಿಕ ಚಿತ್ರ)

ನವದೆಹಲಿ: ‘ದೇಶದ ಹಲವು ಭಾಗಗಳಲ್ಲಿ ಜೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಲಿದ್ದು, ಇದು ಗರಿಷ್ಠ ತಾಪಮಾನ ದಾಖಲಾಗುವ ಪ್ರದೇಶಗಳಲ್ಲಿನ ಉಷ್ಣಾಂಶವನ್ನು ತಗ್ಗಿಸಲು ಸಹಕಾರಿಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ಹೇಳಿದೆ.

ADVERTISEMENT

ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್ ಅವರು ಈ ಕುರಿತು ಮಾಹಿತಿ ನೀಡಿ, ‘ಜೂನ್‌ನಲ್ಲಿ ವಾಡಿಕೆಯಂತೆ 166.9 ಮಿ.ಮೀ. ಮಳೆ ಸುರಿಯಬೇಕು. ಆದರೆ ಈ ವರ್ಷ ಶೇ 108ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣದ ರಾಜ್ಯಗಳು, ಈಶಾನ್ಯ ಮತ್ತು ವಾಯವ್ಯ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಅವರು ಮಾಹಿತಿ ನೀಡಿ, ‘ಉತ್ತಮ ಮಳೆಯ ನಿರೀಕ್ಷೆ ಇರುವುದರಿಂದ, ದೇಶದ ಉತ್ತರದ ಹಲವು ಭಾಗಗಳಲ್ಲಿ ಜೂನ್‌ನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶವೂ ತಗ್ಗುವ ಸಾಧ್ಯತೆ ಇದೆ. ದೇಶದ ಮಧ್ಯ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ’ ಎಂದಿದ್ದಾರೆ.

‘ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಮಳೆಯ ಪ್ರಮಾಣ ಶೇ 106ರಷ್ಟು ಸುರಿಯಲಿದೆ. ಕಳೆದ 50 ವರ್ಷಗಳ ದಾಖಲೆಯ ಪ್ರಕಾರ ಈ ಅವಧಿಯಲ್ಲಿ (87 ಸೆಂ.ಮೀ.) ಶೇ 96ರಿಂದ ಶೇ 104ರಷ್ಟು ಮಳೆ ಸುರಿದಿದೆ. ವಾಯವ್ಯ ಭಾಗದಲ್ಲಿ ಸಾಮಾನ್ಯ ಮಳೆಯಾಗಲಿದೆ. ಈಶಾನ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಕೇಂದ್ರ ಭಾಗ ಹಾಗೂ ದಕ್ಷಿಣದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ರಾಜ್ಯಗಳಲ್ಲಿ ಮಧ್ಯಪ್ರದೇಶ, ಛತ್ತೀಸಗಢ, ಮಹಾರಾಷ್ಟ್ರ, ಒಡಿಶಾ, ಹಿಮಾಚಲ ಪ್ರದೇಶ, ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ ಸೇರಿವೆ. ಪಂಜಾಬ್, ಹರಿಯಾಣ, ಕೇರಳ ಹಾಗೂ ತಮಿಳುನಾಡಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ’ ಎಂದು ತಿಳಿಸಿದ್ದಾರೆ.

‘2009ರಿಂದ ಈಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾಡಿಕೆಗಿಂತ ಬೇಗ ಮುಂಗಾರು ಕೇರಳ ಪ್ರವೇಶಿಸಿದೆ. ಈ ಬಾರಿ ಮೇ 23ರಂದೇ ಮುಂಗಾರು ಪ್ರವೇಶಿಸಿತು. ಮುಂಬೈಗೆ 16 ದಿನ ಮುಂಚಿತವಾಗಿ ಮುಂಗಾರು ಪ್ರವೇಶಿಸಿದೆ. ಇಂಥ ವಿದ್ಯಮಾನ 1950ರಲ್ಲಿ ಆಗಿತ್ತು’ ಎಂದು ಮೋಹಪಾತ್ರ ವಿವರಿಸಿದ್ದಾರೆ.

‘2024ರಲ್ಲಿ ಭಾರತವು ಒಟ್ಟು 934.8 ಮಿ.ಮೀ. ಮಳೆಯನ್ನು ಕಂಡಿತ್ತು. ಕಳೆದ ಬಾರಿಗಿಂತ ಈ ವರ್ಷ ಶೇ 108ರಷ್ಟು ಮಳೆಯಾಗುವ ಸಾಧ್ಯತೆಗಳಿವೆ. 2023ರಲ್ಲಿ 820 ಮಿ.ಮೀ. (ಶೇ 94.4ರಷ್ಟು ಸರಾಸರಿ), 2022ರಲ್ಲಿ 925 ಮಿ.ಮೀ, 2021ರಲ್ಲಿ 870 ಮಿ.ಮೀ. ಹಾಗೂ 2020ರಲ್ಲಿ 958 ಮಿ.ಮೀ. ಮಳೆಯಾಗಿದೆ’ ಎಂದು ಐಎಂಡಿ ಮಾಹಿತಿ ಹೇಳಿದೆ.

ಭಾರತದ ಕೃಷಿ ವಲಯವನ್ನೂ ಒಳಗೊಂಡು ದೇಶದ ಆರ್ಥಿಕತೆಯು ಮೇಲೆ ಮುಂಗಾರು ಭಾರಿ ಪ್ರಭಾವ ಹೊಂದಿದೆ. ಮಳೆಯಾಶ್ರಿತ ಬೆಳೆಗಳು, ಜಲಾಶಯ, ಕುಡಿಯುವ ನೀರು ಮತ್ತು ಜಲವಿದ್ಯುತ್‌ ಕ್ಷೇತ್ರವು ಮುಂಗಾರನ್ನೇ ಅವಲಂಬಿಸಿವೆ. ಕೃಷಿ ಕ್ಷೇತ್ರವನ್ನು ದೇಶದ 42ರಷ್ಟು ಜನಸಂಖ್ಯೆ ಅವಲಂಬಿಸಿದೆ ಹಾಗೂ ದೇಶದ ಜಿಡಿಪಿಯ ಶೇ 18.2ರಷ್ಟು ಗಾತ್ರವನ್ನು ಇದು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.