ADVERTISEMENT

ಕಡಿಮೆ ದರಕ್ಕೆ ಸಸಿಗಳು ಲಭ್ಯ

ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಕ್ರಮ

ರಾಹುಲ ಬೆಳಗಲಿ
Published 5 ಜೂನ್ 2019, 20:18 IST
Last Updated 5 ಜೂನ್ 2019, 20:18 IST
ಕಲಬುರ್ಗಿ ಹೊರವಲಯದ ಸಿರನೂರ ಬಳಿಯಿರುವ ಅರಣ್ಯ ಇಲಾಖೆಯ ಸಸ್ಯಕ್ಷೇತ್ರ
ಕಲಬುರ್ಗಿ ಹೊರವಲಯದ ಸಿರನೂರ ಬಳಿಯಿರುವ ಅರಣ್ಯ ಇಲಾಖೆಯ ಸಸ್ಯಕ್ಷೇತ್ರ   

ಕಲಬುರ್ಗಿ: ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದ್ದು, ವಾತಾವರಣ ಕೊಂಚ ತಂಪಾಗಿದೆ. ಇದಕ್ಕೆ ಪೂರಕವಾಗಿ ಅರಣ್ಯ ಇಲಾಖೆಯು ವಿವಿಧೆಡೆ ಸಸಿಗಳನ್ನು ನೆಡುವುದರ ಜೊತೆಜೊತೆಗೆ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿಯನ್ನೂಮೂಡಿಸುತ್ತಿದೆ.

ಮನೆ, ಕಚೇರಿ, ಶಾಲಾ–ಕಾಲೇಜು ಆವರಣ ಹೀಗೆ ಲಭ್ಯವಿರುವ ಸ್ಥಳಗಳಲ್ಲಿಸಸಿಗಳನ್ನು ನೆಡುವಂತೆ ಪ್ರೋತ್ಸಾಹಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅದಕ್ಕಾಗಿ ಕಡಿಮೆ ದರದಲ್ಲಿ ವಿವಿಧ ರೀತಿಯ ಸಸಿಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕರಿಗಾಗಿ ಸಸಿಗಳು (ಆರ್‌ಎಸ್‌ಪಿಡಿ) ಮತ್ತು ಮನೆಗೊಂದು ಮರ ಮತ್ತು ಶಾಲೆಗೊಂದು ವನ (ಎಂಎಂಎಸ್‌ವಿ) ಎಂಬ ಎರಡು ಯೋಜನೆಗಳಡಿ ಸಸಿಗಳನ್ನು ವಿತರಿಸಲಾಗುತ್ತಿದ್ದು, ಈ ಯೋಜನೆಯಡಿ ಆಸಕ್ತರು ಸಸಿಗಳನ್ನು ಖರೀದಿಸಬಹುದು.

ADVERTISEMENT

ಪ್ರಸಕ್ತ ವರ್ಷ ಆರ್‌ಎಸ್‌ಪಿಡಿ ಯೋಜನೆಯಡಿ 2,700 ಸಸಿಗಳನ್ನು ಮತ್ತು ಎಂಎಂಎಸ್‌ವಿ ಯೋಜನೆಯಡಿ 7 ಸಾವಿರ ಸಸಿಗಳನ್ನು ಇಲಾಖೆಯು ವಿತರಿಸಲಿದೆ. ಸಸಿಗಳನ್ನು ನೆಡಲು ಬಯಸುವವರು ಮನೆ,
ಕಚೇರಿ ಅಥವಾ ಶಾಲಾ–ಕಾಲೇಜು ಆವರಣದಲ್ಲಿ ಲಭ್ಯವಿರುವ ಸ್ಥಳಾವಕಾಶದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅವುಗಳಿಗೆ ನೀರುಣಿಸುವ ಮತ್ತು ನಿರ್ವಹಿಸುವ ಬಗ್ಗೆ ಖಾತ್ರಿ ಪಡಿಸಬೇಕು.ನಗರ ಹೊರವಲಯದ ಸಿರನೂರ ಬಳಿಯಿರುವ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ವಿವಿಧ ಬಗೆಯ ಸಸಿಗಳು ಲಭ್ಯ ಇವೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅರಣ್ಯಾಧಿಕಾರಿಗಳು ಇಲ್ಲಿಯ ಶರಣಬಸವೇಶ್ವರ ಗುಡಿ ರಸ್ತೆಯ ಜಿಲ್ಲಾ ನ್ಯಾಯಾಲಯ ಬಳಿಯತಮ್ಮ ಇಲಾಖೆ ಕಚೇರಿ ಆವರಣದಲ್ಲೇ ಸಸಿಗಳ ಮಾರಾಟ ಮತ್ತು ಪ್ರದರ್ಶನ ಕೈಗೊಂಡಿದ್ದಾರೆ.

‘ಪರಿಸರ ದಿನದಂದು ಮಾತ್ರವೇ ಸಸಿಗಳನ್ನು ನೆಟ್ಟರೆ ಸಾಲದು. ಸಸಿಗಳ ಮೇಲಿನ ಕಾಳಜಿ ಮತ್ತು ಪೋಷಣೆ ಅಭಿಯಾನದ ಸ್ವರೂಪ
ಪಡೆಯಬೇಕು. ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಸಂಘಸಂಸ್ಥೆಗಳ ಕಾರ್ಯಕ್ರಮದಲ್ಲೂ ಸಸಿಗಳನ್ನು ನೆಡುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದು ಹಂತಹಂತವಾಗಿ ಪ್ರದೇಶದ ಹಸಿರೀಕರಣಕ್ಕೂ ಪೂರಕವಾಗುತ್ತದೆ’ ಎನ್ನುತ್ತಾರೆಕಲಬುರ್ಗಿ ವಲಯ ಅರಣ್ಯಾಧಿಕಾರಿ ಗುಂಡು ಸಿಂಗ್.

‘ದೂರದ ಪ್ರದೇಶದಲ್ಲಿ ಸಸಿಗಳನ್ನು ನೆಡುವುದಕ್ಕಿಂತ ಮನೆ, ಕಚೇರಿ ಅಥವಾ ಶಾಲಾ–ಕಾಲೇಜು ಬಳಿ ನೆಡಲು ಪ್ರಥಮ ಆದ್ಯತೆ ನೀಡಬೇಕು. ಸಸಿಗಳಿಗೆ ಪ್ರತಿದಿನವೂ ನೀರು ಹಾಕಬಹುದು, ಅವುಗಳಿಗೆ ಹಾನಿಯಾಗದಂತೆ ತಡೆಯಬಹುದು ಮತ್ತು ಪುಟ್ಟದಾದ ಉದ್ಯಾನ ಅಭಿವೃದ್ಧಿಪಡಿಸಬಹುದು. ಎಲ್ಲೆಡೆ ಗಿಡ, ಮರ ಬೆಳೆದಲ್ಲಿ ವಾತಾವರಣ ಹಿತರಕವಾಗಿರುತ್ತದೆ. ಮಾಲಿನ್ಯ ತಡೆಯಬಹುದು’ ಎಂದರು.

‘ಸಸಿಗಳನ್ನು ನೆಡಲು ಅರಣ್ಯ ಇಲಾಖೆ ವತಿಯಿಂದ ಮಾರ್ಗದರ್ಶನ ನೀಡಲಾಗುವುದು. ಶಾಲಾಕಾಲೇಜಿನ ವಾರ್ಷಿಕೋತ್ಸವ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಲ್ಲಿ, ಅರಣ್ಯ ಇಲಾಖೆಯಿಂದ ಸಹಕಾರ ನೀಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.