ADVERTISEMENT

ಆಳ-ಅಗಲ | ರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಗೆಲುವು ನಿಚ್ಚಳ

​ಪ್ರಜಾವಾಣಿ ವಾರ್ತೆ
Published 3 ಮೇ 2022, 19:31 IST
Last Updated 3 ಮೇ 2022, 19:31 IST
ರಾಷ್ಟ್ರಪತಿ ಭವನ
ರಾಷ್ಟ್ರಪತಿ ಭವನ   

ರಾಷ್ಟ್ರಪತಿ ಹುದ್ದೆಗೆ ಇದೇ ಜುಲೈನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸುಲಲಿತವಾಗಿ ಗೆಲ್ಲುವಷ್ಟು ಸಂಖ್ಯಾ ಬಲ ಬಿಜೆಪಿ ನೇತೃತ್ವದ ಎನ್‌ಡಿಎಗೆ ಇದೆ. ರಾಷ್ಟ್ರಪತಿ ಚುನಾವಣೆಯ ಮತಗಳ ಮೌಲ್ಯ 10.90 ಲಕ್ಷ. ಎನ್‌ಡಿಎ ಮತ್ತು ವಿರೋಧ ಪಕ್ಷಗಳ ನಡುವಣ ಮತಗಳ ಮೌಲ್ಯದ ಅಂತರ ಒಂದು ಲಕ್ಷಕ್ಕೂ ಅಧಿಕ ಇದೆ.

ಈಗಿನ ಲೆಕ್ಕಾಚಾರದ ಪ್ರಕಾರ, ಎನ್‌ಡಿಎ ಹೊಂದಿರುವ ಮತಗಳ ಮೌಲ್ಯ 5.42 ಲಕ್ಷ. ಬಿಜೆಪಿ ವಿರೋಧಿ ಪಕ್ಷಗಳ ಬಳಿ ಇರುವ ಮತಗಳ ಮೌಲ್ಯ 4.49 ಲಕ್ಷ. ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಡಿ ಯಾವುದೇ ಗುಂಪಿನ ಜತೆ ಗುರುತಿಸಿಕೊಂಡಿಲ್ಲ. ಈ ಎರಡು ಪಕ್ಷಗಳು ಒಟ್ಟಾಗಿ ಹೊಂದಿರುವ ಮತಗಳ ಮೌಲ್ಯ 75,528. ಈ ಎರಡೂ ಪಕ್ಷಗಳು ಎನ್‌ಡಿಎ ಅಭ್ಯರ್ಥಿಗೆ ಮತ ನೀಡುವ ಸಾಧ್ಯತೆಯೇ ಹೆಚ್ಚು. ಹಾಗಾಗಿ, ಆಡಳಿತ ಪಕ್ಷಕ್ಕೆ ರಾಷ್ಟ್ರಪತಿ ಚುನಾವಣೆ ಗೆಲ್ಲುವುದು ಸಲೀಸಾಗಲಿದೆ.

ಚುನಾಯಿತ ಸಂಸದರು ಮತ್ತು ಚುನಾಯಿತ ಶಾಸಕರಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇದೆ. ಸಂಸದರ ಒಟ್ಟು ಸಂಖ್ಯೆ 776 ಮತ್ತು ಶಾಸಕರ ಒಟ್ಟು ಸಂಖ್ಯೆ 4,120. ಈ ಜನಪ್ರತಿನಿಧಿಗಳ ಮತಗಳ ಒಟ್ಟು ಮೌಲ್ಯ 10,98,903.

ADVERTISEMENT

ಈ ಎಲ್ಲ ಮತಗಳು ಚಲಾವಣೆಯಾದರೆ ಗೆಲ್ಲುವ ಅಭ್ಯರ್ಥಿಗೆ 5,49,452 ಮತಗಳ ಅಗತ್ಯ ಇದೆ. ಸಂಸತ್ತಿನಲ್ಲಿ ಈಗ ಖಾಲಿ ಇರುವ ಸದಸ್ಯ ಸ್ಥಾನಗಳು 13. ಕೆಲವು ವಿಧಾನಸಭೆಗಳಲ್ಲಿಯೂ ಶಾಸಕ ಸ್ಥಾನಗಳು ಖಾಲಿ ಇವೆ. ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯುವ ಮೊದಲೇ ಈ ಎಲ್ಲ ಸ್ಥಾನಗಳು ಭರ್ತಿ ಆದರೂ, ಗೆಲುವಿನ ಲೆಕ್ಕಾಚಾರದಲ್ಲಿ ಗಣನೀಯವಾದ ಬದಲಾವಣೆ ಏನೂ ಆಗುವುದಿಲ್ಲ.

ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳು ಇನ್ನೂ ಬಿರುಸು ಪಡೆದುಕೊಂಡಿಲ್ಲ. ಗೆಲುವಿನ ಸಾಧ್ಯತೆ ಕ್ಷೀಣವಾಗಿರುವ ಕಾರಣ ವಿರೋಧ ಪಕ್ಷಗಳಲ್ಲಿ ಅಂತಹ ಹುರುಪು ಕಾಣಿಸಿಲ್ಲ. ‘ರಾಷ್ಟ್ರಪತಿ ಚುನಾವಣೆ ಕುರಿತು ಈಗ ಏನನ್ನೂ ಹೇಳುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ಹೇಳಿದ್ದರು. ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಡಿ ಕೂಡ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಗೆ ಮತ ಹಾಕಿದರೂ ಎನ್‌ಡಿಎ ಅಭ್ಯರ್ಥಿಯ ಗೆಲುವಿಗೆ ತೊಡಕಾಗುವುದಿಲ್ಲ. ಎನ್‌ಡಿಎ ಅಭ್ಯರ್ಥಿಗೆ ಮತ ಹಾಕದೇ ಇರಲು ಕಾರಣವೇನೂ ಇಲ್ಲ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಮುಖಂಡರೊಬ್ಬರು ಈಚೆಗೆ ಹೇಳಿದ್ದಾರೆ.

ಎನ್‌ಡಿಎ ಅಭ್ಯರ್ಥಿ ಯಾರು ಎಂಬುದು ವಿರೋಧ ಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಮೂಡಿಸಬಹುದು. ಉದಾಹರಣೆಗೆ, ತಮಿಳು ವ್ಯಕ್ತಿಯೊಬ್ಬರನ್ನು ಅಭ್ಯರ್ಥಿಯಾಗಿ ಬಿಜೆಪಿ ಆಯ್ಕೆ ಮಾಡಿದರೆ, ಅಂತಹ ಅಭ್ಯರ್ಥಿಯ ವಿರುದ್ಧ ಮತ ಹಾಕುವುದು ಡಿಎಂಕೆಗೆ ಕಷ್ಟವಾಗಲಿದೆ. ಬಿಹಾರದವರಾದ ರಾಮನಾಥ ಕೋವಿಂದ್‌ ಅವರನ್ನು ಅಭ್ಯರ್ಥಿಯಾಗಿ 2017ರಲ್ಲಿ ಬಿಜೆಪಿ ಘೋಷಿಸಿತ್ತು. ಆಗ ಬಿಜೆಪಿ ವಿರೋಧಿ ಪಕ್ಷವಾಗಿದ್ದ ಜೆಡಿಯು, ಕೋವಿಂದ್‌ ಅವರಿಗೆ ಮತ ಹಾಕಿತ್ತು.

ವಿಧಾನಸಭೆಗಳಲ್ಲಿ ಎನ್‌ಡಿಎ 2.22 ಲಕ್ಷ ಮತ ಮೌಲ್ಯ ಹೊಂದಿದ್ದರೆ, ಎನ್‌ಡಿಎಯೇತರ ಪಕ್ಷಗಳ ಮತ ಮೌಲ್ಯ 2.77 ಲಕ್ಷ. ಆದರೆ, ಸಂಸತ್ತಿನಲ್ಲಿ ಎನ್‌ಡಿಎ ಮತ ಮೌಲ್ಯ 3.20 ಲಕ್ಷ ಇದ್ದರೆ, ವಿರೋಧ ಪಕ್ಷಗಳು 1.72 ಲಕ್ಷ ಮತ ಮೌಲ್ಯ ಹೊಂದಿವೆ.

ವಿಪಕ್ಷಗಳಿಗೆ ಒಟ್ಟಾಗುವ ಸವಾಲು

ರಾಷ್ಟ್ರಪತಿ ರಾಮ‌ನಾಥ ಕೋವಿಂದ್ ಅವರ ಅಧಿಕಾರಾವಾಧಿ ಜುಲೈ 25ಕ್ಕೆ ಕೊನೆಯಾಗಲಿದೆ. ಅದಕ್ಕೂ ಮುನ್ನವೇ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕಿದೆ. ಕೋವಿಂದ್ ಅವರನ್ನೇ ಎರಡನೇ ಅವಧಿಗೆ ರಾಷ್ಟ್ರಪತಿಯಾಗಿ ಮುಂದುವರಿಸಲು ಅವಕಾಶವಿದೆ. ಆದರೆ, ಆ ಸಾಧ್ಯತೆಗಳು ತೀರಾ ಕಡಿಮೆ ಎಂಬುದನ್ನು ಸೂಚಿಸುತ್ತವೆ ಈಚಿನ ಬೆಳವಣಿಗೆಗಳು.

ದೆಹಲಿಯ ಲ್ಯೂಟೆನ್ಸ್‌ ಪ್ರದೇಶದ ನಂ.12 ಜನಪಥ ನಿವಾಸವನ್ನು ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರಾಗಿದ್ದ ರಾಮ ವಿಲಾಸ್ ಪಾಸ್ವಾನ್‌ ಅವರಿಗೆ ನೀಡಲಾಗಿತ್ತು. ಸುಮಾರು 30 ವರ್ಷ ಅವರು ಈ ನಿವಾಸದಲ್ಲಿ ನೆಲೆಸಿದ್ದರು. ಅವರ ನಿಧನದ ನಂತರ ಅವರ ಕುಟುಂಬವೂ ಇದೇ ನಿವಾಸದಲ್ಲಿ ನೆಲೆಸಿತ್ತು. ಈಚೆಗೆ ಅವರ ಕುಟುಂಬದವರನ್ನು ಈ ನಿವಾಸದಿಂದ ತೆರವು ಮಾಡಲಾಗಿದೆ. ಈ ನಿವಾಸವನ್ನು ಈಗ ನವೀಕರಿಸಲಾಗುತ್ತಿದೆ. ಅಧಿಕಾರಾವಾಧಿ ಮುಗಿದ ನಂತರ ಕೋವಿಂದ್‌ ಅವರಿಗೆ ಈ ನಿವಾಸವನ್ನು ನೀಡಲಾಗುವುದು ಎಂದು ಮೂಲಗಳು ಹೇಳಿವೆ. ಕೋವಿಂದ್‌ ಅವರನ್ನು ಎರಡನೇ ಅವಧಿಗೆ ಮುಂದುವರಿಸುವ ಉದ್ದೇಶ ಇಲ್ಲದೇ ಇರುವುದರಿಂದಲೇ, ಅವರ ನಿವೃತ್ತ ಜೀವನಕ್ಕಾಗಿ ಈ ನಿವಾಸವನ್ನು ನವೀಕರಿಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಈಗಿನ ಸಾಂಖ್ಯಿಕ ಬಲ ನೋಡಿದರೆ ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿತ ಅಭ್ಯರ್ಥಿಯೇ ಮುಂದಿನ ರಾಷ್ಟ್ರಪತಿಯಾಗುವುದು ನಿಚ್ಚಳವಾಗಿದೆ. ಆದರೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಚರ್ಚೆ ಬಿಜೆಪಿ ಪಾಳಯದಲ್ಲಿ ಇನ್ನೂ ಆರಂಭವಾಗಿಲ್ಲ.

ಎಲ್ಲಾ ವಿರೋಧ ಪಕ್ಷಗಳು ಒಟ್ಟಾದರೂ, ಅವು ಎನ್‌ಡಿಎಯ ಬಲವನ್ನು ಮೀರುವುದು ಸಾಧ್ಯವಿಲ್ಲ. ಆದರೆ, 2024ರ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಕ್ಕೂಟ ರಚನೆಗೆ ರಾಷ್ಟ್ರಪತಿ ಚುನಾವಣೆಯು ಒಂದು ಮಹತ್ವದ ವೇದಿಕೆಯಾಗಲಿದೆ. ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಟ್ಟಾಗುವುದಾದರೆ, 2024ರ ಚುನಾವಣೆಗೆ ಒಕ್ಕೂಟ ರಚಿಸಿಕೊಳ್ಳುವುದು ವಿರೋಧ ಪಕ್ಷಗಳಿಗೆ ಸುಲಭವಾಗಲಿದೆ. ಹೀಗಾಗಿ ಇದು ವಿರೋಧ ಪಕ್ಷಗಳಿಗೆ ಮಹತ್ವದ ಚುನಾವಣೆಯಾಗಿದೆ. ಎಲ್ಲಾ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ರಾಷ್ಟ್ರಪತಿ ಚುನಾವಣೆ ಕಣಕ್ಕೆ ಇಳಿಸುವ ಪ್ರಸ್ತಾವವನ್ನು ಹಲವು ವಿರೋಧ ಪಕ್ಷಗಳು ಇರಿಸಿವೆ. ಆದರೆ, ಎಲ್ಲಾ ವಿರೋಧ ಪಕ್ಷಗಳು ಇನ್ನೂ ಒಟ್ಟಿಗೆ ಕೂತು ತಮ್ಮ ಹೋರಾಟದ ದಿಕ್ಕನ್ನು ನಿರ್ಧರಿಸಿಲ್ಲ.

ಮತಮೌಲ್ಯ

ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆಯು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಿಂತ ಸ್ವಲ್ಪ ಭಿನ್ನವಾಗಿರುತ್ತದೆ.

ಈ ಪ್ರಕ್ರಿಯೆಯಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳ ಸದಸ್ಯರು ರಾಷ್ಟ್ರಪತಿ ಚುನಾವಣೆಯ ಮತದಾರರಾಗಿರುತ್ತಾರೆ. ಆದರೆ, ರಾಷ್ಟ್ರಪತಿ ಅವರು ನಾಮನಿರ್ದೇಶನ ಮಾಡಿದ ರಾಜ್ಯಸಭೆಯ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ. ಒಬ್ಬ ಜನಪ್ರತಿನಿಧಿ ಚಲಾಯಿಸುವ ಮತವನ್ನು ಒಂದು ಮತ ಎಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ, ಆಯಾ ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಅಲ್ಲಿನ ಶಾಸಕನ ಮತಮೌಲ್ಯ ನಿರ್ಧಾರವಾಗುತ್ತದೆ.

ಉದಾಹರಣೆಗೆ, ಕರ್ನಾಟಕದ ಜನಸಂಖ್ಯೆಯ ಅನುಸಾರ ರಾಜ್ಯದ ವಿಧಾನಸಭೆಯ ಒಬ್ಬ ಸದಸ್ಯ ಚಲಾಯಿಸುವ ಮತವು 131 ಮತ ಮೌಲ್ಯ ಹೊಂದಿರುತ್ತದೆ. ಆದರೆ ಕರ್ನಾಟಕಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಪ್ರತಿಯೊಬ್ಬ ಶಾಸಕನ ಮತಮೌಲ್ಯವು 208 ಆಗಿರುತ್ತದೆ. ಚಿಕ್ಕ ರಾಜ್ಯವಾದ ಸಿಕ್ಕಿಂನ ಪ್ರತೀ ಶಾಸಕನ ಮತಮೌಲ್ಯ 7 ಎಂದು ನಿಗದಿಗೊಳಿಸಲಾಗಿದೆ. ಹೀಗೆ ಲೆಕ್ಕಾಚಾರ ಹಾಕಿದಾಗ, ಒಂದು ರಾಜ್ಯದ ಶಾಸಕನ ಮತಮೌಲ್ಯಕ್ಕೂ ಮತ್ತೊಂದು ರಾಜ್ಯದ ಶಾಸಕನ ಮತಮೌಲ್ಯಕ್ಕೂ ವ್ಯತ್ಯಾಸ ಇರುತ್ತದೆ. ಈ ಪ್ರಕಾರ, ಕರ್ನಾಟಕವು 29,344 (ಪ್ರತೀ ಶಾಸಕನ ಮತಮೌಲ್ಯ 131X224 ಶಾಸಕರು) ಮತಮೌಲ್ಯ ಹೊಂದಿದೆ. ಆದರೆ ಎಲ್ಲ ಸಂಸತ್ ಸದಸ್ಯರಿಗೆ ಒಂದೇ ಮತಮೌಲ್ಯ ಗೊತ್ತುಪಡಿಸಲಾಗಿದೆ. ಲೋಕಸಭೆ ಅಥವಾ ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರತೀ ಸದಸ್ಯನ ಮತಮೌಲ್ಯವನ್ನು 708 ಎಂದು ನಿರ್ಧರಿಸಲಾಗಿದೆ.

ಪ್ರಾಶಸ್ತ್ಯ: ಮತಪತ್ರಗಳ ಮೂಲಕ (ಬ್ಯಾಲೆಟ್ ಪೇಪರ್) ಚುನಾವಣೆ ನಡೆಯುತ್ತದೆ. ಮತದಾರರು (ಸಂಸದರು ಮತ್ತು ಶಾಸಕರು) ತಮಗೆ ನೀಡಲಾದ ಮತಪತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ತಮ್ಮ ಆದ್ಯತೆ ಯಾರು ಎಂದು ಗುರುತು ಹಾಕಬೇಕು. ಸಂಸತ್ ಸದಸ್ಯರಿಗೆ ಹಸಿರು, ಶಾಸಕರಿಗೆ ಗುಲಾಬಿ ಬಣ್ಣದ ಮತಪತ್ರ ನೀಡಲಾಗುವುದು. ತಮ್ಮ ಮೊದಲ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದೆ 1 ಎಂದೂ (ಮೊದಲ ಆಯ್ಕೆ), ಎರಡನೇ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದೆ 2 ಎಂದೂ (ಎರಡನೇ ಆಯ್ಕೆ) ನಮೂದಿಸಬೇಕು. ಮತ ಎಣಿಕೆಯ ವೇಳೆ ಮೊದಲ ಪ್ರಾಶಸ್ತ್ಯದ ಮತಗಳನ್ನು ಪರಿಗಣಿಸಲಾಗುತ್ತದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್‌ ಜಾರಿ ಮಾಡಿ ಇಂಥವರಿಗೇ ಮತ ಹಾಕಿ ಎಂದು ಹೇಳುವಂತಿಲ್ಲ.

ಅರ್ಹತೆ: ರಾಷ್ಟ್ರಪತಿ ಆಗಲು ಬಯಸುವ ವ್ಯಕ್ತಿಯು ಭಾರತೀಯ ನಾಗರಿಕ ಆಗಿರಬೇಕು. 35 ವರ್ಷ ವಯಸ್ಸಾಗಿರಬೇಕು. ₹15 ಸಾವಿರ ಠೇವಣಿ ಇಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ರಾಷ್ಟ್ರಪತಿ ಆಗಬಯಸುವ ಅಭ್ಯರ್ಥಿಯು ಸಂಸತ್ ಅಥವಾ ವಿಧಾನಸಭೆಯ 50 ಜನಪ್ರತಿನಿಧಿಗಳು ಬೆಂಬಲಿಸಿರುವ ಪತ್ರವನ್ನು ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.