ಎ.ಐ. ಚಿತ್ರ
ಅಹಮದಾಬಾದ್ನಲ್ಲಿ ಸಂಭವಿಸಿರುವ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದಾರೆ. ಪವಾಡ ಸದೃಶ್ಯ ರೀತಿಯಲ್ಲಿ ಒಬ್ಬರು ಬದುಕುಳಿದ್ದಾರೆ.
ಇದುವರೆಗೂ ದೇಶದ ವಿವಿಧೆಡೆ ನಡೆದಿರುವ ವೈಮಾನಿಕ ಅಪಘಾತಗಳಲ್ಲಿ ಹಲವು ರಾಜಕೀಯ ನಾಯಕರು ಮೃತಪಟ್ಟಿದ್ದು, ಅವರ ಸಾಲಿಗೆ ವಿಜಯ್ ರೂಪಾನಿ ಕೂಡ ಸೇರಿದಂತಾಗಿದೆ.
ವೈಮಾನಿಕ ಅಪಘಾತಗಳಲ್ಲಿ ಮೃತಪಟ್ಟ ಪ್ರಮುಖ ರಾಜಕೀಯ ನಾಯಕರು:
ಸಂಜಯ್ ಗಾಂಧಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮಗ ಸಂಜಯ್ ಗಾಂಧಿ ಅವರು 1980ರ ಜೂನ್ 23ರಂದು ನವದೆಹಲಿಯಲ್ಲಿ ನಡೆದ ಲಘುವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ನವದೆಹಲಿಯ ವೈಮಾನಿಕ ನೆಲೆಯಲ್ಲಿ ಸಂಜಯ್ ಗಾಂಧಿ ಅವರೇ ಲಘುವಿಮಾನ ಹಾರಾಟ ಅಭ್ಯಾಸ ಮಾಡುವಾಗಲೇ ದುರಂತ ಸಂಭವಿಸಿತ್ತು. 33 ವರ್ಷದ ಸಂಜಯ್ ಗಾಂಧಿ ಅವರ ಸಾವಿನ ಸುತ್ತ ಹಲವು ಊಹಾಪೋಹಗಳು ಹರಿದಾಡಿದ್ದವು.
ಮಾಧವರಾವ್ ಸಿಂಧಿಯಾ: ಮಾಜಿ ನಾಗರಿಕ ವಿಮಾನಯಾನ ಸಚಿವ ಹಾಗೂ ಕಾಂಗ್ರೆಸ್ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಮಾಧವರಾವ್ ಸಿಂಧಿಯಾ ಅವರು 2001ರ ಸೆಪ್ಟೆಂಬರ್ 30ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಸಭೆಗೆ ತೆರಳುವಾಗ ಮಾಯನಪುರಿ ಜಿಲ್ಲೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಘಟನೆಯಲ್ಲಿ ಅವರ ಜೊತೆಗೆ ಸಿಂಧಿಯಾರ ಆಪ್ತಕಾರ್ಯದರ್ಶಿ, ಮೂವರು ಪತ್ರಕರ್ತರು ಹಾಗೂ ಪೈಲೆಟ್ಗಳು ಸಾವನ್ನಪ್ಪಿದ್ದರು.
ಜಿ.ಎಂ.ಸಿ. ಬಾಲಯೋಗಿ: ಆಂಧ್ರಪ್ರದೇಶ ಮೂಲದ ಬಾಲಯೋಗಿ ಅವರು ಲೋಕಸಭಾ ಸ್ಪೀಕರ್ ಆಗಿದ್ದವರು. ತೆಲುಗು ದೇಶಂ ಪಾರ್ಟಿ(ಟಿಡಿಪಿ) ಪ್ರತಿನಿಧಿಸುತ್ತಿದ್ದ ಅವರು, 2002ರ ಮಾರ್ಚ್ 3ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ ಹವಾಮಾನ ವೈಪರೀತ್ಯದಿಂದ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದರು.
ಓಂ ಪ್ರಕಾಶ್ ಜಿಂದಾಲ್: ಉದ್ಯಮಿ ಹಾಗೂ ಹರಿಯಾಣದ ಇಂಧನ ಸಚಿವರಾಗಿದ್ದ ಓಂ ಪ್ರಕಾಶ್ ಜಿಂದಾಲ್ ಅವರು ಓ.ಪಿ. ಜಿಂದಾಲ್ ಸಂಸ್ಥೆಯ ಸ್ಥಾಪಕ. 2005ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು.
ವೈ.ಎಸ್. ರಾಜಶೇಖರ್ ರೆಡ್ಡಿ: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ್ ರೆಡ್ಡಿ ಅವರು 2009ರಲ್ಲಿ ಸೆಪ್ಟೆಂಬರ್ನಲ್ಲಿ ಹೆಲಿಕಾಪ್ಟರ್ನಲ್ಲಿ ನಲ್ಲಮಾಲ ಅರಣ್ಯ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಹವಾಮಾನ ವೈಪರೀತ್ಯದಿಂದ ದುರಂತ ಸಂಭವಿಸಿತ್ತು. ಘಟನೆ ನಡೆದ ಸ್ಥಳದಲ್ಲೇ ವೈ.ಎಸ್.ಆರ್ ಮೃತಪಟ್ಟಿದ್ದರು. ಅಪಘಾತದ ಹಿಂದೆ ರಾಜಕೀಯ ಷಡ್ಯಂತ್ರವಿರುವುದಾಗಿ ವದಂತಿಗಳು ಹರಿದಾಡಿದ್ದವು, ಆದರೆ ತನಿಖೆಯಲ್ಲಿ ಹವಾಮಾನ ವೈಪರಿತ್ಯದಿಂದಲೇ ದುರಂತ ಸಂಭವಿಸಿದೆ ಎಂದು ನಿರೂಪಿತವಾಗಿತ್ತು.
ದೋರ್ಜಿ ಖಂಡು: ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಅವರು 2011 ಏಪ್ರಿಲ್ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು.
ಮಾಜಿ ಪ್ರಧಾನಿ ಮೋರಾರ್ಜಿ ದೇಸಾಯಿ, ಕಾಂಗ್ರೆಸ್ ನಾಯಕ ಅಹಮ್ಮದ್ ಪಾಟೀಲ್, ಕೇಂದ್ರ ಸಚಿವ ಪೃಥ್ವಿರಾಜ್ ಚೌಹಾಣ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಸೇರಿದಂತೆ ಹಲವು ರಾಜಕೀಯ ನಾಯಕರು ಪವಾಡ ಸದೃಶ್ಯ ರೀತಿಯಲ್ಲಿ ವೈಮಾನಿಕ ಅಪಘಾತದಿಂದ ಪಾರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.