ADVERTISEMENT

ಒಳನೋಟ: ನದಿ ನೀರಿಗಾಗಿ ಕಾದಿವೆ ಕೆರೆಗಳು

ನೀರಿಗಾಗಿ ಬಯಲು ಸೀಮೆಯಲ್ಲಿ ಮೂರು ದಶಕದಿಂದಲೂ ಹೋರಾಟ

ಡಿ.ಬಿ, ನಾಗರಾಜ
Published 9 ಜನವರಿ 2021, 21:11 IST
Last Updated 9 ಜನವರಿ 2021, 21:11 IST
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಸಮೀಪವಿರುವ ಮುತ್ತಿನ ಮುಳಸೋಗೆ ಗ್ರಾಮದಲ್ಲಿ ಕಾವೇರಿ ನದಿಯಿಂದ 150 ಕೆರೆಗಳಿಗೆ ನೀರು ತುಂಬುವ ಯೋಜನೆಯಡಿ, ಪಂಪ್‌ಹೌಸ್‌ ನಿರ್ಮಾಣದ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದೆ. ಪ್ರಜಾವಾಣಿ ಚಿತ್ರ: ಬಿ.ಎಸ್‌.ಪ್ರಸನ್ನಕುಮಾರ್
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಸಮೀಪವಿರುವ ಮುತ್ತಿನ ಮುಳಸೋಗೆ ಗ್ರಾಮದಲ್ಲಿ ಕಾವೇರಿ ನದಿಯಿಂದ 150 ಕೆರೆಗಳಿಗೆ ನೀರು ತುಂಬುವ ಯೋಜನೆಯಡಿ, ಪಂಪ್‌ಹೌಸ್‌ ನಿರ್ಮಾಣದ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದೆ. ಪ್ರಜಾವಾಣಿ ಚಿತ್ರ: ಬಿ.ಎಸ್‌.ಪ್ರಸನ್ನಕುಮಾರ್   

ಮೈಸೂರು: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಮೂರು ದಶಕಗಳಿಂದ ಹೋರಾಟ ನಡೆದಿದೆ. ಅರಸೀಕೆರೆಯು ಕೃಷ್ಣಾ ಕೊಳ್ಳದಲ್ಲಿ ಬರುತ್ತದೆ. ಕಾವೇರಿ ಕೊಳ್ಳದಿಂದ ನೀರು ಕೊಡಲು ಸಾಧ್ಯವಿಲ್ಲ ಎಂದು ಇದುವರೆಗೂ ನೀರು ಹರಿಸಿಲ್ಲ.

ಕುಡಿಯುವ ನೀರಿಗಾಗಿ ಹೊನ್ನವಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನ ಗೊಂಡಿದ್ದರೂ, ಸಕಾಲಕ್ಕೆ ಕೆರೆಗಳಿಗೆ ನೀರು ತುಂಬಿಸಲಿಲ್ಲ. ತೊಂಬತ್ತರ ದಶಕ ದಲ್ಲೇ ನೀರಿಗಾಗಿ ಈಗಿನ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾರಥ್ಯದಲ್ಲೇ ಹೋರಾಟ ನಡೆದಿತ್ತು. ಆದರೆ ಇದೀಗ ತಮ್ಮ ಆಡಳಿತದಲ್ಲೇ ಭದ್ರಾ ಮೇಲ್ದಂಡೆ ಯೋಜನೆಯಡಿ ಅರಸೀಕೆರೆ ತಾಲ್ಲೂಕಿನ 28 ಕೆರೆಗಳನ್ನು ಕೈಬಿಟ್ಟಿದ್ದಾರೆ.

ತುಂಬುತ್ತಿಲ್ಲ ಕೆರೆ: ಮೈಸೂರು ಜಿಲ್ಲೆಯಲ್ಲಿ 55 ಕೆರೆಗಳನ್ನು ತುಂಬಿಸಿದ್ದರೆ, 251 ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ADVERTISEMENT

ಹುಣಸೂರು ತಾಲ್ಲೂಕಿನಲ್ಲಿ 9 ಏತ ನೀರಾವರಿ ಯೋಜನೆಗಳಿದ್ದರೂ, ಅನುಕೂಲವಿಲ್ಲ. ಮರದೂರು ಏತ ನೀರಾವರಿ ಯೋಜನೆ ಜಾರಿಗೊಂಡರೂ, 2ಕಿ.ಮೀ. ದೂರದಲ್ಲಿರುವ ಎರಡು ಕೆರೆ ಗಳಿಗೆ ತಾಂತ್ರಿಕ ಲೋಪ, ಕಳಪೆ ಗುಣಮಟ್ಟದ ಪೈಪ್‌ಲೈನ್‌ನಿಂದ ನೀರು ತುಂಬಿಸಲಾಗಿಲ್ಲ. ಕಪಿಲೆಯಿಂದ ತಾರಕ ಜಲಾಶಯಕ್ಕೆ 2.07 ಟಿಎಂಸಿ ಅಡಿ ನೀರಿಗಿಂತ ಹೆಚ್ಚಿನ ನೀರನ್ನು ತುಂಬಿಸಲು ಅವಕಾಶ ಇಲ್ಲದಿರುವುದರಿಂದ, ಎಚ್‌.ಡಿ. ಕೋಟೆ ತಾಲ್ಲೂಕಿನ ಬಹುತೇಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿಲ್ಲ. ಪಿರಿಯಾಪಟ್ಟಣ ತಾಲ್ಲೂಕಿನ 150 ಕೆರೆಗಳು ನೀರಿಗಾಗಿ ಕಾಯುತ್ತಿವೆ.

ಕಾವೇರಿಯಿಂದ ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ 54 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತೆವಳುತ್ತಿದೆ. ಕೆ.ಆರ್. ಪೇಟೆ ತಾಲ್ಲೂಕಿನ 89 ಕೆರೆ ತುಂಬುವ ಕಾಮಗಾರಿಗೆ ಅನುಮೋದನೆ ಸಿಗಬೇಕಿದೆ. ಕಪಿಲೆಯಿಂದ 24 ಕೆರೆ ಹಾಗೂ ಗುಂಡಾಲ್‌ ಜಲಾಶಯ ತುಂಬುವ ಯೋಜನೆ ಆಮೆಗತಿಯಲ್ಲಿದೆ.

ಕೃಷಿಕರಲ್ಲಿ ಖುಷಿ...

ಮೈಸೂರು: ಚಾಮರಾಜನಗರ ಜಿಲ್ಲೆಯ ಕೆರೆಗಳನ್ನು ತುಂಬುವ ಕೆಲವು ಯೋಜನೆ ಪೂರ್ಣಗೊಂಡಿದ್ದರಿಂದ, 20 ಕೆರೆಗಳಿಗೆ ನೀರನ್ನು ತುಂಬಲಾಗಿದೆ.

ಮೈಸೂರು ಜಿಲ್ಲೆಯಲ್ಲಿನ ವರುಣಾ ನಾಲೆಯ ಕೊನೆ ಭಾಗದ ರೈತರಿಗೆ ನಂದಿಗುಂದ ಏತ ಹನಿ ನೀರಾವರಿ ಯೋಜನೆ ವರದಾನವಾಗಿದೆ. ಇಸ್ರೇಲ್ ಮಾದರಿ ಪದ್ಧತಿಯಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹಿರೀಸಾವೆ, ಶ್ರವಣಬೆಳಗೊಳ ಏತ ನೀರಾವರಿ ಯೋಜನೆಯಡಿ ಅಕ್ಟೋಬರ್‌ನಲ್ಲಷ್ಟೇ 8 ಕೆರೆ ತುಂಬಿಸಲಾಗಿದೆ. ಇನ್ನೂ 10 ಕೆರೆ ತುಂಬಲಿವೆ. ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಈ ಭಾಗದ 11 ಕೆರೆಗಳಿಗೆ ನೀರು ತುಂಬಿಸಲಾಗಿದೆ.

* ಹುಣಸೂರು ತಾಲ್ಲೂಕಿನ ಚಿಲ್ಕುಂದ ಏತ ನೀರಾವರಿ ಯೋಜನೆಯಿಂದ ಅಸಂಖ್ಯಾತ ರೈತರ ಬದುಕು ಹಸನಾಗುವ ನಿರೀಕ್ಷೆಯಿತ್ತು. ಆದರೆ ಒಂದು ದಿನವೂ ನೀರು ಹರಿಲಿಲ್ಲ.

-ಪ್ರಭಾಕರ್‌, ನಿಲುವಾಗಿಲು ಗ್ರಾಮದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.