ADVERTISEMENT

ಒಳನೋಟ | ಕ್ರೀಡೆ: ಸೌಲಭ್ಯಗಳ ಕೊರತೆಯ ವೇದನೆ

ನಡೆಯದ ಹೊಸ ಪ್ರಯತ್ನ, ‘ದತ್ತು ಪದ್ಧತಿ’ ಮತ್ತೆ ಆರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 19:31 IST
Last Updated 30 ಏಪ್ರಿಲ್ 2022, 19:31 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಮಣ್ಣಿನ ಅಂಕಣದಲ್ಲಿಯೇ ನಿತ್ಯ ವಿದ್ಯಾರ್ಥಿಗಳ ಅಭ್ಯಾಸ –ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ್
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಮಣ್ಣಿನ ಅಂಕಣದಲ್ಲಿಯೇ ನಿತ್ಯ ವಿದ್ಯಾರ್ಥಿಗಳ ಅಭ್ಯಾಸ –ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ್   

ಹುಬ್ಬಳ್ಳಿ: ಅಥ್ಲೆಟಿಕ್ಸ್‌ನಲ್ಲಿ ಅಪೂರ್ವ ಸಾಧನೆಯಿಂದ ಗುರುತಿಸಿಕೊಳ್ಳುತ್ತಿದ್ದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಈಗ ಸಾಧನೆಯಲ್ಲಿ ಹಿಂದೆಬಿದ್ದಿದೆ. ಕ್ರೀಡಾ ಸೌಲಭ್ಯಗಳ ಕೊರತೆಯನ್ನೂ ಎದುರಿಸುತ್ತಿದೆ.

ಏಳು ದಶಕಗಳಷ್ಟು ಹಳೆಯದಾದ ಕರ್ನಾಟಕ ವಿವಿ ಮೊದಲು ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಉತ್ತರ ಕನ್ನಡ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವಿಶಾಲ ವ್ಯಾಪ್ತಿ ಒಳಗೊಂಡಿತ್ತು. 500ಕ್ಕೂ ಹೆಚ್ಚು ಕಾಲೇಜುಗಳಿದ್ದವು. ಈಗ ಅವಿಭಜಿತ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಷ್ಟೇ ಹೊಂದಿದ್ದು, 350 ಕಾಲೇಜುಗಳಿವೆ. ಹುಬ್ಬಳ್ಳಿಯಲ್ಲಿ ರಾಜ್ಯದ ಏಕೈಕ ಕಾನೂನು ವಿವಿ,ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ಮತ್ತು ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿ ಗಳಿವೆ.

ಈ ಎಲ್ಲಾ ವಿವಿ.ಗಳ ಕ್ರೀಡಾಪಟುಗಳು ಸಿಂಥೆಟಿಕ್‌ ಟ್ರ್ಯಾಕ್‌, ವೃತ್ತಿಪರ ತರಬೇತುದಾರರು ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ ಕೂಡ ಕಡಿಮೆಯಾಗಿದೆ.ಅಕ್ಕಮಹಾದೇವಿ ವಿವಿ. ಇತ್ತೀಚಿಗೆ ಹುಬ್ಬಳ್ಳಿಯಲ್ಲಿಅಂತರ ಕಾಲೇಜುಗಳ ಕಬಡ್ಡಿ ಟೂರ್ನಿ ಆಯೋಜಿಸಿದ್ದಾಗ 148 ಕಾಲೇಜುಗಳ ಪೈಕಿ 14 ತಂಡಗಳಷ್ಟೇ ಪಾಲ್ಗೊಂಡಿದ್ದವು!

ADVERTISEMENT

ಅಂತರರಾಷ್ಟ್ರೀಯ ಅಥ್ಲೀಟ್‌ ಬಿ.ಜಿ. ನಾಗರಾಜ, ವಿಲಾಸ್‌ ನೀಲಗುಂದ, ಅಖಿಲ ಭಾರತ ಅಂತರ ವಿ.ವಿ. ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ರೇಣುಕಾ ಹಾಗೂ ಸಂತೋಷ ಹೊಸಮನಿ– ಹೀಗೆ ಅನೇಕ ಕ್ರೀಡಾಪಟುಗಳು ಕವಿವಿ ವಿಭಜನೆಗೂ ಮೊದಲು ಅಥ್ಲೆಟಿಕ್ಸ್‌ನಲ್ಲಿ ಸಾಧನೆಯ ಹೊಳಪು ಮೂಡಿಸಿದ್ದರು. ಈಗ ಇಂಥ ಯಾವ ಸಾಧನೆಗಳೂ ಕ.ವಿ.ವಿ ಹಾಗೂ ಹೊಸ ವಿ.ವಿ.ಗಳಿಂದ ಮೂಡಿಬಂದಿಲ್ಲ. ಈಜುಕೊಳ ನಿರ್ಮಿಸುವ ಕನಸು ಕೈಗೂಡಿಲ್ಲ.

ಆದ್ದರಿಂದ ಮೊದಲಿನ ಹಾಗೆ ಕ್ರೀಡಾಪಟುಗಳ ಶೈಕ್ಷಣಿಕ ಹಾಗೂ ಕ್ರೀಡೆಯ ಖರ್ಚು ಭರಿಸಿ ದತ್ತು ಪಡೆಯುವ ಪದ್ಧತಿ ಆರಂಭಿಸಬೇಕು ಎನ್ನುವ ಆಗ್ರಹ ಕ್ರೀಡಾಪಟುಗಳಿಂದ ಕೇಳಿ ಬರುತ್ತಿದೆ. ಕ.ವಿ.ವಿ.ಯಲ್ಲಿ ಕ್ರೀಡಾ ನಿಧಿ ಹಾಗೂ ಕ್ರೀಡಾ ಶುಲ್ಕವೆಂದು ಪ್ರತಿ ವಿದ್ಯಾರ್ಥಿಯಿಂದ₹50 ಪಡೆಯುತ್ತಿದ್ದಾರೆ. ಹೀಗಾಗಿ ವಿ.ವಿ.ಗೆ ಹೆಚ್ಚು ಹಣವೂ ಸಿಗುತ್ತಿಲ್ಲ. ಬರುವ ಅಲ್ಪ ಹಣ ಕ್ರೀಡಾ ಚಟುವಟಿಕೆಗೆ ಮಾತ್ರವಲ್ಲದೇ; ದಿನಗೂಲಿ ಕಾರ್ಮಿಕರಿಗೆ ವೇತನ ನೀಡಲು ಬಳಕೆಯಾಗುತ್ತಿದೆ ಎನ್ನುವ ಆರೋಪವೂ ಇದೆ.

ಕೊಕ್ಕೊದಲ್ಲಿ ಸಾಧನೆ:ದಾವಣಗೆರೆ ವಿವಿಯಕೊಕ್ಕೊ ತಂಡವು ಈಚೆಗೆ ನಡೆದ ಅಂತರ ವಿ.ವಿ. ಕ್ರೀಡಾಕೂಟದಲ್ಲಿ ಕಂಚು ಜಯಿಸಿದೆ.ಕುಸ್ತಿ, ವೇಟ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡುತ್ತಿದೆ.ವಿವಿಯಲ್ಲಿಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.ಹಾಲವರ್ತಿ ಬಳಿ ವಿ.ವಿ.ಗೆ ಸೇರಿದ78 ಎಕರೆ ಜಾಗದಲ್ಲಿ ₹ 300 ಕೋಟಿ ವೆಚ್ಚದಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ತರಬೇತಿ ಕೇಂದ್ರ ಸ್ಥಾಪಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಕ್ರೀಡಾಶುಲ್ಕವು ವರ್ಷಕ್ಕೆ ₹ 45 ಲಕ್ಷದಿಂದ ₹ 50 ಲಕ್ಷದವರೆಗೆ ಆಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.