ADVERTISEMENT

ತಪ್ಪಿಸಿ ಹೀಟ್ ಸ್ಟ್ರೋಕ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಈ ಬಾರಿ ಮುಂಗಾರು ತಡವಾಗಿ ಮತ್ತು ಅನಿಯಮಿತವಾಗಿ ಬರುತ್ತಿದೆ. ಮುಂಗಾರು ವಿಳಂಬವಾಗುವುದರಿಂದ ಕೃಷಿ ಮತ್ತು ಉದ್ಯಮ ವಲಯವಷ್ಟೇ ಅಪಾಯ ಎದುರಿಸುವುದಿಲ್ಲ. ಅದು ನಮ್ಮ ಆರೋಗ್ಯದ ವಿಚಾರಕ್ಕೂ ಅನ್ವಯವಾಗುತ್ತದೆ.

ಅನಿರೀಕ್ಷಿತ ಹವಾಮಾನ ಬದಲಾವಣೆಯು ವೈರಲ್ ಜ್ವರ, ನಿರ್ಜಲೀಕರಣದಂತಹ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಬಿಸಿ ಮತ್ತು ಶುಷ್ಕ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಾದಾಗ ನಾವು ಹೈಪರ್ಥೆರ್ಮಿಯಾದಿಂದ ಬಳಲುವ ಅಪಾಯ ಇರುತ್ತದೆ. ಸಾಮಾನ್ಯವಾಗಿ ಇದನ್ನು `ಹೀಟ್ ಸ್ಟ್ರೋಕ್~ ಎನ್ನುತ್ತಾರೆ. ಹವಾಮಾನ ತಂಪಾಗಿದ್ದಾಗ ಜನ ನೀರು ಕುಡಿಯುವ ಅಗತ್ಯವಿದ್ದರೂ ಬಾಯಾರಿಕೆ ಆಗದಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರೆ.

ಆದರೆ ಇದರಿಂದ ನಿರ್ಜಲೀಕರಣದ ಸಮಸ್ಯೆ ಎದುರಾಗಬಹುದು. ಮೋಡ ಮುಚ್ಚಿದ ವಾತಾವರಣ ಇದ್ದಾಗ ಮತ್ತು ತಂಪಾದ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಸಾಮಾನ್ಯವಾಗಿ ನಿರ್ಜಲೀಕರಣ ಕಂಡುಬರುತ್ತದೆ.

ಈ ವರ್ಷ ಮುಂಗಾರು ಮಳೆ ಪ್ರಮಾಣ ಕಡಿವೆು ಆಗಿರುವುದರಿಂದ ರಾಜ್ಯದಲ್ಲಿ, ಅದರಲ್ಲೂ ಉತ್ತರ ಭಾಗದ ಒಣ ವಲಯಗಳಲ್ಲಿ ಜನ `ಹೀಟ್ ಸ್ಟ್ರೋಕ್~ನ  ಆತಂಕ ಎದುರಿಸುತ್ತಾರೆ.

ಹೀಗಾಗಿ ದೇಹಕ್ಕೆ ಅಗತ್ಯವಾದ ಜಲಸಂಚಯನಕ್ಕಾಗಿ ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. ವಾತಾವರಣ ಒಣ, ಬಿಸಿ, ತಂಪು ಅಥವಾ ಸೌಮ್ಯ ಹೇಗೇ ಇರಲಿ ಪ್ರತಿ ದಿನ ಕನಿಷ್ಠ 2 ಲೀಟರ್ ನೀರು ಶರೀರವನ್ನು ಸೇರಬೇಕು.

`ಹೀಟ್ ಸ್ಟ್ರೋಕ್~ನ ಸಾಮಾನ್ಯ ಲಕ್ಷಣಗಳೆಂದರೆ: ವಾಕರಿಕೆ, ತಲೆನೋವು, ತಲೆಸುತ್ತುವಿಕೆ ಮತ್ತು ತೀವ್ರ ಬಳಲುವಿಕೆ.

ಸೂಪ್, ನಿಂಬೆ ಶರಬತ್ತು, ಮಜ್ಜಿಗೆ, ಮೊಸರು, ಕಿತ್ತಳೆ, ಟೊಮ್ಯೋಟೊ ಮುಂತಾದ ಹಣ್ಣುಗಳ ಮೂಲಕವೂ ನೀರು ದೇಹ ಸೇರುವಂತೆ ನೋಡಿಕೊಳ್ಳಬಹುದು. ಇದರ ಜೊತೆಗೆ ಎಲೆಕ್ಟ್ರೋಲೈಟ್ ಪೇಯಗಳ ಸೇವನೆಯೂ ಶಕ್ತಿ ನೀಡುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.