ADVERTISEMENT

ಏನಾದ್ರೂ ಕೇಳ್ಬೋದು: ಆತ್ಮಗೌರವವೇ ಅಂತರಂಗದ ಶಕ್ತಿ

ನಡಹಳ್ಳಿ ವಂಸತ್‌
Published 8 ಜನವರಿ 2021, 22:13 IST
Last Updated 8 ಜನವರಿ 2021, 22:13 IST
ನಡಹಳ್ಳಿ ವಸಂತ್‌
ನಡಹಳ್ಳಿ ವಸಂತ್‌   

24ರ ಯುವಕ. ಜಿಗುಪ್ಸೆ ಮತ್ತು ಖಿನ್ನತೆಗೆ ಒಳಗಾಗಿದ್ದೇನೆ. ನಿರಾಸೆಯಿಂದ ಬದುಕುವ ಆಸಕ್ತಿ ಕಳೆದುಕೊಂಡಿದ್ದೇನೆ. ಯಾವಾಗಲೂ ಗಂಭೀರವಾಗಿ ಯೋಚಿಸುತ್ತೇನೆ. ಆತಂಕ, ಅನುಮಾನ, ಭಯ ಹೆಚ್ಚಾಗಿ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿಹೋಗಿದ್ದೇನೆ. ಹುಚ್ಚು ಹಿಡಿದಂತೆ ಅನಿಸುತ್ತಿದೆ. ಯಾವಾಗಲೂ ಒಂಟಿಯಾಗಿರುತ್ತೇನೆ. ಇವತ್ತಿನ ಕಾಲ ನನಗೆ ಹೊಂದುತ್ತಿಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ. ಸಲಹೆ ನೀಡಿ.

ಹೆಸರಿಲ್ಲ, ರಾಮನಗರ.

ಪತ್ರದ ತುಂಬೆಲ್ಲಾ ನಿಮ್ಮ ಬಗ್ಗೆ ನಿಮ್ಮೊಳಗೇ ಇರುವ ಬೇಸರ, ಅಸಮಾಧಾನಗಳನ್ನು ತೋರಿಸಿದ್ದೀರಿ ಅಲ್ಲವೇ? ಇದರ ಅರ್ಥವೇನು ಗೊತ್ತೇ? ನೀವು ಆತ್ಮಗೌರವವನ್ನು ಸಂಪೂರ್ಣ ಕಳೆದುಕೊಂಡಿದ್ದೀರಿ. ಹಾಗಾಗಿ ನಿಮ್ಮನ್ನು ನೀವೇ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದೀರಿ. ಮೊದಲು ಸ್ವಸಹಾನುಭೂತಿಯನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಿ. ಸದ್ಯಕ್ಕೆ ನೀವಿರುವ ಪರಿಸ್ಥಿತಿ ನಿಮಗೆ ಬೇಸರ, ಅವಮಾನ, ಹಿಂಜರಿಕೆ ಎಲ್ಲವನ್ನೂ ಮೂಡಿಸುತ್ತಿರಬಹುದು. ಆದರೆ ಅಷ್ಟೊಂದು ನಿಷ್ಪ್ರಯೋಜಕ ವ್ಯಕ್ತಿ ನೀವಾಗಿರುವುದು ಸಾಧ್ಯವೇ? ನಿಮ್ಮೊಳಗಿರುವ ಚಿಕ್ಕಪುಟ್ಟ ಒಳ್ಳೆಯ ಅಂಶಗಳನ್ನು ಗುರುತಿಸಿ ಖುಷಿಪಡಿ. ಅವುಗಳನ್ನು ಉಳಿಸಿ, ಬೆಳೆಸುವುದು ಹೇಗೆ ಎಂದು ಯೋಚಿಸಿ. ನಿಮಗೆ ಸಮಾಧಾನವಾಗುವಂತೆ ಬದುಕುವ ದೂರದ ಗುರಿಗಾಗಿ ಇವತ್ತೇನು ಮಾಡಬಹುದು ಎಂದು ತೀರ್ಮಾನಿಸಿ. ಪದೇಪದೇ ಹಿಂಜರಿಕೆ, ಸೋಲುಗಳು ಕಾಡುವುದು ಅನಿವಾರ್ಯ. ಹೊಸತನದ ಬೀಜ ಒಮ್ಮೆ ಮೊಳೆಯತೊಡಗಿದರೆ ನಿಮ್ಮ ಬಗೆಗಿನ ನಿಮ್ಮ ಅಭಿಪ್ರಾಯಗಳು ಬದಲಾಗುತ್ತವೆ.

ADVERTISEMENT

24ರ ಯುವಕ. ಏನಾದರೂ ಸಾಧಿಸುವ ಆಸೆ. ಮೊಬೈಲ್‌ ಹುಚ್ಚು ನನ್ನನ್ನು ಲೈಂಗಿಕ ಆಸಕ್ತಿಗೆ ಪ್ರೇರೇಪಿಸುತ್ತಿದೆ. ಅದರಿಂದ ಹೊರಬರಲು ಸಲಹೆ ನೀಡಿ.

ಪ್ರೇಮ್‌ಕುಮಾರ್‌, ಊರಿನ ಹೆಸರಿಲ್ಲ.

ನಿಮಗೆ ಯಾವುದರಿಂದ ಹೊರ ಬರಬೇಕು ಎನ್ನುವುದು ಗೊತ್ತಿದೆ. ಆದರೆ ಏನನ್ನು ಸಾಧಿಸಬೇಕು ಎನ್ನುವುದರ ಕುರಿತು ಸ್ಪಷ್ಟತೆ ಇರುವಂತೆ ಕಾಣಿಸುವುದಿಲ್ಲ. ಇಂತಹ ಸ್ಪಷ್ಟತೆಯಿಲ್ಲದಿದ್ದಾಗ ಹೊಸ ದಾರಿಗಳನ್ನು ಹುಡುಕುವ ಪ್ರಯತ್ನದ ಕುರಿತು ಹಿಂಜರಿಕೆ ಮೂಡುತ್ತದೆ. ಇದರಿಂದಾಗಿ ತುಂಬಿಕೊಳ್ಳುವ ಬೇಸರ, ಅತೃಪ್ತಿಗಳು ಮೊಬೈಲ್‌ ಮತ್ತು ಲೈಂಗಿಕತೆಯ ಹುಚ್ಚಿಗೆ ನಿಮ್ಮನ್ನು ಪ್ರೇರೇಪಿಸುತ್ತಿರಬಹುದು. ಹಾಗಾಗಿ ‘ನನ್ನ ಕಣ್ಣಿನಲ್ಲಿ ನಾನು ಮೇಲೇರುವುದು ಹೇಗೆ?’ ಎಂದು ಯೋಚಿಸಿ ಪ್ರಯತ್ನಗಳನ್ನು ಶುರು ಮಾಡಿ. ತಕ್ಷಣದ ಪ್ರತಿಫಲಗಳನ್ನು ನಿರೀಕ್ಷಿಸದೆ ಪ್ರಯತ್ನಗಳನ್ನು ಮುಂದುವರಿಸಿ. ನಿಮ್ಮ ಬಗ್ಗೆ ನಿಮಗೆ ಸಮಾಧಾನವಿದ್ದಾಗ ಬೇರೆಲ್ಲಾ ಆಕರ್ಷಣೆಗಳೂ ಹಿಂದೆ ಸರಿಯುತ್ತವೆ.

23ರ ಯುವಕ. ಐಎಎಸ್‌ ಪರೀಕ್ಷೆಯ ಸಿದ್ಧತೆಗೆ ದೂರದ ಊರಿಗೆ ಬಂದಿದ್ದೇನೆ. ಹಾಗಾಗಿ ಸಂಬಂಧಿಗಳ, ಸ್ನೇಹಿತರ ಸಂಪರ್ಕವಿಲ್ಲ. ನಾನೇ ಕರೆ ಮಾಡಿದರೂ ‘ನಿನ್ನೊಡನೆ ಮಾತನಾಡಲು ಇಷ್ಟವಿಲ್ಲ’ ಎನ್ನುತ್ತಾರೆ. ನನ್ನ ಕನಸುಗಳಿಗಾಗಿ ಹೋರಾಟ ಮತ್ತು ಸಂಬಂಧಗಳ ಜಂಜಾಟದಲ್ಲಿ ನೊಂದಿದ್ದೇನೆ. ಎಲ್ಲವನ್ನೂ ಮರೆತು ಗಟ್ಟಿಯಾಗಲು ಏನು ಮಾಡಬೇಕು?

ಹೆಸರು, ಊರು ಇಲ್ಲ.

ದೂರದ ಊರಿನಲ್ಲಿ ಆರಂಭದ ಒಂಟಿತನ ಸಹಜ. ನೀವಿನ್ನೂ ಹಳೆಯ ಸ್ನೇಹ– ಸಂಬಂಧಗಳನ್ನು ಕಳೆದುಕೊಂಡ ಬೇಸರದಲ್ಲಿರಬೇಕಲ್ಲವೇ? ಇದರಿಂದಾಗಿ ಹೊಸ ಸ್ನೇಹಕ್ಕೆ ನೀವು ತೆರೆದುಕೊಳ್ಳದೆ, ಹಳೆಯದನ್ನೇ ನವೀಕರಿಸಲು ಪ್ರಯತ್ನಪಡುತ್ತಿದ್ದೀರಿ. ಸಾಧ್ಯವಾಗದಿದ್ದಾಗ ನೊಂದುಕೊಳ್ಳುತ್ತೀರಿ. ನೀವು ಕರೆ ಮಾಡಿದವರಿಗೆ ನಿಮ್ಮ ತೀರ್ಮಾನಗಳ ಬಗ್ಗೆ ಬೇಸರವಿರಬಹುದು. ನಿಮ್ಮ ಜೀವನದ ನಿರ್ಧಾರಗಳ ಕುರಿತು ನಿಮಗೆ ತೃಪ್ತಿಯಿದೆಯೇ? ಇಲ್ಲದಿದ್ದರೆ ಮೊದಲು ನಿಮ್ಮ ದ್ವಂದ್ವಗಳನ್ನು ಪರಿಹರಿಸಿಕೊಳ್ಳಿ. ನಂತರ ಹೊಸ ಸ್ನೇಹ–ಸಂಬಂಧಗಳಿಗೆ ತೆರೆದುಕೊಳ್ಳಿ.

ನಾನು ಪಿಎಸ್‌ಐ ಪರೀಕ್ಷೆಗೆ ಓದುತ್ತಿದ್ದೇನೆ. ನನ್ನ ಮೊಣಕಾಲುಗಳಲ್ಲಿ ಊನತೆ ಇರಬೇಕು ಎನಿಸುತ್ತದೆ. ಇದರಿಂದ ವೈದ್ಯಕೀಯ ಪರೀಕ್ಷೆಯಲ್ಲಿ ನನಗೆ ತೊಂದರೆಯಾದರೆ ಏನು ಮಾಡಲಿ?

ಹೆಸರು, ಊರು ತಿಳಿಸಿಲ್ಲ.

ನಿಮ್ಮದು ವೈದ್ಯಕೀಯ ಸಮಸ್ಯೆ. ಇದರ ಕುರಿತಾದ ನೀತಿ– ನಿಯಮಗಳನ್ನು ತಿಳಿಯಲು ಸಂಬಂಧಿಸಿದ ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸಿ. ಪಿಎಸ್‌ಐ ಆಗಲು ವೈದ್ಯಕೀಯ ಅರ್ಹತೆ ಇಲ್ಲವಾದರೆ ಈಗಲೇ ನಿಮಗೆ ಒಪ್ಪಿಗೆಯಾಗುವ ಇತರ ಉದ್ಯೋಗ ವೃತ್ತಿಗಳ ಕಡೆ ಗಮನಹರಿಸಿ.

27ರ ಎಂಜಿನಿಯರಿಂಗ್‌ ಪದವೀಧರ. ಕೆಲಸಕ್ಕೆ ರಾಜೀನಾಮೆ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವೆ. ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಯಾರೊಂದಿಗಾದರೂ ಮನಸ್ತಾಪವಾದರೆ ಅವರ ಮುಖವನ್ನು ನೋಡಲಾಗದೆ ದೂರವಿರಬೇಕು ಎನ್ನಿಸುತ್ತದೆ. ಭವಿಷ್ಯದ ಗೊಂದಲ ಹೆಚ್ಚಿ ಒಬ್ಬಂಟಿಯಾಗಿರುತ್ತೇನೆ. ಆತ್ಮವಿಶ್ವಾಸ ಕುಗ್ಗುತ್ತಿದೆ. ಸಲಹೆ ನೀಡಿ.

ಹೆಸರು, ಊರು ಇಲ್ಲ.

ಭವಿಷ್ಯದ ಅನಿಶ್ಚಿತತೆ, ಆತಂಕಗಳೇ ನಿಮ್ಮೊಳಗೆ ತುಂಬಿಕೊಂಡಿರುವಾಗ ಎಲ್ಲರ ಮಾತು, ಸಲಹೆಗಳನ್ನಷ್ಟೇ ಅಲ್ಲ, ಸ್ನೇಹ– ಪ್ರೀತಿಗಳನ್ನು ಕೂಡ ಟೀಕೆಯಾಗಿ ಸ್ವೀಕರಿಸುತ್ತೀರಿ. ನಿಮ್ಮನ್ನು ಅರ್ಥ ಮಾಡಿಕೊಳ್ಳುವವರಿಲ್ಲ ಎನ್ನಿಸಿದಾಗ ಎಲ್ಲರಿಂದ ದೂರ ಓಡುತ್ತೀರಿ. ಈ ಮಟ್ಟದ ಆತಂಕಕ್ಕೆ ಕಾರಣಗಳನ್ನು ನೀವೇ ಹೇಳಿದ್ದೀರಿ. ಆತಂಕಗಳು ಮಿತಿಮೀರಿದಾಗ ತಕ್ಷಣದ ಪರಿಹಾರಗಳನ್ನು ನಿರೀಕ್ಷಿಸುವುದು ಸಹಜ. ಇದು ಸಿಗದಿದ್ದಾಗ ಹತಾಶೆ ಹೆಚ್ಚುತ್ತದೆ. ನಿಮ್ಮ ಅಗತ್ಯಗಳಿಗಾಗಿ ದುಡಿಮೆಗೆ ಪ್ರಯತ್ನಿಸಿದರೆ ಓದುವುದಕ್ಕೆ ಕಡಿಮೆ ಸಮಯ ಸಿಗಬಹುದು ಎನಿಸುತ್ತಿರಬೇಕಲ್ಲವೇ? ಆದರೆ ಆರ್ಥಿಕ ಸ್ವಾತಂತ್ರ್ಯ ನೀಡುವ ಸಮಾಧಾನ, ತೃಪ್ತಿಗಳು ಕಡಿಮೆ ಸಮಯದ ಓದನ್ನು ಹೆಚ್ಚು ಪರಿಣಾಮಕಾರಿ ಮಾಡಬಹುದಲ್ಲವೇ? ದೂರದ ಗುರಿ ಮತ್ತು ಇವತ್ತಿನ ಅಗತ್ಯ, ಅನಿವಾರ್ಯತೆಗಳ ನಡುವೆ ಸಮತೋಲನವನ್ನು ಸಾಧಿಸುವುದರ ಬಗ್ಗೆ ಯೋಚಿಸಿ.

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.