ADVERTISEMENT

ಮಳೆಗಾಲದಲ್ಲಿ ತ್ವಚೆಯ ಕಾಳಜಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 19:30 IST
Last Updated 15 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲೇ ಸರಿ. ಅದರಲ್ಲೂ ಎಣ್ಣೆ ಚರ್ಮದವರಿಗೆ ಮಳೆಗಾಲದಲ್ಲಿ ಸಮಸ್ಯೆ ಕೊಂಚ ಹೆಚ್ಚು. ಈ ಕಾಲದಲ್ಲಿ ಎಣ್ಣೆಚರ್ಮದವರ ಸೌಂದರ್ಯ ಇನ್ನಷ್ಟು ಕಳೆಗುಂದುತ್ತದೆ. ಆಗಾಗ ಮೊಡವೆಗಳು ಕಾಣಿಸಿಕೊಳ್ಳಬಹುದು. ಅಲ್ಲದೇ ಬೆವರು ವಾತಾವರಣದ ಕಲ್ಮಶವನ್ನು ಚರ್ಮದಲ್ಲಿ ಉಳಿಯುವಂತೆ ಮಾಡಬಹುದು. ಇದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳಬಹುದು. ಇದು ಚರ್ಮದ ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆ ಕಾರಣಕ್ಕೆ ಋತುವಿನ ಆಧಾರದ ಮೇಲೆ ತ್ವಚೆಯ ದಿನಚರಿಯನ್ನು ಬದಲಿಸಬೇಕು. ಮಳೆಗಾಲದಲ್ಲಿ ಚರ್ಮದ ಕಾಳಜಿ ಹೀಗಿರಲಿ.

ಒಣಗಿದ ಚರ್ಮವನ್ನು ಸ್ವಚ್ಛಗೊಳಿಸಿ

ಬೆವರು, ಧೂಳಿನ ಕಾರಣದಿಂದ ಮುಚ್ಚಿರುವ ಚರ್ಮದ ರಂಧ್ರಗಳನ್ನು ತೆರೆಯುವಂತೆ ಮಾಡಲು ಒಣಗಿದ ಚರ್ಮವನ್ನು ಸ್ವಚ್ಛಗೊಳಿಸಬೇಕು. ಇದರಿಂದ ಚರ್ಮದ ಕೋಶಗಳು ಮರುಜೀವ ಪಡೆದುಕೊಳ್ಳುತ್ತವೆ. ಅದಕ್ಕಾಗಿ ಅಡುಗೆಮನೆಯಲ್ಲಿ ಸಿಗುವ ಕೆಲವು ವಸ್ತುಗಳನ್ನು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಬಳಸಿ. ಕಾಫಿಪುಡಿ, ಪಪ್ಪಾಯ, ಮೊಸರು, ಅಡುಗೆ ಸೋಡಾ ಮುಂತಾದವುಗಳಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.‌

ADVERTISEMENT

ಸ್ವಚ್ಛತೆಗೆ ಪ್ರಾಮುಖ್ಯ ನೀಡಿ

ಮಳೆಗಾಲದಲ್ಲಿ ಸ್ವಚ್ಛವಾಗಿರುವುದು ತುಂಬಾ ಮುಖ್ಯ. ಕೇವಲ ಮುಖ ಮಾತ್ರವಲ್ಲ. ಕೈ– ಕಾಲುಗಳ ಸ್ವಚ್ಛತೆಗೂ ಆದ್ಯತೆ ನೀಡಿ. ಕೊಳಕು ಸಂಗ್ರಹವಾಗುವುದು ಹಾಗೂ ಸೋಂಕು ಹರಡುವುದನ್ನು ತಡೆಯಲು ದಿನದಲ್ಲಿ ಕನಿಷ್ಠ ಮೂರು ಬಾರಿ ಮುಖ ಹಾಗೂ ಕೈ ಕಾಲುಗಳನ್ನು ತೊಳೆಯಿರಿ. ಜೊತೆಗೆ ರೋಸ್‌ ವಾಟರ್‌, ನಿಂಬೆರಸ, ಲೋಳೆಸರ ಮುಂತಾದವುಗಳನ್ನು ಹಚ್ಚುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ನೀರು ಕುಡಿಯಿರಿ ಹಾಗೂ ಮೇಕಪ್ ತಜ್ಯಿಸಿ

ಮಳೆಗಾಲದಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯುತ್ತಿರಿ. ದೇಹಕ್ಕೆ ಹೆಚ್ಚು ನೀರು ಸೇರಿದಷ್ಟೂ ದೇಹದಲ್ಲಿ ಟಾಕ್ಸಿನ್ ಅಂಶ ಕಡಿಮೆಯಾಗುತ್ತದೆ. ಇದರಿಂದ ಮೊಡವೆ ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಮೇಕಪ್‌ ಮಾಡಿಕೊಳ್ಳುವುದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಇದು ಮೊಡವೆಗೆ ಕಾರಣವಾಗಬಹುದು. ಒಂದು ವೇಳೆ ನೀವು ಮೇಕಪ್ ಮಾಡಿಕೊಂಡರೂ ಮಲಗುವ ಮೊದಲು ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಿ.

ಕೆಲವೊಮ್ಮೆ ತೆರೆದ ಚರ್ಮದ ರಂಧ್ರಗಳು ಚರ್ಮದಲ್ಲಿ ಮೊಡವೆ ಉಂಟಾಗಲು ಕಾರಣವಾಗಬಹುದು. ಆ ಕಾರಣಕ್ಕೆ ಟೋನಿಂಗ್ ಮಾಡುವುದು ಅವಶ್ಯ. ನಿಂಬೆರಸ, ಸೌತೆಕಾಯಿ ರಸ ಹಾಗೂ ಗ್ರೀನ್ ಟೀ ಬಳಸಿ ನೈಸರ್ಗಿಕವಾಗಿ ಚರ್ಮಕ್ಕೆ ಟೋನಿಂಗ್ ಮಾಡಿಕೊಳ್ಳಬಹುದು. ಇವು ಮುಖದ ಮೇಲಿನ ಕೊಳೆಯನ್ನು ಸ್ವಚ್ಛ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.