ADVERTISEMENT

ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ; ರೋಗಿಯ ಆರೋಗ್ಯದಲ್ಲಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 9:51 IST
Last Updated 7 ಜೂನ್ 2023, 9:51 IST
ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ
ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ   

ಬೆಂಗಳೂರು: ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪೊಲೊ ಆಸ್ಪತ್ರೆ ಸೇರಿ ಮೂರು ಆಸ್ಪತ್ರೆಗಳ ವೈದ್ಯರ ತಂಡ ನಡೆಸಿದ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಬೆಂಗಳೂರಿನ ಅಪೊಲೊ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ತಜ್ಞ ವೈದ್ಯರ ತಂಡ, ಚೆನ್ನೈನ ಕಾವೇರಿ ಆಸ್ಪತ್ರೆ ಹಾಗೂ ಹರಿಯಾಣದ ಫರೀದಾಬಾದ್ ಮರೆಂಗೊ ಏಷ್ಯಾ ಆಸ್ಪತ್ರೆಯ ವೈದ್ಯರ ಸಹಯೋಗದಲ್ಲಿ ಬೆಂಗಳೂರಿನ 57 ವರ್ಷದ ರೋಗಿಯೊಬ್ಬರಿಗೆ ಶ್ವಾಸಕೋಶ ಕಸಿ ನಡೆಸಲಾಯಿತು. 

ಬೆಂಗಳೂರಿನ 57 ವರ್ಷದ ಮೀನಾಕ್ಷಿ (ಹೆಸರು ಬದಲಾಯಿಸಲಾಗಿದೆ) ಅವರು ಕಳೆದ ಎರಡು ವರ್ಷಗಳಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಉಸಿರುಗಟ್ಟುವಿಕೆ ಸಮಸ್ಯೆ ತೀರಾ ಹೆಚ್ಚಾದ ಕಾರಣ ಮೀನಾಕ್ಷಿ ಅವರು ಜಯನಗರದ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಮಹಿಳೆಗೆ ವಿಭಿನ್ನವಾದ ಶ್ವಾಸ ಕೋಶದ ಕಾಯಿಲೆ ಇಂಟರ್‌ಸ್ಟೀಶಿಯಲ್ ಶ್ವಾಸ ಕೋಶದ ಸಮಸ್ಯೆ ಇರುವುದು ತಪಾಸಣೆ ವೇಳೆ ಪತ್ತೆಯಾಗಿತ್ತು. ಈ ರೀತಿಯ ಆರೋಗ್ಯ ಸಮಸ್ಯೆ ಶ್ವಾಸ ಕೋಶದ ಫೈಬ್ರೋಸಿಸ್ ಅಥವಾ ಗಟ್ಟಿಯಾಗುವಿಕೆ ಸಮಸ್ಯೆಗೆ ಕಾರಣವಾಗುತ್ತದೆ. ಮಹಿಳೆಯ ಆರೋಗ್ಯ ಸ್ಥಿತಿ ನಿರಂತರ ಉಸಿರಾಟದ ತೊಂದರೆಗೆ ಕಾರಣವಾಗಿತ್ತು. ಹೀಗಾಗಿ ಆಕೆಗೆ ತನ್ನ ಮನೆಯಲ್ಲಿ ನಿರಂತರ ಆಮ್ಲಜನಕದ ಬೆಂಬಲದ ಅಗತ್ಯ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಅವರಿಗೆ ದೈನಂದಿನ ಯಾವುದೇ ಚಟುವಟಿಕೆಗಳನ್ನು ತಾವಾಗಿಯೇ ಮಾಡಲು ಸಮರ್ಥರಾಗಿರಲಿಲ್ಲ. ಅವರಲ್ಲಿ ಅಸಮರ್ಥತೆ ಮತ್ತು ಜೀವನದ ಸಾಮಾನ್ಯ ಹರಿವಿನಿಂದ ಸಂಪೂರ್ಣವಾಗಿ ಕಡಿತಗೊಂಡು ತೀವ್ರತರ ಆರೋಗ್ಯ ಸಮಸ್ಯೆ ಎದುರಿಸುವಂತಾಗಿತ್ತು.

ADVERTISEMENT

ಹೀಗಾಗಿ ಇವರಿಗೆ ಶ್ವಾಸಕೋಶ ಕಸಿ ನಡೆಸಲು ವೈದ್ಯರ ತಂಡ ಶಿಫಾರಸು ಮಾಡಿತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯ ಶ್ವಾಸ ಕೋಶ ಕಸಿ ಪೂರ್ವ ತಪಾಸಣೆ ಮತ್ತು ಇನ್ನಿತರೆ ಪರೀಕ್ಷೆಗಳ ಮೌಲ್ಯಮಾಪನಕ್ಕಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂವತ್ತಾರು ಗಂಟೆಗಳ ಸಮನ್ವಯದ ನಂತರ ಅಂತಿಮವಾಗಿ ಮಹಿಳೆಯ ಎರಡೂ ಕಡೆಯ ಶ್ವಾಸ ಕೋಶ ಕಸಿಯನ್ನು ಯಶಸ್ವಿ ಯಾಗಿ ಮಾಡಲಾಯಿತು ಎಂದು ಶ್ವಾಸಕೋಶ ವಿಭಾಗದ ಹಿರಿಯ ಸಲಹೆಗಾರ ಡಾ. ರವೀಂದ್ರ ಮೆಹ್ತಾ ತಿಳಿಸಿದರು.

ಶ್ಶಾಸಕೋಶ ದಾನ ಮಾಡಿದವರೂ ಅಪೊಲೊ ಆಸ್ಪತ್ರೆಯಲ್ಲಿ ಆಂತರಿಕ ರೋಗಿಯಾಗಿದ್ದರು. ಹಸಿರು ಕಾರಿಡಾರ್- ಗ್ರೀನ್ ಕಾರಿಡಾರ್ ಅಗತ್ಯವಿರಲಿಲ್ಲ. ಒಟ್ಟು 13 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆ ನಂತರ ನಡೆಸಿದ ಆರೈಕೆ ಹಾಗೂ ವೈದ್ಯಕೀಯ ಉಪಚಾರಗಳಿಂದ ಮಹಿಳೆ ಈಗ ಯಾರ ಸಹಾಯವೂ ಇಲ್ಲದೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವಷ್ಟು ಸಮರ್ಥರಾಗಿದ್ದಾರೆ. ತಂಡದಲ್ಲಿ ಡಾ.ಸಮೀರ್ ಬನ್ಸಾಲ್, ಡಾ.ಹರಿಪ್ರಸಾದ್, ಡಾ.ಜಗದೀಶ್ ಕ್ರಿಟಿಕಲ್ ಕೇರ್, ಡಾ.ಶ್ರೀಕಾಂತ್, ಚೆನ್ನೈನ ಕಾವೇರಿ ಆಸ್ಪತ್ರೆಯ ಕಸಿ ತಜ್ಞ ವೈದ್ಯ ಡಾ.ಶ್ರೀನಿವಾಸ್ ರಾಜಗೋಪಾಲ ಅವರ ನೇತೃತ್ವದಲ್ಲಿ ಹೃದಯ, ಎದೆಗೂಡಿನ ತಜ್ಞರಾದ ಡಾ. ಕುಮುದ್ ಧಿತಾಲ್, ಶಸ್ತ್ರಚಿಕಿತ್ಸೆ ತಜ್ಞರಾದ ಡಾ. ಆನಂದ್ ಸುಬ್ರಮಣ್ಯಂ, ಅರಿವಳಿಕೆ ತಜ್ಞರಾದ ಡಾ.ಪ್ರದೀಪ್ ಕುಮಾರ್, ಡಾ.ಶ್ರೀನಿವಾಸ್ ಧೂಳಿಪಾಲ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.