ಚಿತ್ರ:ಎಐ
ಮೋಕ್ಷದ ಏಕಾದಶಿ ವಿಷ್ಣುವಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ವಿಷ್ಣುವಿಗೆ ಪೂಜೆ ಸಲ್ಲಿಸಿ, ಉಪವಾಸ ವ್ರತ ಆಚರಿಸುವುದರಿಂದ ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಪಿತೃಗಳ ಆತ್ಮಕ್ಕೆ ಮೋಕ್ಷ ದೊರೆಯುತ್ತದೆ. ಮೋಕ್ಷದ ಏಕಾದಶಿಯ ಮಹತ್ವ, ಪೂಜಾ ವಿಧಾನದ ಬಗ್ಗೆ ತಿಳಿಯೋಣ.
ಮಾರ್ಗಶೀರ್ಷ ಮಾಸದ ಏಕಾದಶಿಯ ತಿಥಿಯಂದು ಮೋಕ್ಷದ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಪಿತೃಗಳ ಹೆಸರಿನಲ್ಲಿ ದಾನ ಮಾಡುವುದು ಒಳ್ಳೆಯದು ಎಂದು ಶಾಸ್ತ್ರ ಹೇಳುತ್ತದೆ.
ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದನೆಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಈ ದಿನವನ್ನು ಗೀತಾ ಜಯಂತಿ ಎಂದೂ ಆಚರಿಸಲಾಗುತ್ತದೆ. ಉಪದೇಶದಲ್ಲಿ ಕೃಷ್ಣನು ಅರ್ಜುನನಿಗೆ ಜೀವನದ ಮೂಲತತ್ವ ಮತ್ತು ಧರ್ಮದ ಮಾರ್ಗವನ್ನು ತೋರಿಸಿದನು. ಈ ದಿನ ಪೂಜೆ ಹಾಗೂ ಉಪವಾಸ ವ್ರತ ಆಚರಿಸುವುದರಿಂದ ಮನುಷ್ಯ ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಎನ್ನುವ ನಂಬಿಕೆಯಿದೆ.
ಮೋಕ್ಷದ ಏಕಾದಶಿ ಪೂಜೆ ವಿಧಾನ:
ಈ ದಿನ ಉಪವಾಸ ನಿಯಮಗಳನ್ನು ಅನುಸರಿಸಬೇಕು. ಇಂದು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬಾರದು.
ಇಂದು ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಅಥವಾ ಸುಳ್ಳು ಹೇಳುವುದನ್ನು ಮಾಡಬೇಡಿ.
ತಾಮಸಿಕ ಆಹಾರ ಅಥವಾ ಮಾದಕ ವಸ್ತುಗಳ ಸೇವನೆ ತಪ್ಪಿಸಿರಿ.
ದೇವರಿಗೆ ತಿಲಕ ಹಚ್ಚಿ ಹೂವಿನ ಮಾಲೆ ಹಾಕಿ ಶ್ರೀಕೃಷ್ಣನ ಮುಂದೆ ದೀಪವನ್ನು ಹಚ್ಚಿ. ಪೂಜೆ ಸಮಯದಲ್ಲಿ ‘ಕ್ರೀಂ ಕೃಷ್ಣಾಯ ನಮಃ’ ಮಂತ್ರವನ್ನು ಪಠಿಸಿ.
ನೈವೇದ್ಯಕ್ಕೆ ಬೆಣ್ಣೆಯ ಸಿಹಿ ತಿಂಡಿಗಳು ಮತ್ತು ಹಣ್ಣುಗಳನ್ನು ಅರ್ಪಿಸಿ
ಪೂಜೆಯ ಕೊನೆಯಲ್ಲಿ ಕೃಷ್ಣನಿಗೆ ಆರತಿ ಮಾಡಿ. ಈ ದಿನದ ರಾತ್ರಿ ಜಾಗರಣೆ ಮಾಡಬಹುದು.
ಮೋಕ್ಷದ ಏಕಾದಶಿ ಕಥೆ:
ಪ್ರಾಚೀನ ಕಾಲದಲ್ಲಿ, ವೈಖಾನಸ ಎಂಬ ರಾಜನು ಗೋಕುಲ ನಗರವನ್ನು ಆಳುತ್ತಿದ್ದನು. ಒಂದು ದಿನ ರಾಜ ಅವನ ತಂದೆ ನರಕದಲ್ಲಿ ನರಳುತ್ತಿರುವಂತೆ ಹಾಗೂ ತನ್ನ ಆತ್ಮಕ್ಕೆ ಮೋಕ್ಷ ನೀಡು ಎಂದು ಬೇಡಿಕೊಳ್ಳುವಂತೆ ಕನಸು ಕಂಡನು. ತನ್ನ ತಂದೆಯ ಈ ಸ್ಥಿತಿಯನ್ನು ಕಂಡು ರಾಜ ಕಂಗಾಲಾದ. ಅವನು ಬ್ರಾಹ್ಮಣರನ್ನು ಕರೆದು ತನಗೆ ಬಿದ್ದಿರುವ ಈ ಕನಸಿನ ಅರ್ಥವೆನೆಂದು ವಿಚಾರಿಸಿದ. ಬ್ರಾಹ್ಮಣರು ಆತನನ್ನು ಒಂದು ಋಷಿಯ ಬಳಿಗೆ ಕಳುಹಿಸಿಕೊಡುತ್ತಾರೆ. ರಾಜನ ಮಾತನ್ನು ಕೇಳಿಸಿಕೊಂಡ ಋಷಿ ಆತನನ್ನು ಕುರಿತು, ನಿಮ್ಮ ತಂದೆಯು ಅವರ ಹಿಂದಿನ ಜನ್ಮಗಳ ಕರ್ಮಗಳಿಂದ ನರಕವನ್ನು ಸೇರಿದ್ದಾರೆ. ಮೋಕ್ಷದ ಏಕಾದಶಿಯಂದು ವ್ರತ ಮಾಡಿ ಅದರ ಫಲವನ್ನು ನಿನ್ನ ತಂದೆಗೆ ಸೇರುವಂತೆ ಬೇಡಿಕೊಂಡರೆ ನಿನ್ನ ತಂದೆಯ ಆತ್ಮ ಮೋಕ್ಷವನ್ನು ಪಡೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ರಾಜನು ಋಷಿಗಳ ಸಲಹೆಯಂತೆ ಮೋಕ್ಷದ ಏಕಾದಶಿಯ ಉಪವಾಸವನ್ನು ಆಚರಿಸಿದನು. ಬ್ರಾಹ್ಮಣರಿಗೆ ಅಕ್ಕಿ, ದಕ್ಷಿಣೆ ಮತ್ತು ವಸ್ತ್ರ ಇತ್ಯಾದಿಗಳನ್ನು ಅರ್ಪಿಸಿ ಆಶೀರ್ವಾದ ಪಡೆದನು ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.