ADVERTISEMENT

ಕೋವಿಡ್‌ ಬಳಿಕವೂ ಆರೋಗ್ಯ ಸಮಸ್ಯೆ

ಕೋವಿಡ್‌ ನಂತರದ ಆರೈಕೆ ಕೇಂದ್ರದ ಸಲಹೆ ಪಡೆದವರು ನೂರಾರು ಮಂದಿ

ಮಹಮ್ಮದ್ ನೂಮಾನ್
Published 21 ನವೆಂಬರ್ 2020, 1:30 IST
Last Updated 21 ನವೆಂಬರ್ 2020, 1:30 IST
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ ( ರಾಯಿಟರ್ಸ್‌ ಚಿತ್ರ )
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ ( ರಾಯಿಟರ್ಸ್‌ ಚಿತ್ರ )   

ಮೈಸೂರು: ತುಂಬಾ ದೂರ ನಡೆದಾಡಲು ಆಗುತ್ತಿಲ್ಲ, ಮೆಟ್ಟಿಲು ಹತ್ತಲು ಕಷ್ಟವಾಗುತ್ತಿದೆ, ಸ್ನಾಯು ಹಾಗೂ ಕೀಲು ನೋವು, ಆಯಾಸ, ಸುಸ್ತು, ಒತ್ತಡ, ನಿದ್ದೆ ಬರುತ್ತಿಲ್ಲ....

ಕೋವಿಡ್‌ನಿಂದ ಚೇತರಿಸಿಕೊಂಡ ವರಿಗೆ ಹೆಚ್ಚಿನ ಆರೈಕೆಗಾಗಿ ನಗರದ ಕೆಲವು ಆಸ್ಪತ್ರೆಗಳಲ್ಲಿ ತೆರೆದಿರುವ ‘ಕೋವಿಡ್‌ ಪುನಶ್ಚೇತನ ಕೇಂದ್ರ’ಗಳಿಗೆ ಬರುವವರು ಸಾಮಾನ್ಯವಾಗಿ ಹೇಳುವ ಆರೋಗ್ಯ ಸಮಸ್ಯೆಗಳಿವು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಕೊರೊನಾ ಸೋಂಕಿನಿಂದ ಚೇತರಿ ಸಿಕೊಂಡ ಮೇಲೂ ಹಲವರಿಗೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಕೆಲವರು ವಾರದಿಂದ ತಿಂಗಳವರೆಗೂ ಸಮಸ್ಯೆ ಎದುರಿಸುತ್ತಿದ್ದಾರೆ. ಅಂಥವರಿ ಗಾಗಿಯೇ ಕೋವಿಡ್‌ ಪುನಶ್ಚೇತನ ಕೇಂದ್ರ, ಪೋಸ್ಟ್‌ ಕೋವಿಡ್ ರಿಕವರಿ ಕ್ಲಿನಿಕ್‌ಗಳು ಆರಂಭವಾಗಿದ್ದವು. ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಪ್ರತಿನಿತ್ಯ ಇಲ್ಲಿಗೆ ಜನರು ಬರುತ್ತಿದ್ದಾರೆ.

‘ಕೋವಿಡ್‌ ಪುನಶ್ಚೇತನ ಕೇಂದ್ರ ಆರಂಭವಾಗಿ ಒಂದು ತಿಂಗಳು ಕಳೆಯಿತು. ಪ್ರತಿದಿನ ಹಲವು ಮಂದಿ ಭೇಟಿ ನೀಡಿ ಸಲಹೆ ಹಾಗೂ ಔಷಧ ಪಡೆಯುತ್ತಿದ್ದಾರೆ’ ಎಂದು ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆಯ ಪ್ರಾಂಶುಪಾಲ ಹಾಗೂ ಮೆಡಿಕಲ್‌ ಸೂಪರಿಂಟೆಂಡೆಂಟ್ ಡಾ.ಸರ್ವೇಶ್ವರ್‌ಕರ್‌ ಹೇಳಿದರು.

ಆಯಾಸ, ಸುಸ್ತು, ನಡೆ ದಾಡಲು ಕಷ್ಟವಾಗುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಜನರು ಬರುತ್ತಾರೆ. ಕೋವಿಡ್‌ನ ಗಂಭೀರ ಲಕ್ಷಣಗಳನ್ನು ಹೊಂದಿ ತುಂಬಾ ದಿನ ಆಸ್ಪತ್ರೆಯಲ್ಲಿದ್ದವರಿಗೆ ಸೋಂಕು ಮುಕ್ತರಾದ ಬಳಿಕವೂ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎಂದರು.

ಆಸ್ಪತ್ರೆಗೆ ದಾಖಲಾಗಲು ಹಿಂಜರಿಕೆ: ಕೋವಿಡ್‌ನಿಂದ ಗುಣಮುಖರಾದವರ ಆರೈಕೆಗಾಗಿ ಲಲಿತಾದ್ರಿಪುರ ರಸ್ತೆಯ ಲ್ಲಿರುವ ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆಯಲ್ಲಿ ಸುಮಾರು 40 ಬೆಡ್‌ಗಳನ್ನು ಮೀಸಲಿಡಲಾಗಿದೆ. ಆದರೆ ಆಸ್ಪತ್ರೆಯಲ್ಲಿ ದಾಖಲಾಗಿ ಆರೈಕೆ ಪಡೆಯುವವರ ಸಂಖ್ಯೆ ತೀರಾ ಕಡಿಮೆ.

ಕೋವಿಡ್‌ ಇದ್ದಾಗ ಹಲವು ದಿನ ಆಸ್ಪತ್ರೆಯಲ್ಲಿದ್ದು ಮನೆಗೆ ಹೋಗಿರುವ ಅವರು ಮತ್ತೆ ಆಸ್ಪತ್ರೆಯಲ್ಲಿರಲು ಬಯ ಸುವುದಿಲ್ಲ. ಈ ಕಾರಣ ತಜ್ಞ ವೈದ್ಯರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ಪಡೆದು, ಅಗತ್ಯ ಔಷಧಿಗಳನ್ನು ತೆಗೆದುಕೊಂಡು ಹೋಗುವರು ಎಂದು ಡಾ.ಸರ್ವೇಶ್ವರ್ ತಿಳಿಸಿದರು.

‘ಇಲ್ಲಿಗೆ ಬರುವವರನ್ನು ಪೂರ್ಣ ರೀತಿಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸುತ್ತೇವೆ. ಆ ಬಳಿಕ ಸೂಕ್ತ ಸಲಹೆಗಳನ್ನು ನೀಡಲಾಗುತ್ತದೆ. ಯಾವ ರೀತಿಯ ಆಹಾರ ಸೇವಿಸಬೇಕು, ವ್ಯಾಯಾಮ, ಯೋಗ ಹಾಗೂ ಆರೋಗ್ಯ ವರ್ಧನೆಗೆ ಬೇಕಾದ ಇನ್ನಿತರ ಮಾಹಿತಿ ನೀಡುತ್ತೇವೆ’ ಎಂದು ಹೇಳಿದರು.

‘ಇಲ್ಲಿಗೆ ಬರುವ ಕೆಲವರು ಒಂದೆರಡು ದಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರೆ ಬೇಗನೇ ಗುಣಮುಖರಾಗುವ ಸಾಧ್ಯತೆಯಿದೆ. ಆದರೆ ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಲು ಮುಂದಾಗುವುದಿಲ್ಲ. ನಾವು ಅವರಿಗೆ ಒತ್ತಡವೂ ಹಾಕುವುದಿಲ್ಲ. ಮನೆಯಲ್ಲೇ ಎಲ್ಲ ಮುನ್ನೆಚ್ಚರಿಕೆ ಪಡೆದು ಆರೈಕೆ ಪಡೆಯುವಂತೆ ಸೂಚಿಸುತ್ತೇವೆ’ ಎಂದರು.

‘200ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ’

ನಗರದ ಅಪೋಲೊ ಬಿಜಿಎಸ್‌ ಆಸ್ಪತ್ರೆಯಲ್ಲೂ ‘ಪೋಸ್ಟ್‌ ಕೋವಿಡ್‌ ರಿಕವರಿ ಕ್ಲಿನಿಕ್’ ತೆರೆಯಲಾಗಿದ್ದು, ಎರಡು ವಾರಗಳಲ್ಲಿ 200 ಕ್ಕೂ ಅಧಿಕ ಮಂದಿ ಇಲ್ಲಿ ಸಲಹೆ ಹಾಗೂ ಚಿಕಿತ್ಸೆ ಪಡೆದುಕೊಂಡಿದ್ದಾರೆ.

‘ಭಾರತದಲ್ಲಿ ಕೋವಿಡ್‌ ಸಾವಿನ ಪ್ರಮಾಣ ಕಡಿಮೆಯಿದೆಯಾದರೂ, ಕೋವಿಡ್‌ ಬಳಿಕದ ಆರೋಗ್ಯ ಸಮಸ್ಯೆಗಳು ಸಾಮಾನ್ಯ ಎನ್ನುವಂತಾಗಿದೆ. ಆದ್ದರಿಂದ ಕೋವಿಡ್‌ನಿಂದ ಗುಣಮುಖರಾದ ಬಳಿಕವೂ ಆರೋಗ್ಯದ ಮೇಲೆ ಹೆಚ್ಚಿನ ಗಮನವಿಡುವುದು ಅಗತ್ಯ’ ಎಂದು ಅಪೋಲೊ ಆಸ್ಪತ್ರೆಯ ಡಾ.ಸಂಜೀವ್‌ ರಾವ್ ಗಿರಿಮಾಜಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.