ಈ ದೇವರು ಆಡಿದ ಮಾತೇ ವೇದ ವಾಕ್ಯ. ಈ ದೇವರು ಭಕ್ತರ ಮೈಮೇಲೆ ತುಳಿದುಕೊಂಡು ಹೋಗುತ್ತದೆ. ಆಶೀರ್ವಾದ ಬಯಸಿ ಬರುವ ಭಕ್ತರು ಮದ್ಯದ ಬಾಟಲಿಗಳನ್ನೇ ಪ್ರಸಾದವೆಂದು ಪಡೆಯುತ್ತಾರೆ.
ಎರಡು ದಿನ ಜಾತ್ರೆಗೆ ಬರುವ ಸಾವಿರಾರು ಜನರಿಗೆ ಮಜ್ಜಿಗೆಯಿಂದ ತಯಾರಿಸುವ ಅಂಬಲಿ ಪ್ರಸಾದದ ರೂಪದಲ್ಲಿ ವಿತರಣೆಯಾಗುತ್ತದೆ. ಮದ್ಯದ ಅಮಲಿನಲ್ಲಿ ತೂರಾಡುವ ಆಟ ನಾಸ್ತಿಕರಿಗೆ ಗಮ್ಮತ್ತು, ಜನರಿಗೆ ಖುಷಿ ಕೊಡುತ್ತದೆ.
ವಿಜಾಪೂರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಹೋಳಿ ಹುಣ್ಣಿಮೆ ನಂತರದ ಎಂಟನೇ ದಿನಕ್ಕೆ ನಡೆಯುವ ಸುಂಗಟಾನ ಸಿದ್ದಪ್ಪ ಮುತ್ಯಾನ ಜಾತ್ರೆ ತನ್ನದೇ ಆದ ವೈಶಿಷ್ಟ್ಯಗಳಿಂದಾಗಿ ಪ್ರಸಿದ್ಧಿ ಪಡೆದಿದೆ. ಸಿದ್ದಪ್ಪ ದೇವರು ಮೂಲತಃ ಸಿಂದಗಿ ತಾಲ್ಲೂಕಿನ ಸುಂಗಟಾನ ಗ್ರಾಮದವನು. ಸುಂಗಟಾನದಿಂದ ತಂಗಡಗಿಗೆ ಸುಮಾರು 120 ಕಿ.ಮೀ.ದೂರ.
ಜಾತ್ರೆಯ ದಿನ (ಈ ಸಲ ಮಾರ್ಚ್ 15 ರಂದು) ಸುಮಾರು ಹತ್ತು ಸಾವಿರ ಜನಕ್ಕೆ ಜನರೇ ಅಡುಗೆ ಮಾಡಿ ಬಡಿಸುತ್ತಾರೆ. ಭಕ್ತರನ್ನು ಜಾತಿ ಬೇಧ ಎಣಿಸದೇ ತಮ್ಮ ಮನೆಯಲ್ಲಿ, ಮನೆಯ ಮುಂದೆ ಜಾಗ ಕೊಟ್ಟು ಆದರಿಸುತ್ತಾರೆ.
ಸುಂಗಟಾನ ಸಿದ್ದಪ್ಪನ ಪಲ್ಲಕ್ಕಿ 1985 ಕ್ಕಿಂತ ಮುಂಚೆ ನೇರವಾಗಿ ಕೂಡಲ ಸಂಗಮಕ್ಕೆ ಹೋಗಿ ಗಂಗಾ ಸ್ನಾನ ಮಾಡಿದ ನಂತರ ಸಂಗಮನಾಥನ ದರ್ಶನ ಪಡೆಯುತ್ತಿತ್ತು. ನಂತರ ಕೃಷ್ಣಾ ನದಿಯ ಮಧ್ಯದಲ್ಲಿದ್ದ ಸುಂಗಟಾನ ಸಿದ್ದಪ್ಪನ ಕಟ್ಟೆಯ ಮೇಲೆ ನಿಂತು ಹೇಳುತ್ತಿದ್ದ `ಹೇಳಿಕೆ~ಗಳು ಈಗ ನಾರಾಯಣಪೂರ ಜಲಾಶಯದ ಹಿನ್ನೀರಿನಿಂದಾಗಿ ತಂಗಡಗಿ ಸಮೀಪದ ಕುಂಚಗನೂರದಲ್ಲಿ ನಡೆಯುತ್ತವೆ.
ಭಕ್ತರು ಕೊಟ್ಟ ತೀರ್ಥ ಸ್ವೀಕರಿಸಿದ (ಮದ್ಯ ಸೇವಿಸಿದ) ನಂತರ ನಿಂಬೆ ಹಣ್ಣಿನ ಗಾತ್ರದ 12 ಉಕ್ಕಿನ ಗುಂಡುಗಳನ್ನು ತೆಗೆದುಕೊಂಡು ಸುಂಗಟಾನದಿಂದ ಬಂದ ಇಬ್ಬರು ಭಕ್ತರು ಕಂಬಳಿ ಹೊದ್ದು ತಮ್ಮ ಬೆನ್ನಿಗೆ ಬಲವಾಗಿ ಹೊಡೆದುಕೊಳ್ಳುತ್ತಾರೆ. ಆನಂತರ `ಹೇಳಿಕೆ~ಗಳು ನಡೆಯುತ್ತವೆ. ಅಲ್ಲಿ ದೇವರು (ಸಿದ್ದಪ್ಪ) ಹೇಳುವ ಮಾತು ನಿಜವಾಗುತ್ತದೆ ಎಂಬ ನಂಬಿಕೆ ಭಕ್ತರದು.
ಜಾತ್ರೆಗೆ ಬರುವವರು ಬುತ್ತಿ, ರೊಟ್ಟಿ, ಬಾನ, ಜೊತೆಗೆ ದೇವರ ಸಂಪ್ರೀತಿಗೆ ಮದ್ಯದ ಬಾಟಲಿಗಳನ್ನೂ ಕೇಸುಗಟ್ಟಲೇ ತರುತ್ತಾರೆ. ಕುಂಚಗನೂರ ಬಳಿ ಗುರುವಾರ ಸಂಜೆ ನಡೆಯುವ ಜಾತ್ರೆಯಲ್ಲಿ ನೆರೆಯುವ ಸಾವಿರಾರು ಸದ್ಭಕ್ತರಿಗೆ ಹೋಳಿಗೆ, ರೊಟ್ಟಿ, ಬಾನ, ಚಟ್ನಿ, ಇದರ ಮೇಲೊಂದು ಮದ್ಯದ ಬಾಟಲಿ ಸಹ ಪ್ರಸಾದವೆಂದು ವಿತರಣೆಯಾಗುತ್ತದೆ.
ದೇವರ ಪಲ್ಲಕ್ಕಿ ಹರಕೆ ಹೊತ್ತ ಜನರ ದೇಹದ ಮೇಲೆ ನಡೆಯುತ್ತದೆ. ಅನೇಕ ತಂದೆ ತಾಯಿ ತಮ್ಮ ಹಸುಗೂಸುಗಳನ್ನೂ ಪಲ್ಲಕ್ಕಿ ಕೆಳಗೆ ಬಿಡುವುದುಂಟು. ದೇವರು ತಮ್ಮನ್ನು ತುಳಿಯುತ್ತ ಹೋದರೆ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.