ನಗರದ ಎಚ್ಆರ್ಬಿಆರ್ ಬಡಾವಣೆಯಲ್ಲಿರುವ ನಿರ್ಲಕ್ಷಿತ ಚೆಳ್ಳಕೆರೆ ಕೆರೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಆ ಸ್ಥಳದಲ್ಲಿ ನಾಲ್ಕನೇ ಕೆರೆ ಹಬ್ಬವನ್ನು ಆಯೋಜಿಸಲಾಗಿತ್ತು.
ಸ್ಥಳೀಯ ಕೆರೆ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಮ್ಮ ಬೆಂಗಳೂರು ಫೌಂಡೇಷನ್ (ಎನ್ಬಿಎಫ್), ನಾಗರಿಕ ಕಲ್ಯಾಣ ಸಂಘದ (ಸಿಟಿಜನ್ ವೆಲ್ಫೇರ್ ಅಸೊಸಿಯೇಷನ್) ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆ, ಅಡುಗೆ ಸ್ಪರ್ಧೆ, ಪಕ್ಷಿಗಳ ಛಾಯಾಚಿತ್ರ, ನೈಸರ್ಗಿಕ ನಡಿಗೆ, ಆರಿಗಾಮಿ(ಪೇಪರ್ ಆರ್ಟ್), ಮಕ್ಕಳ ಆಟಗಳು ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು. ಮಕ್ಕಳು, ಮಹಿಳೆಯರು ಹಾಗೂ ಸ್ಥಳೀಯರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ವಿಶೇಷ.
ವಿನೋದ, ಮನರಂಜನೆ, ಪರಿಸರ ಕಾಳಜಿ, ಸಮುದಾಯ ಭಾಗವಹಿಸುವಿಕೆ ಹಾಗೂ ಸ್ಥಳೀಯ ಕೆರೆ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವಂತಹ ವಿಷಯಗಳೊಂದಿಗೆ ಜನರನ್ನು ಒಟ್ಟುಗೂಡಿಸುವಂತಹ ಹಲವು ಕಾರ್ಯಕ್ರಮಗಳನ್ನು ನಡೆಸಲು ಕೆರೆಹಬ್ಬವನ್ನು ನಡೆಸಲಾಗುತ್ತಿದೆ. ಜನರು ತಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಸಂಪರ್ಕ ಹೊಂದುವುದರ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಅದನ್ನು ಜೀವಂತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾಗೀದಾರರಾಗುವಂತೆ ಪ್ರೋತ್ಸಾಹಿಸುವುದು ಈ ಆಚರಣೆಯ ಉದ್ದೇಶವಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್ಪಿಸಿಬಿ) ಅಧ್ಯಕ್ಷ ವಾಮನಾಚಾರ್ಯ, ಕೆಎಸ್ಪಿಸಿಬಿಯ ಪರಿಸರ ಅಭಿಯಂತರರು ಎಂ.ಸಿ.
ರಮೇಶ್ ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ಸಿಇಒ ಶ್ರೀಧರ್ ಪಬ್ಬಿಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.