ADVERTISEMENT

ಗೀತ ‘ಪರಿಣಯ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST

ಕನಸಿನ ಸೌಧ ಕಟ್ಟಿಕೊಂಡ ಉತ್ಸಾಹಿ ಯುವಕನದು ಉತ್ಕಟ ಪ್ರೀತಿ. ತಾನು ಪ್ರೀತಿಸುವ ಹುಡುಗಿಯೆದುರು ಮಂಡಿಯೂರಿ ಪ್ರೇಮನಿವೇದನೆ ಮಾಡಿಕೊಳ್ಳುವ ದಿನಗಳಿಗೆ ಲೆಕ್ಕವಿಲ್ಲ. ಆಕೆ ರೋಗಿಗಳ ಜೀವ ಉಳಿಸುವ ಕರ್ತವ್ಯಕ್ಕೆ ಬದ್ಧಳಾಗಿರುವಾಕೆ. ಆದರೆ ಈ ಪ್ರೇಮರೋಗಿಯ ಕೋರಿಕೆಯನ್ನು ಒಪ್ಪಿಕೊಳ್ಳುತ್ತಲೂ ಇಲ್ಲ, ತಿರಸ್ಕರಿಸುತ್ತಲೂ ಇಲ್ಲ. ಆಕೆಯ ಮನಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಪ್ರತಿ ಬಾರಿ ಹುಡುಗ ಪ್ರೇಮ ಅರುಹಿದಾಗ ಆಕೆ ಕೇಳುವುದು, ನಿನ್ನನ್ನು ಪ್ರೀತಿಸಲು ಸರಿಯಾದ ಕಾರಣ ಕೊಡು ಎಂದು– ಇದು ‘ಪರಿಣಯ’ದ ಪ್ರೇಮ ಪ್ರಸಂಗ.

ಶೀರ್ಷಿಕೆಯಲ್ಲಿ ‘ಪರಿಣಯ’ವಿದ್ದರೂ ಇದು ಪರಿಣಯಕ್ಕೂ ಮುಂಚಿನ ಕಥನ ಎಂಬ ಸುಳಿವನ್ನು ನೀಡಿದರು ನಿರ್ದೇಶಕ ಸುಧಾಕರ್‌. ಹಾಗಾದರೆ ಪರಿಣಯ ಯಾವಾಗ? ಈ ಕುತೂಹಲ ಸಿನಿಮಾ ಬಿಡುಗಡೆಯಾಗುವವರೆಗೂ ಇರಲಿ ಎಂಬ ಉತ್ತರ ಸುಧಾಕರ್‌ ಅವರದು.

ಚಿತ್ರೀಕರಣ ಪೂರ್ಣಗೊಳಿಸಿದ ಚಿತ್ರತಂಡ ಸುದ್ದಿಮಿತ್ರರಿಗೆ ಮುಖಾಮುಖಿಯಾದದ್ದು ಹಾಡುಗಳನ್ನು ಮಾರುಕಟ್ಟೆಗೆ ಹೊರತರುವ ನೆಪದಲ್ಲಿ. ಸಂಗೀತ ನಿರ್ದೇಶಕ ಎ.ಎಂ. ನೀಲ್ ಮಟ್ಟು ಹಾಕಿದ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದವರು ವಿಜಯ್‌ ಭರಮಸಾಗರ, ಸುಧಾಕರ್‌ ಮತ್ತು ಶ್ರೀನಿವಾಸ್‌.
‘ಪರಿಣಯ’ ನವಿರು ಪ್ರೇಮಕಥನದ ಚಿತ್ರ ಎನ್ನುವುದು ಸುಧಾಕರ್‌ ಅವರ ವಿವರಣೆ. ಅವರು ಮಿಲನ ಪ್ರಕಾಶ್‌ ಮತ್ತು ಓಂಪ್ರಕಾಶ್‌ ರಾವ್‌ ಬಳಿ ಕೆಲಸ ಮಾಡಿದ ಅನುಭವ ಹೊಂದಿದವರು.  ಹಾಡುಗಳ ಚಿತ್ರೀಕರಣಕ್ಕಾಗಿ ಸಾಕಷ್ಟು ಊರುಗಳನ್ನು ಸುತ್ತಾಡಿರುವ ಅವರು ಮಾಧುರ್ಯ ಭರಿತ ಸಂಗೀತದ ಜೊತೆಗೆ ದೃಶ್ಯಗಳ ಹಿನ್ನೆಲೆಯ ಪರಿಸರವೂ ಸುಂದರವಾಗಿರಬೇಕು ಎಂಬ ಉದ್ದೇಶಕ್ಕೆ ಬದ್ಧರಾಗಿದ್ದರಂತೆ.

‘ಪ್ಯಾಟೆ ಹುಡ್ಗ ಕಾಡಿಗ್ ಬಂದ’, ‘ರಾಧಾ ಕಲ್ಯಾಣ’ ಮತ್ತು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿರುವ ನಟ ಚಂದನ್‌ ಮೊದಲ ಬಾರಿಗೆ ನಾಯಕರಾಗುವ ಮೂಲಕ ಬೆಳ್ಳಿತೆರೆಯಲ್ಲಿನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ನೆರಳು’ ಎಂಬ ಚಿತ್ರದಲ್ಲಿ ನಟಿಸಿದ್ದ ಶ್ರುತಿ ‘ಪರಿಣಯ’ದ ವಧು! ತಮಿಳು ಚಿತ್ರವೊಂದರ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಶ್ರುತಿ ಆಡಿಯೊ ಸೀಡಿ ಬಿಡುಗಡೆ ವೇಳೆ ಹಾಜರಿರಲಿಲ್ಲ.

ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾಗಿರುವ ಆನೇಕಲ್‌ ತಾಲ್ಲೂಕಿನ ಚಂದಾಪುರದ ಎಚ್‌.ಎಸ್. ನಾರಾಯಣಸ್ವಾಮಿ ಚಿತ್ರಕ್ಕೆ ಸುರಿದಿರುವ ಬಂಡವಾಳ ಸುಮಾರು 1.75 ಕೋಟಿ ರೂ. ಹಾಸ್ಯ ನಟ ವಿಶ್ವ ಹೂ ಮಾರುವ ಯುವಕನ ಪಾತ್ರದಲ್ಲಿ ನಗಿಸುವ ಹೊಣೆ ಹೊತ್ತಿದ್ದಾರಂತೆ.

ಜನವರಿಯಲ್ಲಿ ಸೆನ್ಸಾರ್‌ ಪ್ರಮಾಣಪತ್ರ ಪಡೆದ ಬಳಿಕ ಬಿಡುಗಡೆಯ ದಿನಾಂಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಚಿತ್ರತಂಡದ ಉದ್ದೇಶ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.