ADVERTISEMENT

ಜನಗಣದ ರಂಗಪ್ರಯೋಗ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಬೀದಿ ನಾಟಕ. ಕೆಲ ವರ್ಷಗಳ ಹಿಂದೆ ಹೊಸ ಆಲೋಚನೆಗಳಿಂದ ಹುಟ್ಟಿಕೊಂಡ ಹೊಸ ಮಾಧ್ಯಮ. ಇದೊಂದು ಹೊಸ ಬಗೆಯ ರಂಗ ಪ್ರಯೋಗ. ವಿಶೇಷ, ವಿನೂತನ, ವಿಚಾರ ಎಲ್ಲವೂ ಇದರಲ್ಲಿದೆ.ಇತ್ತೀಚಿನ ದಿನಗಳಲ್ಲಿ ಬೀದಿ ನಾಟಕಗಳು ಕಾಲೇಜು ವಿದ್ಯಾರ್ಥಿಗಳನ್ನು, ಯುವಕ- ಯುವತಿಯರನ್ನು ಸೆಳೆಯುವಲ್ಲಿ ಪ್ರಯೋಗ ಯಶಸ್ವಿಯಾಗುತ್ತಿವೆ. ಈ ನಿಟ್ಟಿನಲ್ಲಿ ಅನೇಕ ತಂಡಗಳು ಹುಟ್ಟಿಕೊಂಡಿವೆ.

ಕಾಲಕ್ರಮೇಣ ಈ ನಾಟಕಗಳು ವಾಸ್ತವಕ್ಕೆ ಹತ್ತಿರವಾಗುತ್ತಿವೆ. ಹೀಗಾಗಿ ವಿಷಯ ಹಾಗೂ ನಾಟಕದ ಸಂಭಾಷಣೆಗಳು ತೀರಾ ಸಹಜ ಎನಿಸಿವೆ. ಇದೇ ಎಳೆಯನ್ನು ಇಟ್ಟುಕೊಂಡು ರಾಷ್ಟ್ರೀಯ ರಂಗ ವೇದಿಕೆ ‘ವಂದೇ ಮಾತರಂ ಟ್ರಸ್ಟ್’ ಜನಗಣ ತಂಡ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಚರ್ಚೆಗೆ ಗ್ರಾಸವಾಗುವ ಸಂಗತಿಗಳು, ಪ್ರಸ್ತುತ ರಾಜಕೀಯ, ವಾಸ್ತವ ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ‘ಬೀದಿ ಬಿಂಬ ರಂಗದ ತುಂಬ’ ಎಂಬ ಬೀದಿ ನಾಟಕ ಪ್ರದರ್ಶನ ನೀಡಲಿದೆ.

ಈ ನಾಟಕ ಪ್ರದರ್ಶನ ಚರ್ಚೆಗೆ ಅವಕಾಶ ಕೊಡಲಿದ್ದು, ವಿವಿಧ ಕ್ಷೇತ್ರದ ಅನುಭವಿಗಳು ನಾಟಕವನ್ನು ನೋಡಿ ಸಲಹೆ, ಸೂಚನೆಗಳನ್ನು ನೀಡಬಹುದು. ಮುಂದಿನ ದಿನಗಳಲ್ಲಿ ಈ ಪ್ರಾಯೋಗಿಕ ಪ್ರದರ್ಶನ ಉಪಯುಕ್ತವಾಗುತ್ತದೆ ಎನ್ನುತ್ತಾರೆ ಜನಗಣ ನಿರ್ದೇಶಕ ಪವನ್ ಪ್ರಸಾದ್ ಶರ್ಮ.

ಖ್ಯಾತ ರಂಗತಜ್ಞ ನಾ. ಶ್ರೀನಿವಾಸ್ ಜನಗಣದ ನಾಯಕರು. ಬೀದಿ ನಾಟಕಗಳ ಉತ್ಸವ, ರಂಗ ಪ್ರದರ್ಶನಗಳು, ಅಂತರ ಕ್ರಿಯಾತ್ಮಕ ರಂಗಭೂಮಿ ಕಾರ್ಯಾಗಾರ ಈ ತಂಡದ ಮುಖ್ಯ ಉದ್ದೇಶ. ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಈ ತಂಡ ಕಾರ್ಯ ನಿರ್ವಹಿಸುತ್ತಿದೆ. ಮೈಸೂರಿನಲ್ಲಿ ಯುವಕರಲ್ಲಿ ನಾಟಕದ ಅಭಿರುಚಿ ಹುಟ್ಟಿಸುವ ನಿಟ್ಟಿನಲ್ಲಿ ‘ಮೈಸೂರು ನಾಟಕ ಶಾಲೆ’ ಆರಂಭಿಸಿದೆ.

ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ನಡೆಸಿ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಬೀದಿ ನಾಟಕಗಳನ್ನು ಪ್ರದರ್ಶಿಸುವ ಗುರಿ ಹೊಂದಿದೆ.

ಬೀದಿ ಬಿಂಬ ರಂಗದ ತುಂಬ...
ಜನಗಣ ತಂಡ: ಭಾನುವಾರ ‘ಬೀದಿ ಬಿಂಬ ರಂಗದ ತುಂಬ’ (ರಚನೆ: ಪಿ.ಪಿ. ಶರ್ಮ) ನಾಟಕದ ಪ್ರಾಯೋಗಿಕ ಪ್ರದರ್ಶನ. ಅತಿಥಿಗಳು: ಮಾಸ್ಟರ್ ಹಿರಣ್ಣಯ್ಯ, ರವಿ ಬೆಳಗೆರೆ. ಸ್ಥಳ: ಕೆಎಚ್ ಕಲಾಸೌಧ, ಹನುಮಂತನಗರ. ಸಂಜೆ 6.30. ಉಚಿತ ಪಾಸ್‌ಗಳಿಗೆ 89718 73456, 97429 25978.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.