`ಡಾನ್ಸ್; ಜೀವದ ಒಲವು. ಖುಷಿ, ನಗು, ನೋವು ಎಲ್ಲವನ್ನೂ ಅಭಿವ್ಯಕ್ತಪಡಿಸುವ ಅಪೂರ್ವ ಕಲೆ. ಸಂಗೀತಕ್ಕೆ ಲಯಬದ್ಧವಾಗಿ ದೇಹವನ್ನು ಬಾಗಿಸುವ, ಆಂಗಿಕ ಅಭಿನಯ, ಭಾವನೆಗಳನ್ನು ನಿರೂಪಿಸುವ ಮೂಲಕ ಎಲ್ಲರನ್ನೂ ಮನಸೆಳೆಯುವ ಈ ನೃತ್ಯ ಎನ್ನುವ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದು ಒಮ್ಮೆ ಒಲಿದರೆ ಅದರೊಂದಿಗಿನ ಒಡನಾಟ ಅಮಿತಾನಂದ ನೀಡುವಂಥದ್ದು.....~ ಪುಟ್ಟ ಪೋರಿಯ ಬಾಯಲ್ಲಿ ನೃತ್ಯದ ಬಗ್ಗೆ ಹೊರಬಿದ್ದ ಮಾತುಗಳಿವು...
ಆಗತಾನೇ ತನ್ನ ಸರದಿಯ ನೃತ್ಯ ಮುಗಿಸಿ ವೇದಿಕೆಯಿಂದಿಳಿದ ಸಾನಿಯಾಳ ಮುಗ್ಧ ಧ್ವನಿಯಲ್ಲಿ ನೃತ್ಯದ ಬಗೆಗಿದ್ದ ಶ್ರದ್ಧೆ ಹಾಗೂ ಪ್ರೀತಿ ಎರಡನ್ನೂ ತೋರುತ್ತಿತ್ತು.
`ಮಂತ್ರಿ ಡಾನ್ಸೋತ್ಸವ-2~ದ ವೇದಿಕೆಯದು. ಅರಮನೆ ಮೈದಾನದ ಪ್ರಿನ್ಸೆಸ್ ಅಕಾಡೆಮಿಯಲ್ಲಿ ಶನಿವಾರ ಸಂಜೆ ಸದ್ದು-ಗದ್ದಲ ತುಸು ಹೆಚ್ಚಾಗೇ ಇತ್ತು. ಮೋಡ ಮುಸುಕಿದ್ದರೂ ನಕ್ಷತ್ರಗಳು ಭುವಿಯ ಈ ನೃತ್ಯ ತಾರೆಗಳನ್ನು ನೋಡಲು ಆಗಾಗ ಅಲ್ಲೊಂದು ಇಲ್ಲೊಂದು ಇಣುಕುತ್ತಿದ್ದವು. ಮಂತ್ರಿ ಡೆವಲಪರ್ಸ್ ತನ್ನ ಬಳಗದ ನಿವಾಸಿಗಳು ಹಾಗೂ ನೌಕರರಿಗಾಗಿ ನಡೆಸುವ ನೃತ್ಯಸ್ಪರ್ಧೆಯ ಅಂತಿಮ ಸುತ್ತಿಗೆ ಸಾಕ್ಷಿಯಾಗಿತ್ತು ಆ ಡಾನ್ಸ್ಸಂಜೆ.
ವಿವಿಧ ಪೋಷಾಕು ಧಾರಿಗಳಾಗಿ ಚಿಣ್ಣರು ನೃತ್ಯದ ಸೊಬಗನ್ನು ತೋರಲು ಅಲ್ಲಿ ನೆರೆದಿದ್ದರು. ವೇದಿಕೆಯ ಮುಂಭಾಗದ ಎಡ-ಬಲ ಬದಿಯಲ್ಲಿ ತಮ್ಮ ಮಕ್ಕಳು ವೇದಿಕೆಯಲ್ಲಿ ಕಾಣಿಸಿಕೊಂಡೊಡನೆಯೇ ಅವರೊಂದಿಗೆ ತಾವೂ ಒಬ್ಬರಾಗಿ ಡಾನ್ಸ್ಗೆ ಶುರುವಿಟ್ಟುಕೊಳ್ಳುತ್ತಿದ್ದ ಪೋಷಕರ ಚಿತ್ರಣ ಅಲ್ಲಿ ಸಾಮಾನ್ಯವಾಗಿತ್ತು.
ಸ್ಪರ್ಧೆ ಎಂದ ಮೇಲೆ ತೀರ್ಪುಗಾರರಿಲ್ಲದಿದ್ದರೆ ಹೇಗೆ? ಉತ್ಸವದ ಕೇಂದ್ರಬಿಂದುವಾಗಿದ್ದವರೂ ಅವರೇ... ಡಾನ್ಸ್ ಇಂಡಿಯಾ ಡಾನ್ಸ್ (2011) ಸ್ಪರ್ಧೆಯ ವಿಜೇತ ಸಲ್ಮಾನ್ ಖಾನ್, ಭರತನಾಟ್ಯ ಕಲಾವಿದೆ ಪದ್ಮಿನಿ ರವಿ, ತಾರಾಂತಿಸ್ಮೋ ನೃತ್ಯ ಅಕಾಡೆಮಿಯ ನೃತ್ಯ ನಿರ್ದೇಶಕಿ ದೀಪ್ತಿ ಶೆಟ್ಟಿ ಸ್ಪರ್ಧಿಗಳ ಹೆಜ್ಜೆ ನಾದಕ್ಕೆ ಬೆಂಬಲ ನೀಡಲು ಅಲ್ಲಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ, `ಎರಡು ವರ್ಷಗಳಿಂದ ಏರ್ಪಡಿಸುತ್ತಿರುವ ಡಾನ್ಸೋತ್ಸವ ನಮ್ಮ ಹೆಮ್ಮೆಯ ಕುರುಹು. 13ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಮಂತ್ರಿ ಡೆವಲಪರ್ಸ್ಗೆ ಎಲ್ಲಾ ಸ್ಪರ್ಧಿಗಳು, ಪೋಷಕರು ಹಾಗೂ ಗ್ರಾಹಕರ ಉತ್ಸಾಹವೇ ನಮಗೆ ಶುಭ ಹಾರೈಕೆ ಇದ್ದಂತೆ~ ಎನ್ನುತ್ತಾ ತುಂಬು ಸಭೆಗೆ ಕೃತಜ್ಞತೆ ಸಲ್ಲಿಸಿದರು ಮಂತ್ರಿ ಡೆವಲಪರ್ಸ್ನ ಮಾರ್ಕೆಟಿಂಗ್ ನಿರ್ದೇಶಕ ಸ್ನೇಹಲ್ ಮಂತ್ರಿ.
`ಮಕ್ಕಳ ನೃತ್ಯ ನೋಡಿ ಹೃದಯ ತುಂಬಿ ಬಂತು. ಪ್ರತಿ ಮಕ್ಕಳು ನೃತ್ಯದ ಗಣಿಗಳಂತೆ ಕಾಣುತ್ತಿದ್ದಾರೆ. ನನ್ನ ಬಾಲ್ಯದ ನೆನಪಿನ ಬುತ್ತಿಯನ್ನು ಈ ಕ್ಷಣ ಬಿಚ್ಚುಡುವಂತೆ ಮಾಡಿತು. ಇವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿರುವುದು ಸಂತಸದ ಸಂಗತಿ. ನಮ್ಮ ನಡುವೆಯೇ ಇರುವ ಇಂತಹ ಪ್ರತಿಭೆಯನ್ನು ಗುರುತಿಸುವ ಕಾರ್ಯ ನಡೆಯಬೇಕು~ ಎನ್ನುತ್ತಾ ನುಗು ಸೂಸಿದ ಪದ್ಮಿನಿ ರವಿ ಅವರ ಮಾತಿಗೆ ದೀಪ್ತಿ ಶೆಟ್ಟಿ ಹಾಗೂ ಸಲ್ಮಾನ್ ಖಾನ್ ದನಿಗೂಡಿಸಿದರು.
ಸ್ಪರ್ಧೆಯು ಸೋಲೊ (ಮಕ್ಕಳು), ಸೋಲೊ (ಯುವಕರಿಗೆ) ಹಾಗೂ ಸಮೂಹ ನೃತ್ಯ ಹೀಗೆ ವಿವಿಧ ಹಂತದಲ್ಲಿ ನಡೆಯಿತು.
ಸೋಲೊ (ಮಕ್ಕಳ) ಸ್ಪರ್ಧೆಯಲ್ಲಿ ಆದ್ಯ (ಪ್ರಥಮ), ತ್ರಿಶ್ನಾ ನಾಗ್ಪಾಲ್ (ದ್ವಿತೀಯ) ಹಾಗೂ ಮೃಂಗಾಲ್ ಶರ್ಮ (ತೃತೀಯ) ಬಹುಮಾನ ಪಡೆದರೆ, ಸೋಲೊ (ಯುವಕರಿಗೆ) ಸ್ಪರ್ಧೆಯಲ್ಲಿ ಪುನೀತ್ ದೋಷಿ (ಪ್ರಥಮ), ಪ್ರಿಯಾ ಪಾಟೀಲ್ (ದ್ವಿತೀಯ), ರಮ್ಯಾ. ಎಸ್ (ತೃತೀಯ) ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಸಮೂಹ ನೃತ್ಯದಲ್ಲಿ ಸಂದರೀಸ್ ತಂಡ (ಪ್ರಥಮ), ಮಿರ್ಚಿ ಮಾಮ್ಸ (ದ್ವಿತೀಯ) ಹಾಗೂ ದಿ ಡಾನ್ಸ್ ಅಂಡ್ ದಿ ಜಂಗಲ್ ಬೆಲ್ಲೆಸ್ ತಂಡ (ತೃತೀಯ) ಬಹುಮಾನ ಪಡೆದವು.
ವಿಜೇತರಿಗೆ ಕ್ರಮವಾಗಿ 60 ಸಾವಿರ, 40 ಸಾವಿರ, 20 ಸಾವಿರ ನಗದನ್ನು ಬಹುಮಾನವಾಗಿ ನೀಡಲಾಯಿತು. ಬಹುಮಾನ ಪಡೆದ ಖುಷಿಗಿಂತ, ನೃತ್ಯಕ್ಕೆ ಸಿಕ್ಕ ಪ್ರೋತ್ಸಾಹದ ಸಂತೋಷವೇ ಸ್ಪರ್ಧಿಗಳ ಮುಖದಲ್ಲಿ ತುಂಬಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.